ಚನ್ನಪಟ್ಟಣ: ಸಮಾಜದಲ್ಲಿ ತಾಂಡವವಾಡುತ್ತಿರುವ ಅಕ್ರಮ ತೊಳೆದು ಹಾಕಲು ಶುದ್ಧ ಮನಸ್ಸಿನಿಂದ ಮಾತ್ರ ಸಾಧ್ಯ ಎಂದು ಹಾವೇರಿ ಜಿಲ್ಲೆ ಮಹಾಶರಣ ಅಂಬಿಗರ ಚೌಡಯ್ಯ ಮಠದ ಅಧ್ಯಕ್ಷ ಶಾಂತ ಭೀಷ್ಮ ಚೌಡಯ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಕರಿಯಪ್ಪನದೊಡ್ಡಿಯಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಪದ್ಮಾವತಿ ವೆಂಕಟೇಶ್ವರ ದೇವಾಲಯ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಪರಮಾತ್ಮನ ನಿರಂತರ ಧ್ಯಾನದಿಂದ ಮಾತ್ರ ಶುದ್ಧ ಮನಸ್ಸು ಹೊಂದಲು ಸಾಧ್ಯ. ಸಮಾಜಕ್ಕೆ ಚಿರಕಾಲ ನೆನಪಿನಲ್ಲಿ ಉಳಿಯುವಂತಹ ಕೊಡುಗೆ ನೀಡಲು ಸಾಧ್ಯ ಎಂದರು.
ಮನುಷ್ಯನು ತನ್ನ ಜೀವನ ಸಾಗಿಸುವ ಧಾವಂತದಲ್ಲಿ ಸಮಾಜದ ಏರುಪೇರು ಎದುರಿಸಬೇಕಾಗಿರುವುದು ಸಹಜ. ಸಮಾಜ ಅವನತಿಯ ಹಾದಿಯತ್ತ ವಾಲುವುದನ್ನು ತಡೆಯುವುದಕ್ಕೆ ಅದೇ ಮನುಷ್ಯನಿಂದ ಮಾತ್ರ ಸಾಧ್ಯ. ಅಂತಹ ಗುಣ, ಧ್ಯಾನ, ಭಕ್ತಿ, ನಿಸ್ವಾರ್ಥ ವ್ಯಕ್ತಿತ್ವವನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು ಎಂದರು.
ಗಂಗಾಮತಸ್ಥರ ಅಸ್ತಿತ್ವ ಹಾಗೂ ಅದರ ಸಮಾಜಮುಖಿ ಕಾರ್ಯಗಳು ಇಂದಿಗೂ ಪ್ರಸ್ತುತ. ನಿಜಶರಣ ಅಂಬಿಗರ ಚೌಡಯ್ಯ ವಚನ ಸಾಹಿತ್ಯದ ಮೂಲಕ ತಮ್ಮ ಚಿಂತನೆಯನ್ನು ಬಳಸಿ ಸ್ವಾಸ್ಥ ಸಮಾಜದ ನಿರ್ಮಾಣಕ್ಕೆ ನೀಡಿರುವ ಕೊಡುಗೆ ಅನನ್ಯವಾಗಿದೆ ಎಂದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಚ್.ರಾಜಣ್ಣ ಮಾತನಾಡಿ, ದೇವಸ್ಥಾನ ಮನುಷ್ಯನಿಗೆ ಮನಶಾಂತಿ ನೀಡುವಂತಹ ತಾಣಗಳು. ಇಂತಹ ಪುಣ್ಯದ ಕೆಲಸಗಳು ಹೆಚ್ಚುಹೆಚ್ಚು ನಡೆಯಬೇಕು. ಜನರು ಏನನ್ನು ಬಿಟ್ಟರೂ ನಮ್ಮ ಸಂಸ್ಕೃತಿ, ಧರ್ಮ, ಭಕ್ತಿಯನ್ನು ಮಾತ್ರ ಬಿಡುವುದಿಲ್ಲ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ವೀಣಾಚಂದ್ರು ಮಾತನಾಡಿ, ಕರಿಯಪ್ಪನದೊಡ್ಡಿಯ ದೇಗುಲಕ್ಕೆ ತನ್ನದೆ ಆದ ಐತಿಹ್ಯ ಹಾಗೂ ಮಹಿಮೆ ಇದೆ. ದೇವಸ್ಥಾನವನ್ನು ಮತ್ತಷ್ಟು ಅಭಿವೃದ್ಧಿ ಮಾಡಿದರೆ ಇದೊಂದು ಪುಣ್ಯ ಕ್ಷೇತ್ರ ಆಗುವುದರಲ್ಲಿ ಅನುಮಾನವಿಲ್ಲ ಎಂದರು.
ಗಂಗಾಮತಸ್ಥರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಇ.ಬಿ.ಈಶ್ವರ್ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಎ.ಸಿ.ಚಂದ್ರು, ಗಂಗಾಮತಸ್ಥರ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಈಶ್ವರ್, ಶಿಕ್ಷಕ ಗಂಗಾಧರ್, ಶಿವಣ್ಣ, ರಾಜಣ್ಣ, ರಾಜು, ವೆಂಕಟೇಶ್, ಮೋಳೆದೊಡ್ಡಿ ಬೊಮ್ಮಯ್ಯ, ಪದ್ಮಾಕೃಷ್ಣಯ್ಯ, ಕಾಂಗ್ರೆಸ್ ಮುಖಂಡರಾದ ಡಿ.ಕೆ.ಕಾಂತರಾಜು, ಹನಿಯೂರು ಕಾಂತರಾಜು ಇತರರು ಭಾಗವಹಿಸಿದ್ದರು. ಶಿಕ್ಷಕ ಮಹದೇವು ನಿರೂಪಿಸಿದರು, ಗಂಗರಾಜು ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.