ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆದ್ದಾರಿಯಲ್ಲಿ ರೈತನ ಶವವಿಟ್ಟು ಪ್ರತಿಭಟನೆ

Last Updated 12 ಮಾರ್ಚ್ 2017, 20:06 IST
ಅಕ್ಷರ ಗಾತ್ರ

ಸಕಲೇಶಪುರ (ಹಾಸನ ಜಿಲ್ಲೆ): ಕಾಡಾನೆ ದಾಳಿಗೆ ಸಿಕ್ಕಿ ಮೃತಪಟ್ಟ ಕುದುರಂಗಿ ಗ್ರಾಮದ ರೈತ ರಮೇಶ್‌ ಆಚಾರ್‌ ಅವರ ಶವವನ್ನು ಭಾನುವಾರ ಪಟ್ಟಣದ ಬೆಂಗಳೂರು– ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿಟ್ಟು ಗ್ರಾಮಸ್ಥರು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.

ಶಾಸಕ ಎಚ್‌.ಕೆ. ಕುಮಾರಸ್ವಾಮಿ ನೇತೃತ್ವ ವಹಿಸಿಕೊಂಡಿದ್ದರು. ಒಂದು ತಿಂಗಳಲ್ಲಿ ಆಲೂರು– ಸಕಲೇಶಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಡಾನೆ ದಾಳಿಗೆ ಮೂವರು ಬಲಿಯಾಗಿದ್ದಾರೆ. ಸುಮಾರು 30ಕ್ಕೂ ಹೆಚ್ಚು ಆನೆಗಳು ಕಾಡು ಬಿಟ್ಟು ವಿವಿಧ ಗ್ರಾಮಗಳಲ್ಲಿ ಅಲೆದಾಡುತ್ತಿವೆ.
ಕೋಟ್ಯಂತರ ರೂಪಾಯಿ ಮೌಲ್ಯದ ಬೆಳೆ, ಆಸ್ತಿ ಹಾನಿ ಮಾಡಿವೆ. ಜನರು ಮನೆಯಿಂದ ಹೊರಬರಲು, ತೋಟ, ಗದ್ದೆ, ರಸ್ತೆಗಳಲ್ಲಿ ನಡೆದಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಕಾರಿಗೆ ಬಸ್‌ ಡಿಕ್ಕಿ: ಇಬ್ಬರ ಸಾವು
ಶ್ರೀರಂಗಪಟ್ಟಣ (ಮಂಡ್ಯ ಜಿಲ್ಲೆ):
ಕಾರಿಗೆ ಬಸ್‌ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಮೃತಪಟ್ಟಿರುವ ಘಟನೆ ಪಟ್ಟಣದಲ್ಲಿ ಭಾನುವಾರ ನಡೆದಿದೆ.

ಬೆಂಗಳೂರು ಆರ್‌.ಟಿ.ನಗರದ ಸರ್ವೋಜಿರಾವ್‌ ಅವರ ಪುತ್ರ ಲಿಂಗೇಶ್‌ (37) ಮತ್ತು ಲಿಂಗೇಶ್‌ ಅವರ ಸೋದರ ಸಂಬಂಧಿ ಕಿರಣ್‌ (11) ಮೃತಪಟ್ಟಿದ್ದಾರೆ. ಲಿಂಗೇಶ್‌ ಸ್ಥಳದಲ್ಲೇ ಮೃತಪಟ್ಟರೆ, ಕಿರಣ್‌ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಅರುಣ್‌ ಮತ್ತು ಚಾಲಕ ರಾಹುಲ್‌ ಎಂಬವರು ಗಾಯಗೊಂಡಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆದೊಯ್ಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಲಿಂಗೇಶ್‌ ಮತ್ತು ಇತರರು ತಮ್ಮ ಸಂಬಂಧಿಯೊಬ್ಬರ ಅಸ್ಥಿ ವಿಸರ್ಜನೆಗೆಂದು ಇಲ್ಲಿನ ಪಶ್ಚಿಮ ವಾಹಿನಿಗೆ ಬಂದಿದ್ದರು. ವಾಪಸು ಬೆಂಗಳೂರಿಗೆ ತೆರಳುವಾಗ ಪಟ್ಟಣದ ಒಳಗಡೆಯಿಂದ ಮೈಸೂರಿಗೆ ತೆರಳಲು ಚೆಕ್‌ಪೋಸ್ಟ್‌ ಕಡೆ ಬಂದ ಸಾರಿಗೆ ಸಂಸ್ಥೆ ಬಸ್‌ ಕಾರಿಗೆ ಡಿಕ್ಕಿ ಹೊಡೆದಿದೆ. ಬಸ್‌ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೆಎಸ್‌ಎಸ್‌ ಜೀವನೋತ್ಸಾಹ ಶಿಬಿರ
ಮೈಸೂರು:
ನಗರದ ಜೆಎಸ್‌ಎಸ್‌ ಮಹಾವಿದ್ಯಾಪೀಠ, ಶಿವರಾತ್ರೀಶ್ವರ ಧಾರ್ಮಿಕ ದತ್ತಿಯ ಆಶ್ರಯದಲ್ಲಿ ಸುತ್ತೂರು ಮಠದ ವತಿಯಿಂದ ಊಟಿಯಲ್ಲಿ ಏ.12ರಿಂದ 17ರವರೆಗೆ ಜೀವನೋತ್ಸಾಹ ಶಿಬಿರ ಏರ್ಪಡಿಸಲಾಗಿದೆ.

ಶಿಬಿರವು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ, ವಿಜಯಪುರ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಮಾರ್ಗದರ್ಶನದಲ್ಲಿ ನಡೆಯಲಿದೆ. ಶಿಬಿರದಲ್ಲಿ ನಿತ್ಯ ಸಾಮೂಹಿಕ ಪ್ರಾರ್ಥನೆ, ಯೋಗ, ವಿಶೇಷ ಉಪನ್ಯಾಸ, ಚಿಂತನ–ಮಂಥನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿರುತ್ತವೆ.

ಆಸಕ್ತರು ಪ್ರಕಟಣ ವಿಭಾಗ, ಜೆಎಸ್‌ಎಸ್‌ ಮಹಾವಿದ್ಯಾಪೀಠ, ಡಾ.ಶಿವರಾತ್ರಿ ರಾಜೇಂದ್ರ ವೃತ್ತ, ಮೈಸೂರು ಇಲ್ಲಿಗೆ ನೇರವಾಗಿ ಇಲ್ಲವೆ 0821–2548212 ಅಥವಾ ಶಿಬಿರದ ಸಂಚಾಲಕರಾದ ಎಸ್‌.ಪುಟ್ಟರಾಜಪ್ಪ ಅವರನ್ನು ಮೊ: 9741033336 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT