ಉತ್ತರ ಪ್ರದೇಶದಲ್ಲಿ ಬಿಜೆಪಿ ಜಯಭೇರಿ ಬಾರಿಸಿರುವ ಹಿನ್ನೆಲೆಯಲ್ಲಿ, ‘ಯಾವ ಬಟನ್ ಒತ್ತಿದರೂ ಬಿಜೆಪಿಗೇ ವೋಟ್... ವಿದೇಶಿ ತಜ್ಞರಿಂದ ಇವಿಎಂ ಯಂತ್ರಗಳನ್ನು ಚೆಕ್ ಮಾಡಿಸಿ’ ಎಂದು ಬಿಎಸ್ಪಿ ನಾಯಕಿ ಮಾಯಾವತಿ ಹೇಳಿದ್ದಾರೆ.
ಇಂತಹ ಬಾಲಿಶವಾದ ಹೇಳಿಕೆಯನ್ನು ಅವರು ನೀಡಬಾರದಿತ್ತು. ಅವರ ಈ ಹೇಳಿಕೆ, ತಮ್ಮ ಪಕ್ಷದ ಸೋಲಿನಿಂದ ಅವರಿಗಾಗಿರುವ ಹತಾಶೆ ಹಾಗೂ ಹಿರಿಯ ರಾಜಕಾರಣಿಯಾಗಿ ಚುನಾವಣಾ ಪ್ರಕ್ರಿಯೆಯ ಬಗ್ಗೆ ಸ್ಪಷ್ಟ ಅವಗಾಹನೆ ಇಲ್ಲದಿರುವುದನ್ನು ಎತ್ತಿ ತೋರಿಸುತ್ತದೆ.
ಮತ ಚಲಾವಣೆ ಪ್ರಾರಂಭವಾಗುವುದಕ್ಕೆ ಒಂದು ಗಂಟೆ ಮೊದಲು ಎಲ್ಲಾ ಬೂತ್ಗಳಲ್ಲಿ, ಪಕ್ಷಗಳ ಪ್ರತಿನಿಧಿಗಳು, ರಿಟರ್ನಿಂಗ್ ಆಫೀಸರ್, ಮೈಕ್ರೊ ಅಬ್ಸರ್ವರ್ ಹಾಗೂ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಸಿಬ್ಬಂದಿಯ ಸಮ್ಮುಖದಲ್ಲಿ ಎಲ್ಲ ಪಕ್ಷಗಳ ಚಿಹ್ನೆಗಳ ಮೇಲೆ ಒತ್ತಿ (ಮತ ಚಲಾಯಿಸುವ ರೀತಿಯಲ್ಲಿ), ಕೊನೆಗೆ ಎಲ್ಲ ಮತಗಳನ್ನು ತಾಳೆ ಮಾಡುವ ಮೂಲಕ ಇವಿಎಂ ಯಂತ್ರಗಳನ್ನು ಪರೀಕ್ಷಿಸಲಾಗುತ್ತದೆ.
ಬಳಿಕ ಚಲಾಯಿಸಿದ ಮತಗಳ ಮೊತ್ತವನ್ನು ಸೊನ್ನೆಗೆ ರೀಸೆಟ್ ಮಾಡಲಾಗುತ್ತದೆ. ಉಪಸ್ಥಿತಿಯಿರುವ ಎಲ್ಲರ ಸಹಿಯನ್ನು ಪಡೆದುಕೊಂಡು, ಯಂತ್ರವನ್ನು ಸೀಲ್ ಮಾಡಲಾಗುತ್ತದೆ.
ಈ ಎಲ್ಲ ಪ್ರಕ್ರಿಯೆಯ ದಾಖಲೆಗಳನ್ನು ರಕ್ಷಿಸಿಡಲಾಗುತ್ತದೆ. ನಂತರವೇ ಮತದಾರರಿಗೆ ಮತ ಚಲಾಯಿಸಲು ಇವಿಎಂ ಯಂತ್ರವನ್ನು ನೀಡಲಾಗುತ್ತದೆ. ಹಾಗಾಗಿ ಮತಯಂತ್ರದ ಬಗ್ಗೆ ಅನುಮಾನಪಡುವ ಅಗತ್ಯವೇ ಇಲ್ಲ. ಇದೆಲ್ಲ ತಿಳಿದಿದ್ದರೂ ಮಾಯಾವತಿ ಅವರು ಈ ರೀತಿ ಹೇಳಿರುವುದು ಅಚ್ಚರಿ ಮೂಡಿಸುತ್ತದೆ.
-ಜಿ.ನಾಗೇಂದ್ರ, ಮಂಗಳೂರು