ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡು ಬಡತನದ ಬೇಗೆಯಲ್ಲಿ ಬೆಂದಿದ್ದೆ. ನಂತರ ಸ್ವಂತ ಸ್ಥಳ ಬಾಗೇಪಲ್ಲಿಯನ್ನು ಬಿಟ್ಟು ಬೆಂಗಳೂರು ಸೇರಿದೆ.
ಕಾಲೇಜಿನಲ್ಲಿ ವ್ಯಾಸಂಗ ಮಾಡುವಾಗ (1972ರಲ್ಲಿ) ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್) ಸೇರಿದ ಮೇಲೆ ರಾಜ್ಯಮಟ್ಟದ ಶಿಬಿರಕ್ಕೆ ಆಯ್ಕೆಯಾದಾಗ ಸಾಂಸ್ಕೃತಿಕ ನಗರಿ ಮೈಸೂರನ್ನು ನೋಡುವ ಸೌಭಾಗ್ಯ ನನ್ನದಾಯಿತು. ಶಿಬಿರವನ್ನು ಕಾಮನಕೊಪ್ಪಲು ಎಂಬ ಹಳ್ಳಿಯ ಹತ್ತಿರದ ‘ಆಲ್ ಇಂಡಿಯನ್ ರೈಟರ್ಸ್ ಹೋಂ’ ಎಂಬ ಅದ್ಭುತ ಕಟ್ಟಡದಲ್ಲಿ ಏರ್ಪಡಿಸಿದ್ದರು. ಆ ಬಂಗಲೆ ಇದ್ದ ಪ್ರದೇಶದ ಹೆಸರು ‘ಅಲೋಕ’.
ನನಗೆ, ಈ ಲೋಕವಲ್ಲದ, ಅಲೋಕನಾಥನಿಲ್ಲದ, ಸದಾ ನನ್ನ ಅವಲೋಕನದಲ್ಲಿದ್ದ ‘ಅಲೋಕ’ ಎನ್ನುವ ಹೆಸರು ಮನ ತುಂಬಿತ್ತು. ಜೀವನದಲ್ಲಿ ಮೊದಲ ಬಾರಿ ಆನಂದವೆಂಬ ಪದದ ಅರ್ಥವನ್ನು ಸವಿದಿದ್ದೂ ಇದೇ ಶಬ್ದದಿಂದ.
ನಾನು ರೋಮ್, ಲಂಡನ್, ಪ್ಯಾರಿಸ್, ಸ್ವಿಟ್ಜರ್ಲೆಂಡ್, ಅಮಸ್ಟರ್ಡಂನಲ್ಲಿ ತಿರುಗಾಡಿದಾಗಲೂ ಅಲೋಕ ಹೆಸರಿನಿಂದ ಸಿಕ್ಕಿದ ಆನಂದ ಸಿಕ್ಕಿರಲಿಲ್ಲ. ಆ ಹಸಿರು ನೆನಪನ್ನು ಉಸಿರಾಗಿಸಿಕೊಳ್ಳಲು ನನ್ನ ಮನೆಗೆ ಅಲೋಕ ಎಂದು ಹೆಸರಿಟ್ಟೆ.
- ಬಾಗೇಪಲ್ಲಿ ಕೃಷ್ಣಮೂರ್ತಿ, ಹೊಸಕೋಟೆ