ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನದ ವೀರನಹೊಸಹಳ್ಳಿ ವಲಯದಲ್ಲಿ ಸೋಲಾರ್ ವಿದ್ಯುತ್ ಆಶ್ರಯದಲ್ಲಿ ಕೊಳವೆಬಾವಿಯಿಂದ ಕೆರೆಗೆ ನೀರು ತುಂಬಿಸುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.
ಸತತ ಮಳೆ ಕೊರತೆಯಿಂದ ಅರಣ್ಯದಲ್ಲಿರುವ ಕೆರೆಗಳಲ್ಲಿ ನೀರಿಲ್ಲದ ಕಾರಣ ಕಾಡುಪ್ರಾಣಿಗಳು ಹಳ್ಳಿಗಳತ್ತ ನುಗ್ಗುತ್ತಿದ್ದವು. ಈಗ ಇದಕ್ಕೆ ಕಡಿವಾಣ ಹಾಕಿದಂತಾಗಿದೆ.
ವೀರನಹೊಸಹಳ್ಳಿ ಚೆಕ್ಪೋಸ್ಟ್ ನಿಂದ ಅರ್ಧ ಕಿ.ಮೀ. ಕ್ರಮಿಸಿದರೆ ಸಿ.ಪಿ.ಟಿ. 4ರಲ್ಲಿರುವ ಎರೆಕಟ್ಟೆ ಕೆರೆ ಅಂಗಳದಲ್ಲಿ ಕೊಳವೆಬಾವಿ ಕೊರೆಯಿಸಲಾಗಿದೆ. ರೈಲು ಕಂಬಿ ಬಳಸಿಕೊಂಡು 20 ಅಡಿ ಎತ್ತರದ ಮೇಲೆ ಸುಮಾರು ₹ 7 ಲಕ್ಷ ವೆಚ್ಚದಲ್ಲಿ ಸೋಲಾರ್ ಪ್ಲೇಟ್ ಅಳವಡಿಸಲಾಗಿದೆ. ಅಲ್ಲಿಂದ ಕೊಳವೆ ಬಾವಿಗೆ ಸಂಪರ್ಕ ಕಲ್ಪಿಸಿ ನೀರು ಮೇಲೆತ್ತಲಾಗಿದೆ.
ವೀರನಹೊಸಹಳ್ಳಿ ವಲಯದಲ್ಲಿರುವ ಮಂಟಳ್ಳಿ ಕೆರೆಗೂ ಸೋಲಾರ್ ಮೂಲಕ ಕೊಳವೆಬಾವಿಯಿಂದ ನೀರು ಮೇಲೆತ್ತಿ ಕೆರೆಗೆ ಹರಿಸಲಾಗುತ್ತಿದೆ. ಈ ಮೂಲಕ ನೀರು ಹರಸಿ ನಾಡಿನತ್ತ ಬರುವ ಕಾಡುಪ್ರಾಣಿಗಳ ವಲಸೆ ತಪ್ಪಿಸ ಲಾಗಿದೆ. ಬೆಳಿಗ್ಗೆ ಮತ್ತು ಸಂಜೆ ಈ ಕೆರೆಗಳಿಗೆ ನೀರು ಕುಡಿಯಲು ಕಾಡು ಪ್ರಾಣಿಗಳು ಬರುತ್ತವೆ. ಇಲ್ಲಿಯೇ ನೀರು ಸಿಗುವುದರಿಂದ ನಾಡಿನತ್ತ ಅವುಗಳು ಹೋಗುವುದು ಕಡಿಮೆಯಾಗಿದೆ.
‘ಕಾಡಿನ ಒಳಗೆ ವಿದ್ಯುತ್ ಸಂಪರ್ಕ ಪಡೆಯುವುದು ಅಸಾಧ್ಯದ ಮಾತು. ಹೀಗಾಗಿ, ಸೋಲಾರ್ ತಂತ್ರಜ್ಞಾನದಿಂದ ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ’ ಎಂದು ವೀರನಹೊಸಹಳ್ಳಿ ಆರ್ಎಫ್ಒ ಮಧುಕುಮಾರ್ ತಿಳಿಸಿದರು.