ದೊಡ್ಡಬಳ್ಳಾಪುರ: ‘ಮಹಿಳೆಯರ ಮೇಲಿನ ಶೋಷಣೆ ಖಂಡನೀಯ. ಈ ಬಗ್ಗೆ ಮಹಿಳೆಯರು ಎಚ್ಚೆತ್ತುಕೊಂಡು ತಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳಬೇಕಿದೆ’ ಎಂದು ನಗರ ಮಹಿಳಾ ಪೊಲೀಸ್ ಠಾಣೆ ಎಸ್ಐ ಬೇಬಿ ವಾಲೇಕರ್ ಹೇಳಿದರು.
ನಗರದ ದತ್ತಾತ್ರೇಯ ಕಲ್ಯಾಣ ಮಂದಿರದಲ್ಲಿ ಸ್ವರ್ಣಲತಾ ಪ್ರದೇಶ ಒಕ್ಕೂಟದ ವತಿಯಿಂದ ಭಾನುವಾರ ನಡೆದ ಮಹಿಳಾ ದಿನಾಚರಣೆ ಹಾಗೂ ಮಹಿಳೆಯರ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶೋಷಣೆಗೊಳಗಾದ ಅಧಿಕಾರಿಗಳು ರಾಜೀನಾಮೆ ನೀಡಿದರೆ ಸಮಸ್ಯೆ ಬಗೆಹರಿಯುವುದಿಲ್ಲ. ಸಂದರ್ಭವನ್ನು ದಿಟ್ಟವಾಗಿ ಎದುರಿಸುವ ಧೈರ್ಯ ಬೆಳೆಸಿಕೊಳ್ಳಬೇಕು ಎಂದರು. ‘ಮಹಿಳೆಯರ ಯಾವುದೇ ಸಮಸ್ಯೆಗೆ ಪರಿಹಾರ ನೀಡಲು ನಿಮ್ಮೊಂದಿಗಿದ್ದೇನೆ’ ಎಂದು ಭರವಸೆ ನೀಡಿದರು.
ರೈತ ಮುಖಂಡರಾದ ಸುಲೋಚನಮ್ಮ ಡಾ.ವೆಂಕಟರೆಡ್ಡಿ ಮಾತನಾಡಿ, ಮಹಿಳೆ ಸ್ವಾವಲಂಬಿಯಾಗಿ ಬದುಕಬೇಕು. ತಮಗಿರುವ ಎಲ್ಲ ಅವಕಾಶಗಳನ್ನು ಬಳಸಿಕೊಂಡು ಮುನ್ನಡೆಯಬೇಕು ಎಂದರು. ಮಹಿಳಾ ಸ್ವಸಹಾಯ ಸಂಘಗಳಿಗೆ ನೆನೆಪಿನ ಕಾಣಿಕೆ ವಿತರಿಸಲಾಯಿತು.
ಸ್ವರ್ಣಲತಾ ಪ್ರದೇಶ ಒಕ್ಕೂಟದ ಅಧ್ಯಕ್ಷೆ ರುಕ್ಮಿಣೀದೇವಿ. ಸ್ವರ್ಣಲತಾ ಪ್ರದೇಶ ಒಕ್ಕೂಟದ ಕಾರ್ಯದರ್ಶಿ ಗಿರಿಜಾ, ನಗರಸಭಾ ಸದಸ್ಯೆ ಮಂಜುಳಾ ಆಂಜನೇಯ , ಒಕ್ಕೂಟದ ಸದಸ್ಯರು ಭಾಗವಹಿಸಿದ್ದರು.