ಗದಗ: ಖಾಕಿ ಸಮವಸ್ತ್ರದಲ್ಲಿ ಧರಿಸಿ ಕೈಯಲ್ಲಿ ಉದ್ದದ ದೊಣ್ಣೆ, ತಲೆ ಮೇಲೆ ಟೋಪಿ ಹಾಕಿಕೊಂಡು16 ವರ್ಷದಿಂದ ಕಾಯುಕ ಕಾಯಕದಲ್ಲಿದ್ದಾರೆ ಇವರು. ಆದರೂ, ಇವರು ಪೊಲೀಸಪ್ಪ ಅಲ್ಲ. ಕೆರೆ ನೀರು ಕಾಯುವ ಮಲ್ಲಪ್ಪ.
ಬೆಳಿಗ್ಗೆ 6ರಿಂದ ರಾತ್ರಿ 8 ರವರೆಗೂ ಮಳೆ, ಬಿಸಿಲು, ಚಳಿಯನ್ನೂ ಲೆಕ್ಕಿಸದೆ ಕೆರೆ ಕಾಯುವ ಕೆಲಸ ಮಾಡುತ್ತಾರೆ. ‘ಮುಂದಿನ ಪೀಳಿಗೆಗೂ ಜೀವ ಜಲ ಉಳಿಯಲಿ ಎಂಬ ಆಶಯದಿಂದ ಪ್ರಾಮಾಣಿಕವಾಗಿ ಕೆರೆ ಕಾಯುವ ಕೆಲಸ ಮಾಡುತ್ತಿದ್ದೇನೆ’ ಎನ್ನುತ್ತಾರೆ ಮಲ್ಲಪ್ಪ.
ಬಳಗಾನೂರ ಗ್ರಾಮದ ಕೆರೆ ನೀರನ್ನು ಸದ್ಬಳಕೆಯಾಗುವಂತೆ ಮಲ್ಲಪ್ಪ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ವರ್ಷಪೂರ್ತಿ ನೀರು ಕುಡಿಯಲು ಯೋಗ್ಯವಾಗಿರುವಂತೆ ನೋಡಿಕೊಳ್ಳುತ್ತಿದ್ದಾರೆ.
ಜೀವಜಲ ಸದ್ಬಳಕೆ ಆಗಬೇಕು ಮತ್ತು ನೀರು ಪರಿಶುದ್ಧವಾಗಿರಬೇಕು ಎಂಬ ಉದ್ದೇಶದಿಂದ ಮಲ್ಲಪ್ಪ ತಮ್ಮ ಜೀವನವನ್ನು ಈ ಕೆರೆ ಕಾಯುವ ಕಾಯಕಕ್ಕೆ ಮುಡುಪಾಗಿಟ್ಟಿದ್ದಾರೆ. ಈತ ಗ್ರಾಮದ ಜನರ ಪಾಲಿಗೆ ಭಗೀರಥ. ಜೋರು ಮಳೆ ಬಂದಾಗ ಒಂದು ಎಕರೆ ವಿಸ್ತೀರ್ಣದ ಈ ಕೆರೆ ತುಂಬುತ್ತದೆ. ವರ್ಷಪೂರ್ತಿ ಇದೇ ನೀರನ್ನು ಕುಡಿಯಲು ಜನ ಬಳಸುತ್ತಾರೆ.