‘ಅಬ್ಬಾ ಎಷ್ಟು ನೀರು ವ್ಯರ್ಥವಾಗುತ್ತಿದೆ’ ಇದು ಸರ್ ಎಂ.ವಿಶ್ವೇಶ್ವರಯ್ಯ ಅವರು ಜೋಗ ಜಲಪಾತವನ್ನು ನೋಡಿ ಹೇಳಿದ ಮಾತು. ಇದೇ ಶರಾವತಿ ವಿದ್ಯುದಾಗಾರ ನಿರ್ಮಾಣಕ್ಕೆ ಕಾರಣವಾಯಿತು.
ಭೂಖಂಡದಲ್ಲಿ ಮೂರುಭಾಗ ನೀರಿದೆ. ಕೇವಲ ಒಂದು ಭಾಗ ಮಾತ್ರ ನೆಲವಿದೆ. ಆದರೂ ಕುಡಿಯುವ ನೀರಿಗೆ ಮಾತ್ರ ಹಲವು ರಾಷ್ಡ್ರಗಳಲ್ಲಿ ತೊಂದರೆ ಇದೆ. ಭೂಮಿಯನ್ನು ಆವರಿಸಿರುವ ಸಮುದ್ರದ ನೀರು ಕುಡಿಯಲು ಯೋಗ್ಯ ವಾಗುವಂತೆ ಮಾಡಿದರೆ ಸಮಸ್ಯೆಯೇ ಇರದು. ಹೀಗೆ ಯೋಚಿಸಿದ ಭಾರತ ಮೂಲದ ಅಮೆರಿಕದ ವಿದ್ಯಾರ್ಥಿಯೊಬ್ಬ ಸ್ವಲ್ಪ ಮಟ್ಟಿಗೆ ಯಶಸ್ವಿಯಾಗಿದ್ದಾನೆ.
ಸಮುದ್ರದ ಉಪ್ಪು ನೀರನ್ನು ಕಡಿಮೆ ವೆಚ್ಚದಲ್ಲಿ ಸಿಹಿ ನೀರಾಗಿ ಪರಿವರ್ತಿಸುವ ಮಾರ್ಗವನ್ನು ಈತ ಕಂಡುಹಿಡಿದಿದ್ದಾನೆ. ಇದರಿಂದಾಗಿ ಈತ ಹಲವು ತಾಂತ್ರಿಕ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳ ಕುತೂಹಲದ ಕೇಂದ್ರ ಬಿಂದುವಾಗಿದ್ದಾನೆ.
ಒರೆಗಾನ್ನ ಪೋರ್ಟ್ಲ್ಯಾಂಡ್ನ ಚೈತನ್ಯ ಕರಮ್ಚೆಡು ಈ ಸಾಧನೆ ಮಾಡಿ ಯಶಸ್ವಿಯಾಗಿರುವ ವಿದ್ಯಾರ್ಥಿ. ಪ್ರೌಢಶಾಲೆಯಲ್ಲೇ ಆರಂಭವಾದ ಈತನ ಪ್ರಯೋಗ ಈಗ ಒಂದು ಹಂತಕ್ಕೆ ಬಂದು ನಿಂತಿದೆ.
‘ಎಂಟು ಜನರಲ್ಲಿ ಒಬ್ಬರು ಸ್ವಚ್ಛ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಇದೊಂದು ಜಾಗತಿಕ ಸಮಸ್ಯೆ. ಆದ್ದರಿಂದಲೇ ಈ ರೀತಿಯ ಪ್ರಯೋಗಕ್ಕೆ ಮುಂದಾದೆ’ ಎನ್ನುತ್ತಾನೆ ಚೈತನ್ಯ. ಜೇಸೂಟ್ ಹೈಸ್ಕೂಲ್ ವಿದ್ಯಾರ್ಥಿಯಾಗಿರುವ ಕರಮ್ಚೆಡುವಿಗೆ ಶಾಲೆ ಎಲ್ಲ ರೀತಿಯಲ್ಲೂ ನೆರವು ನೀಡಿದೆ. ಈತನ ಪ್ರಯೋಗ ವಿಶ್ವದಲ್ಲೇ ಗುರುತಿಸುವಂತಾಗಬೇಕು ಎಂದು ಶಾಲೆ ಬಯಸಿದೆ.
‘ನಮ್ಮ ಶಾಲೆಯ ವಿದ್ಯಾರ್ಥಿ ಇಡೀ ವಿಶ್ವವೇ ಗುರುತಿಸುವಂತ ಸಾಧನೆ ಮಾಡಬೇಕು. ಪ್ರಪಂಚವನ್ನೇ ಬದಲಿಸುವ ಕನಸುಗಳು ಆತನಲ್ಲಿ ಇವೆ’ ಎಂದು ಶಾಲೆ ಹೇಳಿಕೊಂಡಿದೆ. ಇಡೀ ಭೂ ಖಂಡವು ಶೇ 70 ರಷ್ಟು ನೀರಿನಿಂದ ಆವೃತವಾಗಿದೆ. ಇದರಲ್ಲಿ ಹೆಚ್ಚು ಸಮುದ್ರವೇ ಇದೆ. ಆದರೆ, ಇದು ಉಪ್ಪಿನಿಂದ ಕೂಡಿದೆ. ಇದೇ ದೊಡ್ಡ ಸಮಸ್ಯೆ’ ಎನ್ನುತ್ತಾನೆ ಚೆಡು.
ಉಪ್ಪು ನೀರಿನಿಂದ ಕುಡಿಯುವ ನೀರನ್ನು ಬೇರ್ಪಡಿಸುವುದೇ ಈಗ ಆಗಬೇಕಿರುವ ಕೆಲ. ಕಳೆದ ಹಲವು ವರ್ಷಗಳಿಂದ ವಿಜ್ಞಾನಿಗಳು ಈ ಬಗ್ಗೆಯೇ ತಲೆಕೆಡಿಸಿಕೊಂಡಿದ್ದಾರೆ. ಆದರೆ ಅದು ಅಂದುಕೊಂಡಷ್ಟು ಸರಳವಲ್ಲ ಎಂಬುದೂ ಸಹ ಅವರಿಗೆ ಮನವರಿಕೆಯಾಗಿದೆ.
ಏನಿದು ನೀರು ಪರಿವರ್ತನೆ ಪ್ರಯೋಗ: ಚೆಡು ಮಾಡಿರುವುದು ಅತ್ಯಂತ ಸರಳ ಪ್ರಯೋಗ. ಹೆಚ್ಚು ಹೀರಿಕೊಳ್ಳುವ ಪಾಲಿಮರ್ ಅನ್ನು ಇದಕ್ಕಾಗಿ ಬಳಸಿಕೊಳ್ಳ ಲಾಗಿದೆ. ಇದು ಸಮುದ್ರದ ನೀರಿನಲ್ಲಿನ ಉಪ್ಪು ನೀರನ್ನು ಕುಡಿಯುವ ನೀರಾಗಿ ಪರಿವರ್ತಿಸುತ್ತದೆ. ಈ ನೀರಿಗೆ ವಿಶ್ವ ಆರೋಗ್ಯ ಸಂಘಟನೆ ಕುಡಿಯುವ ನೀರಿನ ಮಾನ್ಯತೆ ನೀಡಿದೆ.
300 ವಿದ್ಯಾರ್ಥಿಗಳಲ್ಲಿ ಸ್ಥಾನ
ಅಮೆರಿಕದ ಪ್ರೌಢಶಾಲೆಗಳ ಮಕ್ಕಳಿಗೆ ನಡೆಯುವ ಪ್ರತಿಷ್ಠಿತ ಸ್ಪರ್ಧೆಗಳಲ್ಲಿ ಒಂದಾಗಿರುವ ‘ರೀಜನೆರಿಯನ್ ಸೈನ್ಸ್ ರೀಚರ್ಸ್ ಸೆಮಿಫೈನಲಿಸ್ಟ್’ನಲ್ಲಿ ಚೆಡು 300 ವಿದ್ಯಾರ್ಥಿಗಳಲ್ಲಿ ಸ್ಥಾನ ಪಡೆದಿದ್ದಾನೆ.
ದೇಶದಲ್ಲೂ ನಡೆದಿದೆ ಪ್ರಯೋಗ
ತಮಿಳುನಾಡಿನ ಕಲ್ಪಾಕಂ ಅಣು ಸ್ಥಾವರದಲ್ಲಿ ಸಮುದ್ರ ನೀರನ್ನು ಸಿಹಿ ನೀರಾಗಿ ಪರಿವರ್ತಿಸುವ ಪ್ರಾಯೋಗಿಕ ಸ್ಥಾವರವೊಂದನ್ನು ಭಾಭಾ ಅಣು ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಅಭಿವೃದ್ಧಿ ಪಡಿಸಿದ್ದಾರೆ. ಅಣು ಸ್ಥಾವರ ದಿಂದ ವ್ಯರ್ಥವಾಗಿ ಬರುವ ಹಬೆಯನ್ನು ಬಳಸಿಕೊಂಡು ಸಮುದ್ರದ ನೀರನ್ನು ಸಿಹಿ ನೀರನ್ನಾಗಿ ಪರಿವರ್ತಿಸಲಾಗುತ್ತಿದೆ. ಇದು ಕುಡಿಯುವ ನೀರಿನ ರುಚಿಯನ್ನೇ ಹೊಂದಿದೆ.
ನಿತ್ಯ 63 ಲಕ್ಷ ಲೀಟರ್ ಸಮುದ್ರ ನೀರನ್ನು ಕುಡಿಯುವ ನೀರಾಗಿ ರೂಪಾಂತರ ಮಾಡುತ್ತಿದ್ದಾರೆ. ಇದೇ ವೇಳೆ, ಆರ್ಸೆನಿಕ್ ಅಲ್ಲದೆ ಯುರೇನಿಯಂ ಅಂಶದ ನೀರನ್ನೂ ಸುರಕ್ಷಿತ ನೀರ ನ್ನಾಗಿಸಲು ಫಿಲ್ಟರ್ ಮಾಡುವ ವಿಧಾನ ಗಳನ್ನೂ ಅಭಿವೃದ್ಧಿಪಡಿಸಿದ್ದಾರೆ.