ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲೆಗಾಗಿ 24,650 ಮರಗಳಿಗೆ ಕೊಡಲಿ

ತುಂಗಾ–ಭದ್ರಾ ಜಲಾಶಯಗಳ ಮಧ್ಯೆ 96.91 ಹೆಕ್ಟೇರ್‌ ಅರಣ್ಯ ನಾಶ
Last Updated 18 ಮಾರ್ಚ್ 2017, 20:30 IST
ಅಕ್ಷರ ಗಾತ್ರ

ಶಿವಮೊಗ್ಗ: ತುಂಗಾ ಹಾಗೂ ಭದ್ರಾ ಜಲಾಶಯಗಳ ಮಧ್ಯೆ 11 ಕಿ.ಮೀ. ಉದ್ದದ ನಾಲೆ ನಿರ್ಮಿಸಲು ದಟ್ಟ ಅರಣ್ಯ ವ್ಯಾಪ್ತಿಯ 24,650 ಮರಗಳ ತೆರವಿಗೆ ಕಾರ್ಯಾಚರಣೆ ಆರಂಭವಾಗಿದೆ.

ನರಸಿಂಹರಾಜಪುರ ತಾಲ್ಲೂಕು ಮುತ್ತಿನಕೊಪ್ಪ ಬಳಿ ತುಂಗಾ ಜಲಾಶಯದ ಹಿನ್ನೀರು ಪಂಪ್‌ ಮಾಡಿ ಈ ನಾಲೆಯ ಮೂಲಕ ಭದ್ರಾ ಜಲಾಶಯಕ್ಕೆ ಪ್ರತಿ ವರ್ಷ 17.40 ಟಿಎಂಸಿ ನೀರು ಹರಿಸಲಾಗುತ್ತದೆ. ಈ ನೀರು ಹಾಗೂ ಭದ್ರಾ ಜಲಾಶಯದ 12.57 ಟಿಎಂಸಿ ನೀರು ಸೇರಿ ಒಟ್ಟು 29.97 ಟಿಎಂಸಿ ನೀರನ್ನು
ಭದ್ರಾ ಮೇಲ್ದಂಡೆ ಯೋಜನೆಗೆ ಬಳಸಿಕೊಳ್ಳಲಾಗುತ್ತದೆ.

ಎರಡು ಜಲಾಶಯಗಳ ಮಧ್ಯೆ ಇರುವ 11 ಕಿ.ಮೀ. ಅಂತರದಲ್ಲಿ 8 ಕಿ.ಮೀ ಶಂಕರ ವಲಯ ಹಾಗೂ ಭದ್ರಾ ಅಭಯಾರಣ್ಯಗಳಿಗೆ ಸೇರಿದ ದಟ್ಟ ಕಾನನವಿದೆ. ಈ ಪ್ರದೇಶದಲ್ಲಿ 60 ಮೀಟರ್‌ ಅಗಲದ ನಾಲೆ ನಿರ್ಮಾಣಕ್ಕಾಗಿ 96.91 ಹೆಕ್ಟೇರ್‌ ಅರಣ್ಯ ಬಳಸಿಕೊಳ್ಳಲು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ಅನುಮತಿ ನೀಡಿದೆ.

8 ಕಿ.ಮೀ ವ್ಯಾಪ್ತಿಯಲ್ಲಿ ಇರುವ ಸಾಗವಾನಿ, ಬೀಟೆ, ಭರಣಿಗೆ, ಶ್ರೀಗಂಧ, ಶತಾವರಿ, ಕುಂಕುಮ, ಬೈನೆ, ಮಾವು, ಹೆಬ್ಬಲಸು, ನಂದಿ, ನೆಲ್ಲಿ, ಮತ್ತಿ ಸೇರಿ ವಿವಿಧ ಜಾತಿಯ ಒಟ್ಟು 24,650 ಬೃಹತ್‌ ಮರಗಳಿಗೆ ಕೊಡಲಿ ಬೀಳುತ್ತಿದೆ. 3,600 ಮರಗಳು ಈಗಾಗಲೇ ನೆಲಕ್ಕುರುಳಿವೆ. ಮರ ತೆರವು ಕಾರ್ಯದ ವೆಚ್ಚಕ್ಕಾಗಿಯೇ ಅರಣ್ಯ ಇಲಾಖೆಗೆ ₹ 2.5 ಕೋಟಿ ನೀಡಲಾಗಿದೆ.

ನಾಲೆ ನಿರ್ಮಾಣಕ್ಕಾಗಿ ನಾಶವಾಗುವ ಅರಣ್ಯ ಪ್ರದೇಶಕ್ಕೆ ಪರ್ಯಾಯವಾಗಿ ರಾಜ್ಯ ಸರ್ಕಾರ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಬಳಿಯ ಕಾವಲ್‌ನಲ್ಲಿ 350 ಹೆಕ್ಟೇರ್‌ ಕಂದಾಯ ಭೂಮಿ ನೀಡಿದೆ. ಆ ಜಾಗದಲ್ಲಿ ಹೊಸದಾಗಿ ಅರಣ್ಯ ಬೆಳೆಸಲು ₹31.5 ಕೋಟಿ  ಬಿಡುಗಡೆ ಮಾಡಿದೆ.

206.91 ಹೆಕ್ಟೇರ್‌ ಅರಣ್ಯ ಬಳಕೆ: ಮೊದಲ ಹಂತದಲ್ಲಿ ತುಂಗಾ ಜಲಾಶಯದಿಂದ ಭದ್ರಾ ಜಲಾಶಯದವರೆಗೆ 96.91 ಹೆಕ್ಟೇರ್‌, ಎರಡನೇ ಹಂತದಲ್ಲಿ ಭದ್ರಾ ಜಲಾಶಯದಿಂದ ತರೀಕೆರೆ ತಾಲ್ಲೂಕು ಅಜ್ಜಂಪುರದವರೆಗೆ (53 ಕಿ.ಮೀ.) 110 ಹೆಕ್ಟೇರ್‌ ಅರಣ್ಯ ಬಳಸಿಕೊಳ್ಳಲು ಅನುಮತಿ ಕೋರಿ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆ ರಾಜ್ಯ ಜಲ ಸಂಪನ್ಮೂಲ ಇಲಾಖೆ ಪತ್ರ ಬರೆದಿತ್ತು. ಮೊದಲ ಹಂತದ ವ್ಯಾಪ್ತಿಯ ಮರಗಳ ತೆರವಿಗೆ ಈಗ ಅನುಮತಿ ದೊಕಿದ್ದು, ತೆರವು ಕಾರ್ಯಾಚರಣೆ ಆರಂಭವಾಗಿದೆ. ಆದರೆ, ಎರಡನೇ ಹಂತದ ವ್ಯಾಪ್ತಿಯಲ್ಲಿ ಭದ್ರಾ ಅಭಯಾರಣ್ಯದ ವನ್ಯಜೀವಿ ತಾಣ ಇರುವ ಕಾರಣ ಮರಗಳ ತೆರವಿಗೆ ಅನುಮತಿ ಸಿಕ್ಕಿಲ್ಲ.

₹ 12,340 ಕೋಟಿ ವೆಚ್ಚದ ಯೋಜನೆ: ಕೆ.ಸಿ. ರೆಡ್ಡಿ ಸಮಿತಿ ಶಿಫಾರಸ್ಸಿನಂತೆ ರಾಜ್ಯ ಸರ್ಕಾರ ಯೋಜನೆ ಆರಂಭಕ್ಕೆ  2007–08ನೇ ಸಾಲಿನಲ್ಲಿ ಹಸಿರು ನಿಶಾನೆ ತೋರಿತ್ತು. ವಿಳಂಬದ ಪರಿಣಾಮ ಯೋಜನಾ ವೆಚ್ಚ ₹ 12,340 ಕೋಟಿಗೆ ತಲುಪಿದೆ. ಈ ಯೋಜನೆ ಮೂಲಕ ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆ ವ್ಯಾಪ್ತಿಯ 2.25 ಲಕ್ಷ ಹೆಕ್ಟೇರ್‌ಗೆ ನೀರು ಒದಗಿಸಲಾಗುತ್ತಿದೆ.  ಪ್ರತಿ ವರ್ಷ ಜೂನ್‌ 15ರಿಂದ ಅಕ್ಟೋಬರ್‌ 15ರವರೆಗೆ ನಾಲ್ಕು  ಸ್ಥಳಗಳಲ್ಲಿ ನೀರು ಪಂಪ್‌ ಮಾಡುವ ಮೂಲಕ ಬರಪೀಡಿತ ಪ್ರದೇಶಗಳಿಗೆ ನೀರು ಹರಿಸಲಾಗುತ್ತದೆ.

‘ಯೋಜನೆ ಅನುಷ್ಠಾನ ವೇಗ ಪಡೆದುಕೊಂಡಿದೆ. ನಾಲೆಗಳು, ಪಂಪ್‌ಹೌಸ್‌ಗಳ ನಿರ್ಮಾಣ ಕಾಮಗಾರಿ ಭರದಿಂದ ಸಾಗಿವೆ. ಮುಂದೆ ಬರುವ ಮಳೆಗಾಲದಲ್ಲೇ ಪ್ರಾಯೋಗಿಕವಾಗಿ ನೀರು ಹರಿಸಲು ಸಿದ್ಧತೆ ಮಾಡಿ ಕೊಳ್ಳುತ್ತಿದ್ದೇವೆ’ ಎನ್ನುತ್ತಾರೆ ಭದ್ರಾ ಮೇಲ್ದಂಡೆ ಅಧೀಕ್ಷಕ ಎಂಜಿನಿಯರ್ ಕೆ.ತಿಪ್ಪೇಸ್ವಾಮಿ.

ಮುಖ್ಯಾಂಶಗಳು
* 11 ಕಿ.ಮೀ. ಉದ್ದ, 60 ಮೀಟರ್‌ ಅಗಲ ವಿಸ್ತೀರ್ಣದ ನಾಲೆ

* ಮರಗಳ ತೆರವುಗೊಳಿಸಲು ₹ 2.5 ಕೋಟಿ ಬಿಡುಗಡೆ
* 2ನೇ ಹಂತದ 110 ಹೆಕ್ಟೇರ್‌ ಅರಣ್ಯ ತೆರವಿಗೆ ದೊರಕದ ಅನುಮತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT