ಸಿಂದಗಿ: ‘ಸೂಫಿ ಸಂತರು, ದಾರ್ಶನಿಕರು, ಸಂತ–ಮಹಾಂತರು, ಆರೂಢರು ಯಾವುದೇ ಜಾತಿ, ಮತ, ಪಂಥಗಳಿಗೆ ಸೀಮಿತವಾಗಿಲ್ಲ. ಅವರು ಇಡೀ ಮನುಕುಲದ ಸರ್ವಶ್ರೇಷ್ಠ ಆಸ್ತಿ. ವಿಶ್ವದ ಎಲ್ಲ ಧರ್ಮಗಳ ಸಾರ ಒಂದೇ. ಅದುವೇ ಮನುಕುಲದ ಉದ್ಧಾರವೇ ಆಗಿದೆ’ ಎಂದು ಮಹಾಲಿಂಗಪುರದ ಇಬ್ರಾಹಿಂ ಸುತಾರ ಅಭಿಪ್ರಾಯಪಟ್ಟರು.
ನಗರದ ಸೂಫಿ ಸಂತ ಹಜರತ್ ಖಾಜಾ ಹಾಜಿ ಸೈಫನ್ ಮುಲ್ಕ್ ಅವರ ಜಾತ್ರಾ ಮಹೋತ್ಸವದ ನಿಮಿತ್ತ ಹಮ್ಮಿ ಕೊಂಡ ಸರ್ವಧರ್ಮ ಸಮಾವೇಶದಲ್ಲಿ ಮುಖ್ಯ ಉಪನ್ಯಾಸಕರಾಗಿ ಮಾತನಾಡಿದರು.
ವಿಜ್ಞಾನದ ಅನ್ವೇಷಣೆಗಳು ನಡೆದು ಅವು ಯಶಸ್ಸು ಹಂತ ತಲುಪಲು ವಿಫಲವಾದಾಗ ಅಧ್ಯಾತ್ಮದ ಪ್ರವೇಶ ಅನಿವಾರ್ಯವಾಗುತ್ತದೆ. ಧರ್ಮ, ಸಮಾಜ, ದೇಶ ಇವುಗಳ ಉಳಿವಿಗಾಗಿ ಸರ್ವಧರ್ಮ ಸಮಾವೇಶಗಳು ಅಗತ್ಯ ಎಂದರು.
ಶಾಸಕ ರಮೇಶ ಭೂಸನೂರ ಸಮಾವೇಶವನ್ನು ಉದ್ಘಾಟಿಸಿ, ‘ಇಂದು ದೇಶದಲ್ಲಿ ಕೋಮು, ಮತೀಯ ಮನೋಭಾವನೆಗಳು ಜನರಲ್ಲಿ ಹೆಚ್ಚುತ್ತಿ ರುವುದು ಅತ್ಯಂತ ದುರದೃಷ್ಟಕರ ಸಂಗತಿ ಎಂದು’ ವಿಷಾದಿಸಿದರು. ಪ್ರತಿಯೊಬ್ಬ ವ್ಯಕ್ತಿ ಸಾಮರಸ್ಯ, ಸಹಬಾಳ್ವೆಯಿಂದ ಬದುಕು ಸಾಗಿಸಿ ಮಾನವ ಧರ್ಮ ಮೆರೆಯಬೇಕು ಎಂದು ಕೇಳಿಕೊಂಡರು.
ಜಿ.ಪಿ.ಪೋರವಾಲ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಉಮೇಶ ಕೋಳೆಕರ ಮಾತನಾಡಿ, ಜಾತೀಯತೆ ಯಿಂದಾಗಿ ವ್ಯಕ್ತಿ ಮನಸ್ಸುಗಳು ಕುಬ್ಜಗೊಳ್ಳುತ್ತಿವೆ. ಭಾವೈಕ್ಯ ಇಂದಿನ ಅಗತ್ಯವಾಗಿದೆ ಎಂದರು. ಮಹಾದೇವಪ್ಪ ಗಾಯಕವಾಡ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು.
ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಅಶೋಕ ಗಾಯಕವಾಡ ಸ್ವಾಗತಿಸಿದರು. ಪ್ರೊ.ಎ. ಆರ್.ಹೆಗ್ಗನದೊಡ್ಡಿ ನಿರೂಪಿಸಿದರು. ರಾಘವೇಂದ್ರ ಗಾಯಕವಾಡ ವಂದಿಸಿದರು.
ಮೆರವಣಿಗೆ: ಜಾತ್ರಾ ಮಹೋತ್ಸವದ ಅಂಗವಾಗಿ ಮಹಾದೇವಪ್ಪ ಗಾಯಕ ವಾಡ ಅವರ ಮನೆಯಿಂದ ಗಂಧದ ಮೆರವಣಿಗೆ ನಡೆಯಿತು. ಮೆರವಣಿಗೆ ಯಲ್ಲಿ ಹಿಂದೂ– ಮುಸ್ಲಿಂ ಬಾಂಧವರು ಪಾಲ್ಗೊಂಡಿದ್ದರು.