ಹರಿಯಾಣಕ್ಕೆ ಸಂಯುಕ್ತ ದಳ ಸರ್ಕಾರ
ನವದೆಹಲಿ, ಮಾ. 21– ವಿರೋಧ ಪಕ್ಷಗಳು ಮತ್ತು ಭಿನ್ನಮತೀಯ ಕಾಂಗ್ರೆಸ್ಸಿಗರು ರಚಿಸಿಕೊಂಡಿರುವ ಹರಿಯಾನ ಸಂಯುಕ್ತ ದಳಕ್ಕೆ ರಾಜ್ಯ ವಿಧಾನಸಭೆಯಲ್ಲಿ ಬಹುಮತವಿದೆಯೆಂದು ಇಲ್ಲಿ ಇಂದು ಒಪ್ಪಿಕೊಂಡ ಹರಿಯಾನದ ಮುಖ್ಯಮಂತ್ರಿ ಭಗವತ್ ದಯಾಳ್ ಶರ್ಮರವರು, ನಾಳೆ ತಮ್ಮ ಸಂಪುಟದ ರಾಜಿನಾಮೆಯನ್ನು ರಾಜ್ಯಪಾಲರಿಗೆ ಸಲ್ಲಿಸುವುದಾಗಿ ತಿಳಿಸಿದರು. ಈಗ ಸರ್ಕಾರ ರಚಿಸುವುದು ಸಂಯುಕ್ತ ರಂಗಕ್ಕೆ ಸೇರಿದ ಕೆಲಸವಾಗಿದೆಯೆಂದು ಅವರು ನುಡಿದರು.
ಗಡಿ ಆಯೋಗದಿಂದ ಸಾಕ್ಷ್ಯ ಸಂಗ್ರಹ ಕಾರ್ಯಾರಂಭ
ಕಾರವಾರ, ಮಾ. 21– ಮೈಸೂರು– ಮಹಾರಾಷ್ಟ್ರ, ಮೈಸೂರು–ಕೇರಳ ಗಡಿವಿವಾದ ಕುರಿತು ಪರಿಶೀಲಿಸಲು ನೇಮಕಗೊಂಡಿರುವ ಶ್ರೀ ಮೆಹರ್ ಚಂದ್ ಮಹಾಜನ್ ಅವರ ಏಕಸದಸ್ಯ ಗಡಿ ಆಯೋಗವು ಇಂದು ಇಲ್ಲಿನ ಜಿಲ್ಲಾ ಕೋರ್ಟ್ನಲ್ಲಿ ಸಾಕ್ಷ್ಯ ಸಂಗ್ರಹ ಕಾರ್ಯವನ್ನು ಆರಂಭಿಸಿತು.
ಗಡಿ ಆಯೋಗದ ಕಾರ್ಯದರ್ಶಿ ಶ್ರೀ ಎಸ್. ನಾರಾಯಣಸ್ವಾಮಿ ಅವರೊಂದಿಗೆ ನಿನ್ನೆ ಆಗಮಿಸಿದ ಶ್ರೀ ಮಹಾಜನ್ ಅವರನ್ನು ಬೆಳಗಾವಿ ವಿಭಾಗಾಧಿಕಾರಿ ಶ್ರೀ ಜಿ.ಎಸ್. ಶ್ರೀನಿವಾಸನ್ ಅವರು ಗೋವ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿ, ಕಾರವಾರಕ್ಕೆ ಕರೆ ತಂದರು.
ಭಾರತಕ್ಕೆ ಚೀನದ ಅಪಾಯ ಇದ್ದೇ ಇದೆ– ಚಾಗಲಾ
ನವದೆಹಲಿ, ಮಾ. 21– ‘ಚೀನದ ಅಪಾಯ ಸದಾ ಇದ್ದೇ ಇದೆ’ ಎಂದು ವಿದೇಶ ವ್ಯವಹಾರ ಖಾತೆಯ ಸಚಿವ ಶ್ರೀ ಎಂ.ಸಿ. ಚಾಗಲಾ ಇಂದು ರಾಜ್ಯಸಭೆಗೆ ತಿಳಿಸಿದರು.
‘ಸಾಂಸ್ಕೃತಿಕ ಕ್ರಾಂತಿಯು ಭಾರತಕ್ಕೆ ಸಂಬಂಧಿಸಿದಂತೆ ಚೀನದ ನೀತಿಯಲ್ಲಿ ಯಾವುದೇ ವ್ಯತ್ಯಾಸವನ್ನು ಉಂಟು ಮಾಡಿಲ್ಲ’ ಎಂದು ಸೀತಾರಾಮ್ ಜೈಪೂರಿಯ ಅವರಿಗೆ ಸಚಿವರು ತಿಳಿಸಿದರು.