ಕನಕಪುರ: ಸಂಘಟನೆಗಳು ಸಾಮಾಜಿಕ ಚಿಂತನೆಯೊಂದಿಗೆ ಕೆಲಸ ಮಾಡಬೇಕು, ನಾಡು ನುಡಿಯ ಜತೆಗೆ ಸಮಾಜದ ಅಭಿವೃದ್ಧಿಗೆ ಒತ್ತು ನೀಡಬೇಕೆಂದು ಸ್ವತಂತ್ರ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ದೇವರಾಜರೆಡ್ಡಿ ತಿಳಿಸಿದರು.
ನಗರದ ವಿವೇಕಾನಂದ ನಗರದ ಸತ್ಯನಾರಾಯಣ ಕಲ್ಯಾಣ ಮಂಟಪದಲ್ಲಿ ರಾಮನಗರ ಜಿಲ್ಲಾ ಮತ್ತು ಕನಕಪುರ ತಾಲ್ಲೂಕು ಘಟಕದ ಪದಾಧಿಕಾರಿಗಳ ಆಯ್ಕೆಯ ಸಭೆಯಲ್ಲಿ ಮಾತನಾಡಿದರು.
‘ನಮ್ಮ ಸಂಘಟನೆಯು ಭಾಷೆ, ಜಲ, ನಾಡು ವಿಷಯಕ್ಕೆ ಸಂಬಂಧಪಟ್ಟಂತೆ ತೊಂದರೆ ಬಂದಾಗ ಹೋರಾಡುವುದರ ಜೊತೆಗೆ ಇಡೀ ರಾಜ್ಯಾದ್ಯಂತ ಸಾಮಾಜಿಕ ಕಳಕಳಿಯನ್ನಿಟ್ಟುಕೊಂಡು ರೈತಪರ ಹಾಗೂ ಜಾನುವಾರುಗಳಿಗೆ ಉಪಯೋಗವಾಗುವ ಕಾರ್ಯಕ್ರಮ ನಡೆಸುತ್ತಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರ ಪರವಾದ ಬಜೆಟ್ ಮಂಡನೆ ಮಾಡದೆ ನಿರುಪಯುಕ್ತವಾದ ಬಜೆಟ್ ಮಂಡಿಸಿದ್ದಾರೆ. ಗ್ರಾಮೀಣದ ಜನತೆಗೆ ಇದರಿಂದ ಯಾವುದೆ ಲಾಭವಾಗುವುದಿಲ್ಲ, ಚುನಾವಣೆಯನ್ನು ಗುರಿಯಾಗಿಸಿಕೊಂಡು ತಯಾರಿಸಿರುವ ಬಜೆಟ್ ಇದಾಗಿದೆ ಎಂದು ಆರೋಪಿಸಿದರು.
ರೈತರ ಸಾಲ ಮನ್ನಾ ಹಾಗೂ ರೈತ ಪರ ಕಾರ್ಯಕ್ರಮಗಳನ್ನು ಜಾರಿಗೆ ತರಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಬೆಂಗಳೂರು ದಕ್ಷಿಣ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗಲೇಖ, ರಾಮನಗರ ಜಿಲ್ಲಾ ಲೇಖಕರ ವೇದಿಕೆಯ ಅಧ್ಯಕ್ಷ ಕೂ.ಗಿ.ಗಿರಿಯಪ್ಪ, ವಕೀಲ ಸುರೇಶ್ ಹಾಜರಿದ್ದರು.
ಪದಾಧಿಕಾರಿಗಳು: ಸಂಘಟನೆಯ ರಾಮನಗರ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಭಾಸ್ಕರ್ ಅವರನ್ನು ನೇಮಿಸಿ ಆದೇಶಪತ್ರ ನೀಡಲಾಯಿತು. ಗೌರವಾಧ್ಯಕ್ಷರಾಗಿ ಶಿವಲಿಂಗಯ್ಯ, ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ್, ಜಂಟಿ ಕಾರ್ಯದರ್ಶಿಯಾಗಿ ಕೃಷ್ಣಪ್ಪ ಹಾಗೂ ಕನಕಪುರ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ರಮೇಶ್, ಗೌರವಾಧ್ಯಕ್ಷರಾಗಿ ರಾಜಣ್ಣ, ಪ್ರಧಾನ ಕಾರ್ಯದರ್ಶಿಯಾಗಿ ಅನಿಲ್ಕುಮಾರ್, ಜಂಟಿ ಕಾರ್ಯದರ್ಶಿಯಾಗಿ ಚಾಮುಂಡಿಗೌಡ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಸುವರ್ಣಮ್ಮ,
ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆಯಾಗಿ ಪ್ರೇಮ, ಉಪಾಧ್ಯಕ್ಷೆಯಾಗಿ ರೇಣುಕಾದೇವಿ, ಪ್ರಧಾನ ಕಾರ್ಯದರ್ಶಿಯಾಗಿ ಲಕ್ಷ್ಮಿ, ಕಾನೂನು ಘಟಕದ ಅಧ್ಯಕ್ಷರಾಗಿ ಅಸ್ಗರ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾಗಿ ಅಮೀರ್ಜಾನ್, ರೈತರ ಘಟಕದ ಅಧ್ಯಕ್ಷರಾಗಿ ನಾಗರಾಜ್, ನಗರಾಧ್ಯಕ್ಷರಾಗಿ ನಾಗರಾಜಾಚಾರಿ, ಯುವಘಟಕದ ಅಧ್ಯಕ್ಷರಾಗಿ ಸುರೇಶ್, ಉಪಾಧ್ಯಕ್ಷರಾಗಿ ಚಿಕ್ಕಣ್ಣ, ಶ್ರೀಧರ್ ಹಾಗೂ ಇನ್ನಿತರ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.