ಬೆಂಗಳೂರು: ಓಲಾ ಹಾಗೂ ಉಬರ್ ಕಂಪೆನಿಗಳ ವಿರುದ್ಧ ಚಾಲಕರು ಮತ್ತು ಮಾಲೀಕರು ನಡೆಸುತ್ತಿರುವ ಅಹೋರಾತ್ರಿ ಸತ್ಯಾಗ್ರಹವು ಮುಂದುವರಿದಿದೆ. ಸ್ವಾತಂತ್ರ್ಯ ಉದ್ಯಾನದಲ್ಲಿ ಹಮ್ಮಿಕೊಂಡಿರುವ ಸತ್ಯಾಗ್ರಹ ಸ್ಥಳಕ್ಕೆ ಬಂದಿದ್ದ ಕನ್ನಡಪರ ಸಂಘಟನೆಗಳ ಮುಖಂಡರು, ಹೋರಾಟಕ್ಕೆ ಬೆಂಬಲ ಸೂಚಿಸಿದರು.
‘ಕಂಪೆನಿಗಳ ವರ್ತನೆ ವಿರುದ್ಧ ಟ್ಯಾಕ್ಸಿ ಸೇವೆ ಸ್ಥಗಿತಗೊಳಿಸಿ ಫೆ. 21ರಿಂದ ಪ್ರತಿಭಟನೆ ಮಾಡುತ್ತಿದ್ದೇವೆ. ನಮ್ಮ ಹೋರಾಟಕ್ಕೆ ರಾಜ್ಯ ಸರ್ಕಾರವು ಸಹಕಾರ ನೀಡುತ್ತಿಲ್ಲ. ಇದರಿಂದ ಬೇಡಿಕೆಗಳನ್ನು ಈಡೇರಿಸಲು ಕಂಪೆನಿಯವರು ಹಿಂದೇಟು ಹಾಕುತ್ತಿದ್ದಾರೆ’ ಎಂದು ಪ್ರತಿಭಟನಾನಿರತರು ದೂರಿದರು.
‘ಸದ್ಯ ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದೇವೆ. ಸಂಪಾದನೆಯೇ ಇಲ್ಲದಿದ್ದರಿಂದ ಕುಟುಂಬದ ಸದಸ್ಯರು ಊಟಕ್ಕೂ ಪರದಾಡುತ್ತಿದ್ದಾರೆ. ಬೇಗನೇ ನಮಗೆ ನ್ಯಾಯ ಸಿಗಬೇಕು. ಇಲ್ಲದಿದ್ದರೇ ಗಂಭೀರ ಸ್ವರೂಪದ ಹೋರಾಟ ಮಾಡುತ್ತೇವೆ’ ಎಂದು ಹೇಳಿದರು.
ಈ ಪ್ರತಿಭಟನೆಯಿಂದಾಗಿ ಎರಡೂ ಕಂಪೆನಿಯ ಆ್ಯಪ್ಗಳ ಕಾರ್ಯ ಸ್ಥಗಿತಗೊಂಡಿದ್ದು, ಇದರಿಂದ ನಗರದಲ್ಲಿ ಟ್ಯಾಕ್ಸಿ ಸೇವೆ ದೊರೆಯುತ್ತಿಲ್ಲ. ಗ್ರಾಹಕರಿಗೂ ತೊಂದರೆಯಾಗಿದೆ. ಜತೆಗೆ ಪ್ರತಿಭಟನೆ ಬಗ್ಗೆ ಓಲಾ ಹಾಗೂ ಉಬರ್ ಕಂಪೆನಿಯ ಪ್ರತಿನಿಧಿಗಳು ಯಾವುದೇ ಪ್ರತಿಕ್ರಿಯೆಯನ್ನೂ ನೀಡುತ್ತಿಲ್ಲ.