ಕಲಬುರ್ಗಿ: ತೊಗರಿ ಖರೀದಿ ಅವಧಿಯನ್ನು ಏಪ್ರಿಲ್ 30ರ ವರೆಗೆ ವಿಸ್ತರಿಸುವಂತೆ ಒತ್ತಾಯಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶುಕ್ರವಾರ ಜೈಲ್ ಭರೋ ಚಳವಳಿ ನಡೆಸುತ್ತಿದ್ದ ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರು ಹಾಗೂ ರೈತರನ್ನು ಪೊಲೀಸರು ಬಂಧಿಸಿ, ನಂತರ ಬಿಡುಗಡೆ ಮಾಡಿದರು.
ಪ್ರತಿ ಕ್ವಿಂಟಲ್ ತೊಗರಿಗೆ ₹7,500 ಬೆಂಬಲ ಬೆಲೆ ನಿಗದಿಪಡಿಸಬೇಕು. ತೊಗರಿ ಖರೀದಿ ಕೇಂದ್ರಗಳಲ್ಲಿ ತೊಗರಿ ಖರೀದಿಸಿದ ರೈತರಿಗೆ ಕೂಡಲೇ ಹಣ ನೀಡಬೇಕು.
ಆಮದು ಬೇಳೆಕಾಳುಗಳ ಮೇಲೆ ಶೇ 30ರಷ್ಟು ತೆರಿಗೆ ವಿಧಿಸಬೇಕು ಎಂದು ಆಗ್ರಹಿಸಿದರು.
ಈಗ ಖರೀದಿಸುತ್ತಿರುವ 1.75 ಲಕ್ಷ ಟನ್ ತೊಗರಿಯ ಜತೆಗೆ ಇನ್ನೂ 3.25 ಲಕ್ಷ ಟನ್ ತೊಗರಿ ಖರೀದಿಸಬೇಕು ಇದಕ್ಕಾಗಿ ಹೆಚ್ಚುವರಿ ತೊಗರಿ ಖರೀದಿ ಕೇಂದ್ರಗಳನ್ನು ತೆರೆಯಬೇಕು. ರೈತರ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಮಾರುತಿ ಮಾನ್ಪಡೆ, ಜಿಲ್ಲಾ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ಅಖಿಲ ಭಾರತ ಕಿಸಾನ್ ಮಂಡಳಿ ಜಿಲ್ಲಾ ಅಧ್ಯಕ್ಷ ಮೌಲಾಮುಲ್ಲಾ, ತೊಗರಿ ಬೆಳೆಗಾರರ ಹೋರಾಟ ಸಮಿತಿಯ ಮಂಜುನಾಥಗೌಡ, ಅಂಬರೀಷಗೌಡ, ಸುಭಾಷ ಹೊಸಮನಿ, ಅಶೋಕ ಮ್ಯಾಗೇರಿ ಇದ್ದರು.