ಬೆಂಗಳೂರು: ‘ನಮ್ಮಲ್ಲಿ ಹೊಸ ಬರಹಗಾರಿಗೆ ಪ್ರೋತ್ಸಾಹ ಸಿಗುವುದಿಲ್ಲ. ಓದುಗರೇ ವೈವಿಧ್ಯಮಯ ಕಥೆಗಳನ್ನು ಗುರುತಿಸುವ ಜವಾಬ್ದಾರಿ ಪಡೆಯಬೇಕು’ ಎಂದು ಕಥೆಗಾರ ಕೆ. ಸತ್ಯನಾರಾಯಣ ಅಭಿಪ್ರಾಯಪಟ್ಟರು.
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ನಲ್ಲಿ ಪಂಚಮಿ ಮೀಡಿಯಾ ಪ್ರಕಾಶನ ಶನಿವಾರ ಆಯೋಜಿಸಿದ್ದ ಶ್ರೀಧರ್ ಬನವಾಸಿ ಅವರ ‘ಬ್ರಿಟಿಷ್ ಬಂಗ್ಲೆ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಹೊಸ ಕಥಾವಸ್ತುವಿಗೆ ಯಾವ ರೀತಿಯ ಚೌಕಟ್ಟು ನೀಡಬೇಕೆಂಬುದು ಸವಾಲಿನ ಕೆಲಸ. ಶ್ರೀಧರ್ ಅವರಿಗೆ ಆ ಸಮಸ್ಯೆ ಎದುರಾಗಿಲ್ಲ. ಆಯಾ ಕಥೆಗಳಿಗೆ ಸೂಕ್ತವಾದ ಚೌಕಟ್ಟು ನೀಡಿದ್ದಾರೆ. ಆ ನಿಟ್ಟಿನಲ್ಲಿ ‘ಬ್ರಿಟಿಷ್ ಬಂಗ್ಲೆ’ ಓದುಗರನ್ನು ಹಿಡಿದಿಡುತ್ತದೆ’ ಎಂದು ಅವರು ಹೇಳಿದರು.
ಫಕೀರ ಎಂಬ ಕಥಾನಾಮದಿಂದ ಬರೆಯುವ ಶ್ರೀಧರ್ ಬನವಾಸಿ ಅವರ ನಾಲ್ಕನೇ ಕಥಾ ಸಂಕಲನ ಇದಾಗಿದೆ. ಒಟ್ಟು ಹನ್ನೊಂದು ಕಥೆಗಳನ್ನು ಹೊಂದಿರುವ ಈ ಕಥಾ ಸಂಕಲನಕ್ಕೆ ಎಂ.ಎನ್. ವ್ಯಾಸರಾವ್ ಅವರು ಮುನ್ನುಡಿ ಬರೆದಿದ್ದರೆ, ಪ್ರೊ. ಅಬ್ಬಾಸ್ ಮೇಲಿನಮನಿ ಅವರು ಬೆನ್ನುಡಿ ಬರೆದಿದ್ದಾರೆ.