ಹುಬ್ಬಳ್ಳಿ: ವಿದೇಶಿ ತಂಪು ಪಾನೀಯಗಳು ಆರೋಗ್ಯಕ್ಕೆ ಹಾನಿಕರವಾಗಿದ್ದು, ಅವುಗಳನ್ನು ಉಪಯೋಗಿಸುವುದನ್ನು ಬಿಟ್ಟು ದೇಸಿ ವಸ್ತುಗಳಾದ ಎಳನೀರು ಮತ್ತು ಮಜ್ಜಿಗೆಯನ್ನು ಬಳಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣ ವೇದಿಕೆ (ಪ್ರವೀಣಕುಮಾರ ಶೆಟ್ಟಿ) ಬಣದ ಕಾರ್ಯಕರ್ತರು ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು.
ವಿದೇಶಿ ತಂಪು ಪಾನೀಯಗಳನ್ನು ರಸ್ತೆಗೆ ಚೆಲ್ಲಿದ ಕಾರ್ಯಕರ್ತರು ಘೋಷಣೆಗಳನ್ನು ಕೂಗಿ ಸಾರ್ವಜನಿಕರಿಗೆ ಮಜ್ಜಿಗೆ ಮತ್ತು ಎಳನೀರನ್ನು ವಿತರಿಸುವ ಮೂಲಕ ಗಮನ ಸೆಳೆದರು.
‘ವಿದೇಶಿ ತಂಪು ಪಾನೀಯಗಳ ಮೇಲೆ ಯುವ ಜನಾಂಗಕ್ಕೆ ವ್ಯಾಮೋಹ ಹೆಚ್ಚಾಗಿದೆ. ಅಲ್ಲದೆ, ಪೋಷಕರು ಕಿರಾಣಿ ಮತ್ತು ಬೇಕರಿಗಳಲ್ಲಿ ಅದನ್ನೇ ಕೊಡಿಸುತ್ತಿದ್ದಾರೆ. ವಿದೇಶಿ ತಂಪು ಪಾನೀಯಬಳಸದಂತೆ ಮಕ್ಕಳಲ್ಲಿ ಹಿರಿಯರು ಮತ್ತು ಪೋಷಕರು ತಿಳಿ ಹೇಳಬೇಕು’ ಎಂದು ವೇದಿಕೆ ರಾಜ್ಯ ಘಟಕ ಅಧ್ಯಕ್ಷ ಪ್ರವೀಣಕುಮಾರ್ ಶೆಟ್ಟಿ ತಿಳಿಸಿದರು.
‘ವಿದೇಶಿ ಕಂಪೆನಿಗಳ ವಸ್ತುಗಳು ದೇಶಕ್ಕೆ ಸುಲಭವಾಗಿ ಬರುತ್ತಿವೆ. ಸೂಪರ್ ಮಾರುಕಟ್ಟೆಗಳಿಂದ ಹಿಡಿದು ಕಿರಾಣಿ ಅಂಗಡಿಯವರು ಅದಕ್ಕೆ ಮಣೆ ಹಾಕುತ್ತಿದ್ದಾರೆ. ವಿದೇಶಿ ವಸ್ತುಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸುವ ಮೂಲಕ ದೇಸಿ ವಸ್ತುಗಳಿಗೆ ಉತ್ತೇಜನ ನೀಡಬೇಕು’ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ವೇದಿಕೆಯ ಧಾರವಾಡ ಜಿಲ್ಲಾ ಘಟಕ ಅಧ್ಯಕ್ಷ ಮಂಜುನಾಥ ಲೂತಿಮಠ ಮತ್ತು ಇತರರು ಇದ್ದರು. ಪ್ರತಿಭಟನೆ ಬಳಿಕ ಚನ್ನಮ್ಮ ವೃತ್ತಕ್ಕೆ ತೆರಳಿದ ಕಾರ್ಯಕರ್ತರು ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.