ಬೆಂಗಳೂರು: 2016ನೇ ಸಾಲಿನ ‘ಬರಗೂರು ಪ್ರಶಸ್ತಿ’ಗೆ ಸಂಗೀತ ನಿರ್ದೇಶಕ ಹಂಸಲೇಖ ಮತ್ತು ಲೇಖಕಿ ಬಾನು ಮುಷ್ತಾಕ್ ಭಾಜನರಾಗಿದ್ದಾರೆ.
ಸಾಹಿತ್ಯ ಮತ್ತು ಸಿನಿಮಾ ಕ್ಷೇತ್ರದ ತಲಾ ಒಬ್ಬರಿಗೆ ಪ್ರತಿವರ್ಷ ‘ನಾಡೋಜ ಡಾ. ಬರಗೂರು ಪ್ರತಿಷ್ಠಾನ’ ನೀಡುವ ಈ ಪ್ರಶಸ್ತಿ ₹25 ಸಾವಿರ ನಗದು ಮತ್ತು ಫಲಕ ಒಳಗೊಂಡಿದೆ.
ಬರಗೂರು ಪುಸ್ತಕ ಪ್ರಶಸ್ತಿಗೆ ಚಿನ್ನಸ್ವಾಮಿ ಸೋಸಲೆ ಅವರ ‘ಕರ್ನಾಟಕ ಸಮಗ್ರ ದಲಿತ ಚರಿತ್ರೆ’ ಕೃತಿ ಮತ್ತು ಲತಾಗುತ್ತಿ ಅವರ ‘ಕರಿನೀರು’ ಕಾದಂಬರಿ ಆಯ್ಕೆಯಾಗಿವೆ. ಪುಸ್ತಕ ಪ್ರಶಸ್ತಿಯು ತಲಾ ₹10 ಸಾವಿರ ನಗದು ಮತ್ತು ಫಲಕವನ್ನು ಒಳಗೊಂಡಿದೆ. ಇದೇ 11ರಂದು ತುಮಕೂರಿನಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.