ಬೀದರ್: ರಾಜೀವಗಾಂಧಿ ವೈದ್ಯಕೀಯ ವಿಶ್ವವಿದ್ಯಾಲಯದಿಂದ 2015–16ನೇ ಸಾಲಿನ ಅಂತಿಮ ವರ್ಷದ ಪರೀಕ್ಷೆಯಲ್ಲಿ ಬೀದರ್ ವೈದ್ಯಕೀಯ ಕಾಲೇಜಿನ (ಬ್ರೀಮ್ಸ್) ವಿದ್ಯಾರ್ಥಿನಿ ಅಮೂಲ್ಯ ಆರ್. ಸ್ವಾಮಿ ಮೊದಲಿಗರಾಗಿದ್ದಾರೆ.
ಅಂತಿಮ ವರ್ಷದ ಪರೀಕ್ಷೆಯಲ್ಲಿ 1750 ಅಂಕಗಳಿಗೆ 1321 ಅಂಕಗಳನ್ನು ಗಳಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ ಎಂದು ಬ್ರೀಮ್ಸ್ ನಿರ್ದೇಶಕ ಡಾ. ಚೆನ್ನಣ್ಣ ಸಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
18ರಂದು ಬ್ರೀಮ್ಸ್ ಘಟಿಕೋತ್ಸವದಲ್ಲಿ ಅಮೂಲ್ಯ ಅವರನ್ನು ಸನ್ಮಾನಿಸಲಾಗುವುದು. ಏಪ್ರಿಲ್ 6ರಂದು ಬೆಂಗಳೂರಿನಲ್ಲಿ ನಡೆಯಲಿರುವ ರಾಜೀವ್ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಗುವುದು ಎಂದು ಅವರು ವಿವರಿಸಿದ್ದಾರೆ.
ಅಪ್ಪ, ಅಜ್ಜನೇ ಮಾದರಿ: ‘ಚಿಕುನ್ ಗುನ್ಯ ಜ್ವರವನ್ನು ಪತ್ತೆ ಮಾಡಿದ ಅಪ್ಪ ಡಾ. ರತಿಕಾಂತ್ ಸ್ವಾಮಿ ಅವರಿಂದಲೇ ವೈದ್ಯಕೀಯವನ್ನು ಓದುವ ಪ್ರೇರಣೆ ಪಡೆದಿದ್ದೆ. ಅಮ್ಮ ಸಹ ಡಾ. ಜಯಶ್ರೀ ನನ್ನ ಓದನ್ನು ಬೆಂಬಲಿಸಿದರು.
ನನ್ನಜ್ಜ ಕೆ. ಶಾಂತಯ್ಯ ಬೀದರ್ನಲ್ಲಿಯೇ ಇದ್ದು, ಓದಿ ರ್ಯಾಂಕ್ಗಳಿಸಲು ಉತ್ತೇಜನ ನೀಡಿದರು. ಪರಿಶ್ರಮದಿಂದ ಎಲ್ಲವೂ ಸಾಧ್ಯ ಎಂದು ಹೇಳಿದ್ದರು. ಅದನ್ನೇ ಗಮನದಲ್ಲಿಟ್ಟುಕೊಂಡು ಅಧ್ಯಯನ ಮಾಡಿದೆ. ಈ ಯಶಸ್ಸನ್ನು ನನ್ನಜ್ಜ, ಸ್ವಾತಂತ್ರ್ಯ ಯೋಧ ವೀರಯ್ಯಸ್ವಾಮಿ ಹೆಡಗಾಪುರ ಅವರಿಗೆ ಅರ್ಪಿಸುತ್ತೇನೆ ಎಂದರು.