ಮಂಡ್ಯ: ನಗರದ ಸಾಕಷ್ಟು ಕಡೆಗಳಲ್ಲಿ ಮ್ಯಾನ್ಹೋಲ್ಗಳು ತುಂಬಿ ತುಳು ಕುತ್ತಿವೆ. ರಸ್ತೆಯಲ್ಲಿ ತಿರುಗಾಡುವುದೂ ಕಷ್ಟವಾಗಿದೆ. ಇನ್ನೊಂದೆಡೆ ಅಲ್ಲಲ್ಲಿ ವಿವಿಧ ಕಂಪೆನಿಯವರು ಕೇಬಲ್ ಹಾಕಲು ರಸ್ತೆ ಬದಿ ಅಗೆಯುತ್ತಿರುವುದೂ ಸಂಚಾರಕ್ಕೆ ಅಡ್ಡಿಯಾಗುತ್ತಿದೆ.
ಅಶೋಕನಗರದಲ್ಲಿ ಮೂರು ದಿನಗಳಿಂದ ಮ್ಯಾನ್ಹೋಲ್ ತುಂಬಿ ತುಳಕುತ್ತಿದೆ. ಅದು ಆಗಾಗ, ತುಂಬಿ ಹರಿಯತ್ತಲೇ ಇರುತ್ತದೆ. ತುಂಬಿ ಹರಿಯುತ್ತಿರುವ ಕೊಳಕು ಚರಂಡಿಗೆ ಹೋಗುವಂತೆ ವ್ಯವಸ್ಥೆ ಮಾಡಲಾಗಿದೆಯೇ ಹೊರತೂ ದುರಸ್ತಿಗೆ ಮುಂದಾಗಿಲ್ಲ.
ತಾವರಗೆರೆಯ ಮಾಂಡವ್ಯ ಕಾಲೇಜು ಬಳಿಯೂ ಮ್ಯಾನ್ಹೋಲ್ ತುಂಬಿ ಹರಿಯುತ್ತಿದೆ. ಅದನ್ನು ದುರಸ್ತಿ ಮಾಡಲಾಗಿದೆ. ಆದರೆ, ಆಗಾಗ ಸಮಸ್ಯೆ ಮರುಕಳಿಸುತ್ತಲೇ ಇರುತ್ತದೆ.
ಅಕ್ಕ– ಪಕ್ಕದ ಮನೆಗಳವರಿಗೆ, ಆ ಮಾರ್ಗದಲ್ಲಿ ಸಂಚರಿಸುವವರು ಮೂಗು ಮುಚ್ಚಿಕೊಂಡೇ ತಿರುಗಾಡಬೇಕಾದ ಸ್ಥಿತಿ ಇದೆ. ಕೆಲವು ಕಡೆಗಳಲ್ಲಿ ಮ್ಯಾನ್ಹೋಲ್ಗಳನ್ನು ಹೊಸದಾಗಿ ನಿರ್ಮಿಸುತ್ತಿರುವುದೂ ಇದೆ. ಕೆಲವು ಕಡೆಗಳಲ್ಲಿ ಕಿತ್ತು ಹೋಗಿದ್ದು, ಅವುಗಳನ್ನೆಲ್ಲ ಬದಲಾಯಿಸಬೇಕು ಎನ್ನುತ್ತಾರೆ ಅಶೋಕನಗರ ನಿವಾಸಿ ಶ್ರೀಧರ್.
ವಿ.ವಿ. ರಸ್ತೆಯಲ್ಲಿ ಇತ್ತೀಚೆಗೆ ಕೇಬಲ್ ಹಾಕಲು ಎರಡು ದೊಡ್ಡ ಗುಂಡಿಗಳನ್ನು ತೋಡಲಾಗಿತ್ತು. ಇದರಿಂದಾಗಿ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿತ್ತು. ಮುಚ್ಚಿದ್ದರೂ ರಸ್ತೆ ಹಾಳಾಗಿರುವು ದರಿಂದ ಸಂಚಾರಕ್ಕೆ ತೊಂದರೆ ಆಗುತ್ತಿದೆ.
ಅಶೋಕನಗರದ ಒಂದು ಹಾಗೂ ಎರಡನೇ ಕ್ರಾಸ್ಗಳಲ್ಲಿಯೂ ಕೇಬಲ್ ಅಳವಡಿಕೆಗೆ ತೆಗ್ಗು ತೋಡಲಾಗಿತ್ತು. ಇಂತಹ ಕಾರ್ಯ ನಗರದ ಅಲ್ಲಲ್ಲಿ ವಿವಿಧ ಖಾಸಗಿ ಕಂಪೆನಿಗಳಿಂದ ನಡೆಯುತ್ತಲೇ ಇರುತ್ತದೆ.
ನಾಲ್ಕಾರು ಕಿ.ಮೀ. ಉದ್ದಕ್ಕೆ ಅನುಮತಿ ಪಡೆಯುವ ಕಂಪೆನಿಗಳವರು ನಗರದ ತುಂಬೆಲ್ಲ ಹತ್ತಾರು ಕಿ.ಮೀ. ದೂರದವರೆಗೆ ತೆಗ್ಗು ತೋಡಿ ಕೇಬಲ್ ಹಾಕುವ ಕೆಲಸ ಮಾಡುತ್ತಿದ್ದಾರೆ. ಒಂದಲ್ಲ, ಒಂದು ಕಂಪೆನಿಗಳು ಅಗೆಯುತ್ತಲೇ ಇರುತ್ತವೆ.
ಕೇಬಲ್ ಹಾಕಲು, ನೀರಿನ ನಲ್ಲಿ ಸಂಪರ್ಕಕ್ಕೆ ರಸ್ತೆಯನ್ನು ಅಗೆಯ ಲಾಗುತ್ತದೆ. ಹೀಗೆ ಅಗೆಯಲು ನಗರ ಸಭೆಗೆ ಶುಲ್ಕ ಕಟ್ಟಿ ಅಗೆಯಬೇಕು ಎಂದಿದೆ. ಜನರೂ ಅನುಮತಿ ಪಡೆಯು ವುದಿಲ್ಲ. ನಗರಸಭೆ ಅಧಿಕಾರಿಗಳು ಅನುಮತಿ ಪಡೆದಿಲ್ಲ ಎಂದು ದಂಡ ವಿಧಿಸುವುದಿಲ್ಲ. ಜನರು ಮಾತ್ರ ಹಾಳಾದ ರಸ್ತೆಯಲ್ಲಿಯೇ ತಿರುಗಾಡಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದಾರೆ.