ಧಾರವಾಡ: ‘ದೇಶ ಹಾಗೂ ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಮಹಿಳೆಯರ ಕೊಡುಗೆ ಅಪಾರ’ ಎಂದು ಹೈಕೋರ್ಟ್ ನ್ಯಾಯಮೂರ್ತಿ ಎಲ್.ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.
ಇಲ್ಲಿನ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ್ ಸಭಾಭವನದಲ್ಲಿ ಹೈಕೋರ್ಟ್ ಸೇವಾ ಸಮಿತಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆ ಹಾಗೂ ಲಘು ಉದ್ಯೋಗ ಭಾರತಿ ಸಂಸ್ಥೆಯ ಸಹಯೋಗದಲ್ಲಿ ಬುಧವಾರ ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಏರ್ಪಡಿಸಿದ್ದ ಮಹಿಳಾ ಸಬಲೀಕರಣಕ್ಕಾಗಿ ಉದ್ಯಮಶೀಲತೆ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಸಂವಿಧಾನವು ಗಂಡು, ಹೆಣ್ಣು, ಜಾತಿ, ವರ್ಣ, ವರ್ಗಗಳನ್ನಾಧರಿಸಿ ತಾರತಮ್ಯ ಮಾಡುವುದನ್ನು ನಿಷೇಧಿಸಿದೆ. ಮಹಿಳೆಯರಿಗೆ ಎಲ್ಲ ರಂಗಗಳಲ್ಲಿ ಸಮಾನ ಅವಕಾಶಗಳು ದೊರೆಯಬೇಕೆಂಬ ಆಶಯದೊಂದಿಗೆ ಶೇ.33 ರಷ್ಟು ಮೀಸಲಾತಿಯನ್ನೂ ಸಹ ನೀಡಲಾಗಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯುರೋದಲ್ಲಿನ ದಾಖಲೆಗಳ ಪ್ರಕಾರ ಭಾರತದಲ್ಲಿ ಪ್ರತಿ 2 ನಿಮಿಷಗಳಿಗೆ ಒಂದು ಮಹಿಳಾ ದೌರ್ಜನ್ಯ ಪ್ರಕರಣ ದಾಖಲಾಗುತ್ತಿದೆ. ಪ್ರತಿ 20 ನಿಮಿಷಕ್ಕೆ ಒಂದು ವರದಕ್ಷಿಣೆ ಸಾವು ವರದಿಯಾಗುತ್ತಿದೆ. ಇವುಗಳಲ್ಲಿ ಶೇ.9ರಿಂದ 10ರಷ್ಟು ಪ್ರಕರಣಗಳಲ್ಲಿ ಮಾತ್ರ ಅಪರಾಧಿಗಳಿಗೆ ಶಿಕ್ಷೆಯಾಗುತ್ತಿದೆ’ ಎಂದರು.
‘ಶಿಕ್ಷೆಗಳ ಪ್ರಮಾಣ ಹೆಚ್ಚಾಗಬೇಕು. ಜನರು ನ್ಯಾಯಾಲಯದ ಕಟಕಟೆಯೊಳಗೆ ಬಂದು ಸರಿಯಾದ ಸಾಕ್ಷ್ಯ ಒದಗಿಸದೇ, ರಾಜಿಯಾಗುವ ಪ್ರವೃತ್ತಿ ಕೈಬಿಡಬೇಕು. ಹೆತ್ತ ಮಗಳೇ ವರದಕ್ಷಿಣೆ ಕಿರುಕುಳದಿಂದ ಸಾವನ್ನಪ್ಪಿದರೂ ತಂದೆ-ತಾಯಿ ಯಾವುದೋ ಒತ್ತಡಗಳಿಗೆ ಮಣಿದು ರಾಜಿಯಾಗುತ್ತಿರುವ ಹಲವಾರು ಉದಾಹರಣೆಗಳಿವೆ. ಈ ಮನೋಭಾವ ಬದಲಾಗಬೇಕು. ಪಕ್ಕದ ಮನೆಯಲ್ಲಿಯೇ ದೌರ್ಜನ್ಯ ನಡೆದು ಸಾವು ಸಂಭವಿಸುತ್ತಿದ್ದರೂ ಧ್ವನಿ ಎತ್ತದೇ ಇರುವ ಸಾಮಾಜಿಕ ಸಂಕೀರ್ಣತೆಗೆ ನಾವು ಈಡಾಗಿದ್ದೇವೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ನ್ಯಾಯಾಧೀಶ ವಿ.ಶ್ರೀಶಾನಂದ ಮಾತನಾಡಿ, ‘ಭಾರತ ದೇಶವು ಮಹಿಳೆಯರನ್ನು ಅನಾದಿಕಾಲದಿಂದಲೂ ಗೌರವಿಸಿಕೊಂಡು ಬಂದಿದೆ. ಮಹಿಳೆಯರ ತಾರತಮ್ಯ ನಿವಾರಿಸಿ, ಸಮಾನ ಹಕ್ಕುಗಳನ್ನು ನೀಡಬೇಕು. ಅದಕ್ಕಾಗಿ ಎಲ್ಲ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ಕಾನೂನು ಸೇವಾ ಪ್ರಾಧಿಕಾರಗಳು ಕಾರ್ಯನಿರ್ವಹಿಸುತ್ತಿವೆ, ಮಹಿಳೆಯರು ಅವುಗಳ ಪ್ರಯೋಜನ ಪಡೆಯಬೇಕು’ ಎಂದರು.
ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ, ಮಹಿಳಾ ಉದ್ಯಮಿಗಳು ತಯಾರಿಸಿದ ಉತ್ಪನ್ನಗಳ ಮಾರಾಟ ಮೇಳವನ್ನು ಉದ್ಘಾಟಿಸಿದರು. ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್.ಸ್ನೇಹಲ್, ಎಸ್.ಪಿ ಧರ್ಮೇಂದ್ರಕುಮಾರ ಮೀನಾ, ಉಪ ಪೊಲೀಸ್ ಆಯುಕ್ತ ಜಿನೇಂದ್ರ ಖನಗಾವಿ, ಮಹಾನಗರಪಾಲಿಕೆ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ, ವಕೀಲರ ಸಂಘದ ಅಧ್ಯಕ್ಷ ವಿ.ಡಿ.ಕಾಮರಟ್ಟಿ, ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯರಾದ ಬಿ.ಎಸ್.ಸಂಗಟಿ, ಪ್ರಫುಲ್ಲಾ ನಾಯ್ಕ ಇದ್ದರು.