ಚಿತ್ರದುರ್ಗ: ‘ಇಂದಿನ ಶಿಕ್ಷಣ ಕ್ರಮದಲ್ಲಿ ಸಾಕಷ್ಟು ವೈರುಧ್ಯಗಳಿದ್ದು, ಬೋಧನೆ ಕೇವಲ ಕಾಲಹರಣ ಪ್ರಕ್ರಿಯೆಯಾಗುತ್ತಿದೆ. ಕೌಶಲ ರೂಪಿಸು ವಂತಹ ಶಿಕ್ಷಣ ಕ್ರಮಗಳು ಅಗತ್ಯವಾಗಿದೆ’ ಎಂದು ಎಸ್ಜೆಎಂ ವಿದ್ಯಾಪೀಠದ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಜಿ.ಎನ್. ಮಲ್ಲಿಕಾರ್ಜುನಪ್ಪ ಅಭಿಪ್ರಾಯಪಟ್ಟರು.
ಎಸ್ಜೆಎಂ ಮಹಿಳಾ ಕಾಲೇಜಿನಲ್ಲಿ ಐಕ್ಯುಎಸಿಯಡಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಕೌಶಲಾಭಿವೃದ್ಧಿ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ವಿದ್ಯಾರ್ಥಿಗಳಿಗೆ ಪದವಿಯೊಂದಿಗೆ ಪೂರಕವಾಗಿ ಭವಿಷ್ಯವನ್ನು ರೂಪಿಸುವ ಕೌಶಲಗಳ ಮಾರ್ಗದರ್ಶನ ಅಗತ್ಯ. ಪಠ್ಯವನ್ನು ಕೇವಲ ನೆಪವಾಗಿಟ್ಟುಕೊಂಡು ಅದರ ಮೂಲಕ ಭವಿಷ್ಯದ ನಾಗರಿಕ ವ್ಯಕ್ತಿಯಾಗಿ ರೂಪುಗೊಳ್ಳಬೇಕು’ ಎಂದರು.
‘ಪದವಿ ಮುಗಿದ ನಂತರ ಮುಂದೇನು’ ಕುರಿತು ಮಾತನಾಡಿದ ತರಬೇತಿದಾರರಾದ ಜ್ಯೋತಿ, ‘ಪದವಿ ಓದುವಾಗಲೇ ಭವಿಷ್ಯ ರೂಪಿಸುವ ಕೆಲವು ಕೌಶಲಗಳ ಕುರಿತು ತರಬೇತಿ ಪಡೆಯಬೇಕು. ಪೋಷಕರ ಮೇಲೆ ಅವಲಂಬಿತರಾಗದೇ ಜೀವನ ರೂಪಿಸಿಕೊಳ್ಳಬೇಕು’ ಎಂದರು.
ಸಂಚಾಲಕಿ ಡಾ.ಸಿ. ಸುಧಾರಾಣಿ, ‘ಉದ್ಯೋಗದಿಂದ ದೊರೆಯುವ ಆರ್ಥಿಕ ಸ್ವಾವಲಂಬನೆ ಮನುಷ್ಯನ ಬದುಕಿನ ಅಸ್ಮಿತೆಯ ದ್ಯೋತಕ. ಕಲಿಯುವ ವಿದ್ಯೆಯಿಂದ ಭವಿಷ್ಯ ರೂಪುಗೊಳ್ಳಬೇಕು’ ಎಂದರು.
ಸಹ ಸಂಚಾಲಕ ಪ್ರೊ.ವೆಂಕಟೇಶಮೂರ್ತಿ ಇಂಗ್ಲಿಷ್ ಭಾಷಾ ಕೌಶಲ, ಪತ್ರ ವ್ಯವಹಾರ ಮಾಡುವ ಕುರಿತು ಮಾಹಿತಿ ನೀಡಿದರು. ಪ್ರಾಚಾರ್ಯ ಪ್ರೊ.ಎಸ್.ಬಿ. ಶಿವಕುಮಾರ್ ವಿದ್ಯಾರ್ಥಿ ನಾಗಶ್ರೀ ಪ್ರಾರ್ಥಿಸಿದರು. ಪ್ರೊ.ರಾಜಾ ನಾಯಕ್ ನಿರೂಪಿಸಿದರು. ಪ್ರೊ.ಪಿ.ಸಿ. ಗಾಯತ್ರಿ ವಂದಿಸಿದರು. ಗ್ರಂಥಾಲಯ ಮುಖ್ಯಸ್ಥ, ಐಕ್ಯುಎಸಿ ಸಂಚಾಲಕ ಪ್ರೊ.ಎನ್. ಚಲುವರಾಜು, ಪ್ರೊ. ಶಶಿಧರಮೂರ್ತಿ, ಪ್ರೊ. ಚಿತ್ತಪ್ಪ, ಪ್ರೊ. ವಿಶ್ವನಾಥ್, ಪ್ರೊ. ವಿಜಯಕುಮಾರ್. ಪ್ರೊ. ಗಿರೀಶ್, ಪ್ರೊ. ರೂಪಾ ವಿಜಯಕುಮಾರ್, ಪ್ರೊ. ಯಶೋದಾ ಉಪಸ್ಥಿತರಿದ್ದರು.