ಮಣಿಪುರದ ಚುನಾವಣೆಯಲ್ಲಿ ಇರೋಮ್ ಶರ್ಮಿಳಾ ಅವರು ಹೀನಾಯವಾಗಿ ಸೋತಿದ್ದರೂ ಇದು ನಿಜವಾದ ಅರ್ಥದಲ್ಲಿ ಜನರ ವಿಜಯ. ಮಣಿಪುರದ ಜನ ತೆಗೆದುಕೊಂಡ ಅತ್ಯಂತ ಪ್ರಬುದ್ಧ ನಿರ್ಣಯ. ಶರ್ಮಿಳಾ ಏನಾದರೂ ಜಯ ಸಾಧಿಸಿದ್ದರೆ ಜನ ಅನಾಥರಾಗುತ್ತಿದ್ದರು. ತಮ್ಮ ಸಂಕಷ್ಟಗಳ ಪರ ನಿಲ್ಲುವ ಸಮರ್ಥ ಹೋರಾಟಗಾರ್ತಿಯನ್ನು ಕಳೆದುಕೊಂಡಂತೆ ಆಗುತ್ತಿತ್ತು.
ಭ್ರಷ್ಟಾಚಾರ ವಿರುದ್ಧದ ಅಣ್ಣಾ ಹಜಾರೆ ನೇತೃತ್ವದ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನಾಯಕರು ಅಧಿಕಾರ ಹಿಡಿದು, ಯಾವ ಪಕ್ಷದ ನಾಯಕನಿಗೂ ಕಡಿಮೆ ಇಲ್ಲ ಎಂಬಂತೆ ವಿಜೃಂಭಿಸುತ್ತಿರುವುದನ್ನು ಕಂಡ ಮತದಾರರು, ಶರ್ಮಿಳಾ ವಿಷಯದಲ್ಲಿ ಹೀಗೆ ಪ್ರತಿಕ್ರಿಯಿಸಿರುವುದು ಸರಿಯಾಗಿದೆ. ಧೀರೋದಾತ್ತ ಮಹಿಳೆ ಶರ್ಮಿಳಾ ಮುಂದೆಯೂ ಉತ್ತಮ ಹೋರಾಟಗಾರ್ತಿಯಾಗಿ ಜನಸಾಮಾನ್ಯರ ಆಶಾಕಿರಣವಾಗಿರಲಿ.
-ಸತ್ಯಬೋಧ, ಬೆಂಗಳೂರು