ಮೂಡಿಗೆರೆ: ರಾಜ್ಯದಲ್ಲಿ ಬಿಸಿಯೂಟ ಕಾರ್ಯಕರ್ತರಿಗೆ ಸರ್ಕಾರ ನೀಡುತ್ತಿರುವ ಸಂಭಾವನೆಯನ್ನು ಹೆಚ್ಚಿಸುವಂತೆ ಜಿಲ್ಲಾ ಪಂಚಾಯಿತಿಯಿಂದ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಆರೋಗ್ಯ ಹಾಗೂ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಬಣಕಲ್ ಶ್ಯಾಮಣ್ಣ ತಿಳಿಸಿದರು.
ಪಟ್ಟಣದ ಸೇಂಟ್ಮಾರ್ಥಾಸ್ ಶಾಲೆಯಲ್ಲಿ ಭಾನುವಾರ ತಾಲ್ಲೂಕಿನ ಬಿಸಿಯೂಟ ಕಾರ್ಯಕರ್ತರಿಗೆ ಏರ್ಪಡಿ ಸಿದ್ದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾಫಿ ತೋಟದಲ್ಲಿ ದುಡಿಯುವ ಕಾರ್ಮಿಕರಿಗೆ ನೀಡುವ ಸಂಭಾವನೆಗೂ, ಬಿಸಿಯೂಟ ಕಾರ್ಯಕರ್ತರಿಗೆ ನೀಡುವ ಸಂಭಾವನೆಗೂ ಅಜಗಜಾಂತರ ವ್ಯತ್ಯಾಸವಿದ್ದು, ಇಡೀ ದಿನ ದುಡಿಯುವ ಅಡುಗೆ ಸಿಬ್ಬಂದಿಗೆ ಕನಿಷ್ಠ ಮೊತ್ತವನ್ನು ನೀಡಲಾಗುತ್ತಿದೆ. ಜಿಲ್ಲಾ ಪಂಚಾಯಿತಿ ಕೆಡಿಪಿ ಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿ ಸಂಭಾವನೆ ಹೆಚ್ಚಳಕ್ಕೆ ಸಭೆಯಿಂದ ಪ್ರಸ್ತಾವನೆ ಕಳುಹಿಸ ಲಾಗುವುದು ಎಂದರು.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ತಾರಾನಾಥ್ ಮಾತನಾಡಿ, ಅಡುಗೆ ಸಿಬ್ಬಂದಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಅಡುಗೆ ತಯಾರಿ ಉತ್ತಮ ಸೇವೆಯಾಗಿದ್ದು, ರುಚಿಕರವಾಗಿ ತಯಾರಿಸಿ ಬಡಿಸಿದರೆ ವಿದ್ಯಾರ್ಥಿಗಳು ತಮ್ಮ ಜೀವನದುದ್ದಕ್ಕೂ ಸ್ಮರಿಸುತ್ತಾರೆ.
ಅಡುಗೆ ತಯಾರಿಯ ವೇಳೆ ಸಂಭವಿಸಬಹುದಾದ ಅವಘಡಗಳ ಕುರಿತು ಮುಂಜಾಗ್ರತೆ ವಹಿಸಬೇಕು ಎಂದರು. ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಕಿರಣ್ಕುಮಾರ್ ಅಡುಗೆ ಸಿಬ್ಬಂದಿ ಜವಾಬ್ದಾರಿ ಹಾಗೂ ಕರ್ತವ್ಯಗಳ ಬಗ್ಗೆ ಮಾಹಿತಿ ನೀಡಿದರು.
ಅಗ್ನಿಶಾಮಕ ಠಾಣಾಧಿಕಾರಿ ಪದ್ಮೇಗೌಡ ಅಡುಗೆ ಮನೆಯಲ್ಲಿ ಬೆಂಕಿ ಅವಘಡಗಳು ಸಂಭವಿಸಿದಾಗ ಕೈಗೊಳ್ಳ ಬೇಕಾದ ಕ್ರಮಗಳ ಬಗ್ಗೆ ಪ್ರಾತ್ಯಕ್ಷಿಕೆ ನಡೆಸಿದರು. ಸಂಪನ್ಮೂಲ ವ್ಯಕ್ತಿ ವೆಂಕಟೇಶ್, ಜಾನಪ್ಪ, ಮಂಜುನಾಥ್, ಜಗದೀಶ್, ಜೈದೀಪ್, ವಿನುತ ಮುಂತಾ ದವರಿದ್ದರು.