ಶಿವಮೊಗ್ಗ: ‘ಜಿಲ್ಲೆಯಲ್ಲಿ ಲಿಡ್ಕರ್ ನೇರ ಮಾರಾಟ ಮಳಿಗೆ ಹೊಂದುವ ಮೂಲಕ ಸಾಂಪ್ರದಾಯಿಕ ಚಮ್ಮಾರಿಕೆ ಮಾಡುವವರಿಗೆ ಉತ್ತೇಜನ ನೀಡಲಾಗುತ್ತಿದೆ’ ಎಂದು ಲಿಡ್ಕರ್ ನಿಗಮದ ಅಧ್ಯಕ್ಷ ಓ.ಶಂಕರ್ ಹೇಳಿದರು.
ನಗರದ ನೆಹರೂ ರಸ್ತೆಯ ಬಸವ ಸದನ ವಾಣಿಜ್ಯ ಸಂಕೀರ್ಣದಲ್ಲಿ ಭಾನುವಾರ ಲಿಡ್ಕರ್ ಪಾದರಕ್ಷೆಯ ನೂತನ ಮಳಿಗೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಚಮ್ಮಾರಿಕೆಯಲ್ಲಿ ಆಸಕ್ತಿ ಇರುವವರಿಗೆ ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದಿಂದ ತರಬೇತಿ ನೀಡಲಾಗುತ್ತಿದೆ. ಅವರನ್ನು ಬೆಂಗಳೂರು, ಚೆನ್ನೈ ಹಾಗೂ ದೆಹಲಿಗೆ ತರಬೇತಿಗೆ ಕಳುಹಿಸಲಾಗುತ್ತಿದೆ. ಹೀಗೆ ತರಬೇತಿ ಪಡೆದ ಆಸಕ್ತರಿಗೆ ಉದ್ಯಮ ಸ್ಥಾಪಿಸಲು ಯಂತ್ರೋಪಕರಣ ಹಾಗೂ ಉದ್ಯಮ ನಡೆಸಲು ನಿಗಮದಿಂದ ನೆರವು ನೀಡಲಾಗುವುದು. ತಾಲ್ಲೂಕು ಮಟ್ಟದಲ್ಲಿ ₹ 1 ಲಕ್ಷ, ಜಿಲ್ಲಾ ಮಟ್ಟ ₹ 2 ಲಕ್ಷ ಹಾಗೂ ಮಹಾನಗರ ಪಾಲಿಕೆ ಮಟ್ಟದಲ್ಲಿ ₹ 3 ಲಕ್ಷ ಸಬ್ಸಿಡಿ ನೀಡಲಾಗುವುದು’ ಎಂದು ಮಾಹಿತಿ ನೀಡಿದರು.
‘ಈ ನವೀಕೃತ ಮಳಿಗೆಯಲ್ಲಿ ವಿವಿಧ ರೀತಿಯ ಶೂ, ಬೆಲ್ಟ್, ವ್ಯಾನಿಟಿ ಬ್ಯಾಗ್ ಸೇರಿದಂತೆ ವಿವಿಧ ರೀತಿಯ ವಿನ್ಯಾಸದ ಉತ್ಪನ್ನಗಳು ಲಭ್ಯವಿವೆ’ ಎಂದರು. ಮಳಿಗೆ ಉದ್ಘಾಟಿಸಿ ಮಾತನಾಡಿದ ಶಾಸಕ ಕೆ.ಬಿ.ಪ್ರಸನ್ನ ಕುಮಾರ್, ‘ಡಿ ಗ್ರೂಪ್ ನೌಕರರಿಗೆ ಹಾಗೂ ಸರ್ಕಾರಿ ಕಾರುಗಳ ಚಾಲಕರಿಗೆ ರಿಯಾಯಿತಿ ದರದಲ್ಲಿ ಲಿಡ್ಕರ್ ಉತ್ಪನ್ನ ನೀಡಲು ಉತ್ತೇಜನ ನೀಡಲಾಗುವುದು. ರಿಯಾಯಿತಿ ದರದ ಮಾರಾಟ ಸೌಲಭ್ಯಗಳ ಪ್ರಯೋಜನ ಪಡೆದುಕೊಳ್ಳಬೇಕು’ ಎಂದರು.
‘ಫೂಟ್ವೇರ್ ಕೋರ್ಟ್’ಗೆ ಚಿಂತನೆ: ‘ನಗರದ ಆಯ್ದ ಜಾಗದಲ್ಲಿ ಪಾದರಕ್ಷೆ ಮಾರಾಟ ಮಾಡಲು ಅನುಕೂಲ ಆಗುವಂತೆ ವ್ಯಾಪಾರಿಗಳಿಗೆ ‘ಫೂಟ್ವೇರ್ ಕೋರ್ಟ್’ ಆರಂಭಿಸಲು ಪಾಲಿಕೆ ಆಲೋಚಿಸಿದೆ. ಇದರಿಂದ ರಸ್ತೆ ಬದಿಯಲ್ಲಿ ಪಾದರಕ್ಷೆ ವ್ಯಾಪಾರ ಮಾಡುತ್ತಿರು
ವರಿಗೆ ಅನುಕೂಲವಾಗುತ್ತದೆ. ಮುಂದಿನ ಬಜೆಟ್ನಲ್ಲಿ ಇದಕ್ಕೆ ಅನುದಾನ ಮೀಸಲಿಡಲಾಗುವುದು’ ಎಂದು ಮೇಯರ್ ಏಳುಮಲೈ ತಿಳಿಸಿದರು.
ಲಿಡ್ಕರ್ನ ವ್ಯವಸ್ಥಾಪಕ ನಿರ್ದೇಶಕ ದಿವಾಕರ್ ಎಸ್.ಶರಣಪ್ಪ, ಮುಖ್ಯ ವ್ಯವಸ್ಥಾಪಕ ಕೆ.ತಿಪ್ಪೇಸ್ವಾಮಿ, ಲಿಡ್ಕರ್ ಮಾರಾಟ ಮಳಿಗೆ ಶಿವಮೊಗ್ಗ ವ್ಯವಸ್ಥಾಪಕ ಎಸ್.ಸದಾಶಿವ, ಪಾಲಿಕೆ ಸದಸ್ಯ ಗೋಪಾಲಕೃಷ್ಣ, ಹುಬ್ಬಳ್ಳಿ ವ್ಯವಸ್ಥಾಪಕ ರುದ್ರೇಶ್, ಬದರಿ ನಾರಾಯಣರಾವ್, ದಶರಥ ಎಖೇಳಿಕರ್, ವಾರ್ತಾಧಿಕಾರಿ ಹಿಮಂತ ರಾಜು ಇದ್ದರು.