ಮದ್ದೂರು: ಜವಾನ್– ಕಿಸಾನ್ ಈ ದೇಶದ ಕಣ್ಣುಗಳು. ಈ ಇಬ್ಬರ ತ್ಯಾಗವನ್ನು ಗೌರವಿಸುವ, ಆದರಿಸುವ ಗುಣವನ್ನು ಮಕ್ಕಳು ಬೆಳಸಿಕೊಳ್ಳಬೇಕು ಎಂದು ನಿವೃತ್ತ ಯೋಧ ಕೆ.ಆರ್.ಮಲ್ಲರಾಜು ತಿಳಿಸಿದರು.
ಪಟ್ಟಣದ ತಾಯಮ್ಮ ಮಲ್ಲಯ್ಯ ಆಂಗ್ಲಮಾಧ್ಯಮ ಶಾಲೆಯಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಭೂಸೇನೆಯಲ್ಲಿ 38 ವರ್ಷ ಸೇವೆ ಸಲ್ಲಿಸಿದ್ದೇನೆ. ರಾಜಸ್ಥಾನದಲ್ಲಿ 50 ಡಿಗ್ರಿ ಉಷ್ಣಾಂಶ, ಕಾಶ್ಮೀರದಲ್ಲಿ –05 ಶೀತಾಂಶದ ವಾತಾವರಣದಲ್ಲೂ ಎದೆಗುಂದದೆ ದೇಶಸೇವೆ ಸಲ್ಲಿಸಿದ ತೃಪ್ತಿ ನನಗಿದೆ ಎಂದರು.
ಶಾಲಾ ಮಕ್ಕಳು ಪ್ರದರ್ಶಿಸಿದ ‘ಜೈ ಜವಾನ್–ಜೈ ಕಿಸಾನ್’ ನೃತ್ಯ ರೂಪಕ ಜನರ ಗಮನ ಸೆಳೆಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಚ್. ಕಾಳೀರಯ್ಯ ಕಾರ್ಯಕ್ರಮ ಉದ್ಘಾಟಿಸಿ ದರು. ಮಾಜಿ ಸೈನಿಕರಾದ ರಮೇಶ್, ಸತೀಶ್, ಕೆ.ಆರ್.ಮಲ್ಲರಾಜು ಹಾಗೂ ಪ್ರಗತಿಪರ ರೈತರಾದ ಅಂಕಪ್ಪ, ಹೊನ್ನೇ ಗೌಡ, ವಿ.ಎಚ್.ಚಿಕ್ಕರಾಜು ಅವರನ್ನು ವಿದ್ಯಾಸಂಸ್ಥೆಯ ಅಧ್ಯಕ್ಷ ಎಂ.ರಮೇಶ್ ಸನ್ಮಾನಿಸಿದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೋಣಸಾಲೆ ನರಸರಾಜು, ಚನ್ನಸಂದ್ರ ಯೋಗೇಶ್, ಮಹದೇವಮ್ಮ, ಎ.ಜಿ. ಚಿಕ್ಕಸ್ವಾಮಿಗೌಡ, ಪುಟ್ಟಬಸವೇಗೌಡ, ಪುಟ್ಟಸ್ವಾಮಿಗೌಡ, ಸಂಸ್ಥೆ ಕಾರ್ಯದರ್ಶಿ ಎಸ್.ಪುಷ್ಪಲತಾ ರಮೇಶ್ ಇದ್ದರು.