ಕೆಎಸ್ಡಿಎಲ್ ನಿರ್ಮಾತೃಗಳಾದ ನಾಲ್ವಡಿ ಕೃಷ್ಣರಾಜ ಒಡೆಯರ್, ವಿಶ್ವೇಶ್ವರಯ್ಯ, ಎಸ್.ಜಿ.ಶಾಸ್ತ್ರಿ, ಕೆಎಸ್ಡಿಎಲ್್ ಲಾಂಛನ ನಿರ್ಮಿಸಬೇಕು ಎನ್ನುವುದು ಕೆಎಸ್ಡಿಎಲ್ ಪರಿಕಲ್ಪನೆ. ನವಿಲುಗಳ ನರ್ತನ, ಕಸ್ತೂರಿ ಮೃಗ, ಪರಿಸರ, ಹೂವು ಮೊಗ್ಗು, ಸೋಪ್ ತಯಾರಿಗೆ ಬಳಸುವ ವಸ್ತುಗಳು, ಬುದ್ಧ ಇತ್ಯಾದಿ ಶಿಲಾಕೃತಿಗಳನ್ನು ಶಿಬಿರಾರ್ಥಿಗಳು ತಮ್ಮ ಕಲ್ಪನೆಗಳ ಪ್ರಕಾರ ರಚಿಸಿದ್ದಾರೆ.
ಈ ಶಿಲ್ಪಕಲೆಗಳನ್ನು ‘ಸೋಪ್ ಸ್ಟೋನ್’ ನಿಂದ ನಿರ್ಮಿಸಲಾಗಿದೆ. ಈ ಕಲ್ಲುಗಳನ್ನು ಚಾಮರಾಜನಗರದಿಂದ ತರಿಸಲಾಗಿದೆ. ಕೆತ್ತನೆ ವೇಳೆ ಮೆತ್ತಗಿರುವ ಇವು ಕಾಲನಂತರದಲ್ಲಿ ಗಟ್ಟಿಯಾಗುತ್ತವೆ.
‘100 ವರ್ಷವಾಗಿರುವ ಕಾರ್ಖಾನೆ ಇಷ್ಟು ವರ್ಷಗಳ ಕಾಲ ಎಷ್ಟೊಂದು ಜನರಿಗೆ ಅನ್ನ ನೀಡಿದೆ, ಆಶ್ರಯ ನೀಡಿದೆ ಎಂಬುದನ್ನು ನನ್ನ ಶಿಲ್ಪದಲ್ಲಿ ತೋರಿಸಿದ್ದೇನೆ. ಕಲಾಕೃತಿಯಲ್ಲಿರುವ ಅಲ್ಯುಮಿನಿಯಂ ಪಾತ್ರೆ ಮತ್ತು ಸೌಟು ಅದನ್ನೇ ಸಾಂಕೇತಿಕವಾಗಿ ಬಿಂಬಿಸುತ್ತದೆ. ಸಾರ್ವಜನಿಕ ರಂಗದ ಕಾರ್ಖಾನೆಗಳು ಒಂದು ಸಮುದಾಯವನ್ನು ಸೃಷ್ಟಿಸುತ್ತವೆ.
ಸಾವಿರಾರು ಜನಸಮುದಾಯ ಇಲ್ಲಿ ಸೇರುತ್ತದೆ. ಕಾಲಾನಂತರದಲ್ಲಿ ಇತಿಹಾಸವನ್ನು ಕಳೆದುಕೊಳ್ಳುವ ಇವನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ನನ್ನ ಈ ಕಲಾಕೃತಿಯ ಎತ್ತರ 6 ಅಡಿ, ಅಗಲ 4 ಅಡಿ. ಸುತ್ತಲೂ ಕೆತ್ತನೆ ಮಾಡಲಾಗಿದೆ’ ಎನ್ನುತ್ತಾರೆ ಹಿರಿಯ ಕಲಾವಿದೆ ಶ್ಯಾಮಲಾ ನಂದೀಶ್.
‘100 ವರ್ಷವಾಗಿರುವ ಸಾರ್ವಜನಿಕ ರಂಗದ ಕಾರ್ಖಾನೆಯನ್ನು ಜನರ ನೆನಪಿನಲ್ಲಿ ಉಳಿಸುವುದು ಹೇಗೆ ಎಂಬ ಪರಿಕಲ್ಪನೆಯೊಂದಿಗೆ ಕಲಾಕೃತಿಗಳನ್ನು ನಿರ್ಮಿಸಲಾಗಿದೆ. ಕಾರ್ಖಾನೆಯ ಪರಿಸರ ಮತ್ತು ಇಲ್ಲಿ ತಯಾರಾಗುವ ಉತ್ಪನ್ನಗಳಿಗೆ ಪೂರಕ ಶಿಲ್ಪಗಳಿವೆ’ ಎನ್ನುತ್ತಾರೆ ಶಿಬಿರ ಸಂಚಾಲಕ ಶಿವಪ್ರಸಾದ್.