ವಾಸ್ಕೊ : ತನ್ನ ಅಂತಿಮ ಪಂದ್ಯದಲ್ಲಿ ಮಿಂಚಿನ ಆಟ ಆಡಿದ ಮಹಾರಾಷ್ಟ್ರ ತಂಡ 71ನೇ ಸಂತೋಷ್ ಟ್ರೋಫಿ ಫುಟ್ಬಾಲ್ ಟೂರ್ನಿಯ ಪಂದ್ಯದಲ್ಲಿ ಗೆಲುವು ಗಳಿಸಿದೆ.
ಮಂಗಳವಾರ ನಡೆದ ‘ಬಿ’ ಗುಂಪಿನ ಪಂದ್ಯದಲ್ಲಿ ಮಹಾರಾಷ್ಟ್ರ 2–0 ಗೋಲು ಗಳಿಂದ ಕೇರಳ ತಂಡವನ್ನು ಮಣಿಸಿತು. ಇದರೊಂದಿಗೆ ಗುಂಪಿನಲ್ಲಿ ಮೂರನೇ ಸ್ಥಾನ ಗಳಿಸಿ ತನ್ನ ಅಭಿಯಾನ ಮುಗಿಸಿತು. ಮಹಾರಾಷ್ಟ್ರ ತಂಡ ಹೋದ ಬಾರಿ ರನ್ನರ್ಸ್ ಅಪ್ ಸ್ಥಾನ ಗಳಿಸಿತ್ತು.
ಶುರುವಿನಿಂದಲೇ ಚುರುಕಿನ ಆಟಕ್ಕೆ ಒತ್ತು ನೀಡಿದ ಮಹಾರಾಷ್ಟ್ರ ತಂಡ ಹಲವು ಗೋಲು ಗಳಿಸುವ ಅವಕಾಶ ಗಳನ್ನು ಸೃಷ್ಟಿಸಿಕೊಂಡಿತ್ತು. ಆದರೆ ಕೇರಳ ತಂಡದ ರಕ್ಷಣಾ ವಿಭಾಗದ ಆಟಗಾರರು ಎದುರಾಳಿಗಳ ಎಲ್ಲಾ ಪ್ರಯತ್ನಗಳನ್ನು ವಿಫಲಗೊಳಿಸಿದರು.
33ನೇ ನಿಮಿಷದವರೆಗೂ ಸಮಬಲದ ಪೈಪೋಟಿ ಮುಂದುವರಿ ದಿತ್ತು. 34ನೇ ನಿಮಿಷದಲ್ಲಿ ಮಹಾರಾಷ್ಟ್ರ ತಂಡದ ಪ್ರಯತ್ನಕ್ಕೆ ಯಶಸ್ಸು ಲಭಿಸಿತು. ವೈಭವ್ ಶಿರ್ಲೆ ಚೆಂಡನ್ನು ಗುರಿ ಮುಟ್ಟಿಸಿ ಖಾತೆ ತೆರೆದರು. ಆ ನಂತರದ ಅವಧಿಯಲ್ಲಿ ಕೇರಳ ತಂಡ ವೇಗದ ಆಟ ಆಡಿತಾದರೂ ಸಮಬಲದ ಗೋಲು ಗಳಿಸಲು ಮಾತ್ರ ಸಾಧ್ಯವಾಗಲಿಲ್ಲ. ಹೀಗಾಗಿ ಮಹಾರಾಷ್ಟ್ರ ತಂಡ 1–0ರ ಮುನ್ನಡೆ ಯೊಂದಿಗೆ ವಿರಾಮಕ್ಕೆ ಹೋಯಿತು.
ದ್ವಿತೀಯಾರ್ಧದಲ್ಲಿ ಎರಡೂ ತಂಡಗಳು ಗುಣಮಟ್ಟದ ಆಟ ಆಡಿದವು. 58ನೇ ನಿಮಿಷದವರೆಗೂ ಮುನ್ನಡೆ ಕಾಯ್ದುಕೊಂಡಿದ್ದ ಮಹಾರಾಷ್ಟ್ರ ತಂಡ 59ನೇ ನಿಮಿಷದಲ್ಲಿ ಇದನ್ನು ಹೆಚ್ಚಿಸಿಕೊಂಡು ಪಂದ್ಯದ ಮೇಲಿನ ಹಿಡಿತ ಬಿಗಿ ಮಾಡಿಕೊಂಡಿತು. ಆ್ಯರನ್ ಡಿ ಕೋಸ್ಟಾ ಎದುರಾಳಿ ಆವರಣದ ಬಲತುದಿಯಿಂದ ತಮ್ಮತ್ತ ಒದ್ದು ಕಳುಹಿಸಿದ ಚೆಂಡನ್ನು ನಿಯಂ ತ್ರಣಕ್ಕೆ ಪಡೆದ ಶ್ರೀಕಾಂತ್ ವೀರಮಲ್ಲು ಅದನ ಗುರಿ ಮುಟ್ಟಿಸಿ ತಂಡದ ಸಂಭ್ರಮಕ್ಕೆ ಕಾರಣರಾದರು.
ಸೆಮಿಗೆ ಮಿಜೋರಾಂ: ಮಿಜೋರಾಂ ತಂಡ ಸೆಮಿಫೈನಲ್ ಪ್ರವೇಶಿತು. ‘ಬಿ’ ಗುಂಪಿನ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಮಿಜೋರಾಂ 5–1 ಗೋಲುಗಳಿಂದ ರೈಲ್ವೇಸ್ ತಂಡವನ್ನು ಸೋಲಿಸಿತು. ಈ ಮೂಲಕ ಒಟ್ಟು ಪಾಯಿಂಟ್ಸ್ ಅನ್ನು ಏಳಕ್ಕೆ ಹೆಚ್ಚಿಸಿಕೊಂಡು ಗುಂಪಿನಲ್ಲಿ ಎರಡನೇ ಸ್ಥಾನ ತನ್ನದಾಗಿಸಿಕೊಂಡಿತು.
ಕೇರಳ ಕೂಡ ಇಷ್ಟೇ ಅಂಕ ಹೊಂದಿತ್ತು. ಆದರೆ ಲೀಗ್ ಹಂತದ ಪಂದ್ಯದಲ್ಲಿ ಈ ತಂಡ ಮಿಜೋರಾಂ ವಿರುದ್ಧ ಗೆದ್ದಿತ್ತು. ಹೀಗಾಗಿ ಅಗ್ರಸ್ಥಾನ ತನ್ನದಾಗಿಸಿಕೊಂಡಿತು. ಗುರುವಾರ ನಡೆಯುವ ಸೆಮಿಫೈನಲ್ ಪಂದ್ಯದಲ್ಲಿ ಮಿಜೋರಾಂ ತಂಡ ಪಶ್ಚಿಮ ಬಂಗಾಳದ ಸವಾಲು ಎದುರಿಸಲಿದೆ. ಇನ್ನೊಂದು ಪಂದ್ಯದಲ್ಲಿ ಕೇರಳ ತಂಡ ಗೋವಾ ವಿರುದ್ಧ ಸೆಣಸಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.