ಬಿಜೆಪಿಗೆ ಸಮಾಜದ ಎಲ್ಲ ವರ್ಗಗಳ ಅಭೂತಪೂರ್ವ ಬೆಂಬಲ ಸಿಕ್ಕಿರುವುದು ಸಂತಸ ತಂದಿದೆ. ಪಕ್ಷದ ಮೇಲೆ ವಿಶ್ವಾಸ ಇಟ್ಟು ಬೆಂಬಲಿಸಿದ ಜನರಿಗೆ ಧನ್ಯವಾದಗಳು. ಫಲಿತಾಂಶ ನನ್ನನ್ನು ವಿನೀತನನ್ನಾಗಿಸಿದೆ. ಇದು ಪ್ರಚಂಡ ಜಯ.
–ನರೇಂದ್ರ ಮೋದಿ, ಪ್ರಧಾನಿ
***
ಅಲೆಯಿಂದ ಗೆದ್ದಿಲ್ಲ
ಹಿಂದೂ ಅಸ್ತ್ರ ಪ್ರಯೋಗ ಮಾಡಿ ಬಿಜೆಪಿ ಗೆಲುವು ಸಾಧಿಸಿದೆಯೇ ಹೊರತು ನರೇಂದ್ರ ಮೋದಿ ಅಲೆಯಿಂದ ಅಲ್ಲ. ಮೋದಿ ಅಲೆ ಗೆಲುವಿಗೆ ಕಾರಣವಾಗಿದ್ದರೆ ಪಂಜಾಬ್, ಗೋವಾದಲ್ಲಿ ಏಕೆ ಗೆಲ್ಲಲಿಲ್ಲ?
-ಸಿದ್ದರಾಮಯ್ಯ, ಮುಖ್ಯಮಂತ್ರಿ
***
ರಾಹುಲ್ ಕಾರಣ ಅಲ್ಲ
ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದ ಸೋಲಿಗೆ ಉಪಾಧ್ಯಕ್ಷ ನಾಯಕ ರಾಹುಲ್ ಗಾಂಧಿ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ.
-ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ
***
ಜನರು ತಪ್ಪು ಮಾಡಿದ್ದಾರೆ
ಇಂತಹ ಫಲಿತಾಂಶ ಏಕೆ ಬಂತೆಂದು ತಿಳಿಯುತ್ತಿಲ್ಲ. ಜನರು ಅತಂತ್ರ ಆದೇಶ ನೀಡಿದ್ದಾರೆ. ಅವರು ತಪ್ಪು ಮಾಡಿದ್ದಾರೆ ಎಂದು ಅನಿಸುತ್ತಿದೆ. ಇದಕ್ಕಾಗಿ ಮುಂದಿನ 5 ವರ್ಷ ಅವರು ಪಶ್ಚಾತ್ತಾಪ ಪಡಲಿದ್ದಾರೆ.
-ಲಕ್ಷ್ಮೀಕಾಂತ ಪಾರ್ಸೇಕರ್, ಗೋವಾ ನಿರ್ಗಮಿತ ಮುಖ್ಯಮಂತ್ರಿ
***
ಮೋದಿಯಿಂದ ಗೆಲುವು
ದೇಶದ ಅತಿದೊಡ್ಡ ರಾಜ್ಯ ಉತ್ತರ ಪ್ರದೇಶದ ಮತದಾರರು ಮೋದಿ ಅವರನ್ನು ಬೆಂಬಲಿಸಿದ್ದಾರೆ. ನೋಟು ರದ್ದತಿ ಕ್ರಮ ಬೆಂಬಲಿಸಿ ಸಿಕ್ಕಿರುವ ಜನಾದೇಶ ಇದು.
-ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ
***
ಒನ್ಮ್ಯಾನ್ ಶೋ
ಮೋದಿಯವರ ಒನ್ ಮ್ಯಾನ್ ಶೋ ಈ ಚುನಾವಣೆಯಲ್ಲಿ ಕೆಲಸ ಮಾಡಿದೆ. ದಿಲ್ಲಿಯ ಬಿಜೆಪಿ ನಾಯಕರು ಮುಂದಿನ ಚುನಾವಣೆಯಲ್ಲಿ ಕರ್ನಾಟ ಕದಲ್ಲಿ ಅಧಿಕಾರ ಹಿಡಿಯಲು ಸರ್ವ ಪ್ರಯತ್ನ ನಡೆಸುತ್ತಾರೆ.
-ಎಚ್.ಡಿ.ದೇವೇಗೌಡ, ಜೆಡಿಎಸ್ ಅಧ್ಯಕ್ಷ
***
ಜಾತಿ, ಸ್ವಜನಪಕ್ಷಪಾತ, ಓಲೈಕೆ ರಾಜಕಾರಣಕ್ಕೆ ಜನರ ತೀರ್ಪು ಪೂರ್ಣವಿರಾಮ ಇಟ್ಟದೆ. ಇದು ಮೋದಿ ಸರ್ಕಾರದ ಕಾರ್ಯವೈಖರಿಗೆ ಸಿಕ್ಕ ಜಯ. ಬಡವರು ಮೋದಿ ಮೇಲೆ ಇಟ್ಟ ನಂಬಿಕೆಯನ್ನು ಫಲಿತಾಂಶ ತೋರಿಸಿದೆ.
–ಅಮಿತ್ ಷಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ
***
ಪ್ರಧಾನಿ ನರೇಂದ್ರ ಮೋದಿ ಅವರು ದೇಶದಾದ್ಯಂತ ಪ್ರಭಾವ ಬೀರಬಲ್ಲ ಅತ್ಯಂತ ಪ್ರಬಲ ವ್ಯಕ್ತಿ ಎಂಬುದನ್ನು ಚುನಾವಣಾ ಫಲಿತಾಂಶಗಳು ಸಾಬೀತು ಪಡಿಸಿದೆ
–ಪಿ. ಚಿದಂಬರಂ, ಕಾಂಗ್ರೆಸ್ ನಾಯಕ
***
ಇದು ಮಹಾ ಗೆಲುವು. ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಭಾರಿ ಯಶಸ್ಸು ಗಳಿಸುವ ಮೂಲಕ ಬಿಜೆಪಿ ದೇಶದ ರಾಜಕೀಯದ ವ್ಯಾಖ್ಯಾನವನ್ನೇ ಬದಲಾಯಿಸಿದೆ.
-ರಾಜನಾಥ್ ಸಿಂಗ್, ಕೇಂದ್ರ ಗೃಹ ಸಚಿವ
***
ಉತ್ತರ ಪ್ರದೇಶ ಗೆಲುವು ದೇಶದ ರಾಜಕಾರಣ ಕಂಡ ಮಹತ್ವದ ಪಲ್ಲಟ. ಮೋದಿ ಅವರ ನಾಯಕತ್ವದ ಬಗ್ಗೆ ನಮಗೆ ಹೆಮ್ಮೆ ಇದೆ.
-ರವಿ ಶಂಕರ್ ಪ್ರಸಾದ್, ಕೇಂದ್ರ ಸಚಿವ
***
ಕಾಂಗ್ರೆಸ್ನ ಸೋಲಿಗೆ ರಾಹುಲ್ ಗಾಂಧಿ ಒಬ್ಬರೇ ಜವಾಬ್ದಾರರಲ್ಲ. ಪ್ರಿಯಾಂಕಾ ಕೂಡ ರಾಜ್ಯದ ಚುನಾವಣಾ ತಂತ್ರದ ಭಾಗವಾಗಿದ್ದರಿಂದ ಸೋಲಿನಲ್ಲಿ ಅವರ ಹೊಣೆಯೂ ಇದೆ.
-ಸ್ಮೃತಿ ಇರಾನಿ, ಕೇಂದ್ರ ಸಚಿವೆ
***
ಓಲೈಕೆ ರಾಜಕಾರಣವನ್ನು ರಾಜ್ಯದ ಜನ ತಿರಸ್ಕರಿಸಿದ್ದಾರೆ. ತಾರತಮ್ಯವಿರದ ಎಲ್ಲರ ಅಭಿವೃದ್ಧಿಯನ್ನು ಜನರು ಬಯಸಿದ್ದಾರೆ.
-ಯೋಗಿ ಆದಿತ್ಯನಾಥ್, ಗೋರಖ್ಪುರದ ಬಿಜೆಪಿ ಸಂಸದ
***
ಪಂಜಾಬ್ ಜನರು ಅಭಿವೃದ್ಧಿಯನ್ನು ಬಯಸುತ್ತಿದ್ದಾರೆ. ರಾಜ್ಯದಲ್ಲಿ ಉತ್ತಮ ಆಡಳಿತ ನೀಡಬೇಕಾದರೆ ಕೇಂದ್ರ ಸರ್ಕಾರದ ಸಹಕಾರ ಕೂಡಾ ಅಗತ್ಯ.
–ಅಮರಿಂದರ್ ಸಿಂಗ್, ಮುಖ್ಯಮಂತ್ರಿ ಸ್ಥಾನದ ಅಭ್ಯರ್ಥಿ
***
ಇದು ಕಾಂಗ್ರೆಸ್ನ ಪುನರುಜ್ಜೀವನ. ಪಂಜಾಬ್ ಫಲಿತಾಂಶದಿಂದ ಶಕ್ತಿ ಪಡೆದುಕೊಂಡಿರುವ ಪಕ್ಷವು ದೇಶದ ಇತರ ಕಡೆಗಳಲ್ಲೂ ಪುನಶ್ಚೇತನಗೊಳ್ಳಲಿದೆ.
–ನವಜೋತ್ ಸಿಂಗ್ ಸಿಧು, ಕಾಂಗ್ರೆಸ್ ನಾಯಕ
***
ನಮ್ಮ ಮೌಲ್ಯಗಳು ಮತ್ತು ಏಕೀಕೃತ ಭಾರತದ ಮೇಲಿನ ನಮ್ಮ ನಂಬಿಕೆಗೆ ಬದ್ಧರಾಗಿದ್ದೇವೆ. ಜನರ ಹೃದಯ ಮತ್ತು ಮನಸ್ಸು ಗೆಲ್ಲುವವರೆಗೆ ಹೋರಾಟ ಮುಂದುವರಿಯಲಿದೆ.
–ರಾಹುಲ್ ಗಾಂಧಿ, ಕಾಂಗ್ರೆಸ್ ಉಪಾಧ್ಯಕ್ಷ
***
ಸಂಪನ್ಮೂಲದ ಕೊರತೆ ಇದ್ದರೂ ಪಕ್ಷದ ಕಾರ್ಯಕರ್ತರು ಕಷ್ಟಪಟ್ಟು ಕೆಲಸ ಮಾಡಿದ್ದರು. ಆದರೆ ಅವರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲು ನನ್ನಿಂದ ಆಗದಿರುವುದಕ್ಕೆ ಕ್ಷಮೆ ಯಾಚಿಸುವೆ.
–ಹರೀಶ್ ರಾವತ್, ಉತ್ತರಾಖಂಡ ನಿರ್ಗಮಿತ ಮುಖ್ಯಮಂತ್ರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.