ಬೀಳಗಿ: ಕೆರೆಗೆ ನೀರು ತುಂಬುವ ಯೋಜನೆಯಡಿ ₹ 1.98 ಕೋಟಿ ವೆಚ್ಚದ ಪಟ್ಟಣದ ಕೆರೆ ಕಾಮಗಾರಿ ಸೇರಿದಂತೆ ತಾಲ್ಲೂಕಿನ ಎಲ್ಲ ಕೆರೆಗಳಿಗೂ ನೀರು ತುಂಬುವ ಕಾಮಗಾರಿಯನ್ನು ಕೂಡಲೇ ಕೈಗೆತ್ತಿಕೊಳ್ಳಬೇಕೆಂದು ಒತ್ತಾಯಿಸಲಾಯಿತು.
ಪಟ್ಟಣದ ಮಲ್ಲಿಕಾರ್ಜುನ ದೇಗುಳದಲ್ಲಿ ಭಾರತೀಯ ಕಿಸಾನ್ ಸಂಘ, ತಾಲ್ಲೂಕು ಸಾರ್ವಜನಿಕ ಹಿತ ರಕ್ಷಣಾ ವೇದಿಕೆ ಸಂಯುಕ್ತವಾಗಿ ಸಂಘಟಿಸಿದ್ದ ಸಭೆಯಲ್ಲಿ ಸಂಘಟನೆಗಳ ಪ್ರಮುಖರು ಮಾತನಾಡಿದರು.
ಗಲಗಲಿ ಬಳಿ ಕೃಷ್ಣಾ ನದಿಯಿಂದ ನೀರನ್ನು 10 ಕಿ.ಮೀ.ದೂರದ ಘಟಪ್ರಭಾ ಕಾಲುವೆಗೆ (ಎಕ್ಕಾಹತ್ತರ ವರೆಗೆ) ಸಾಗಿಸಿದರೆ ಸಂಪೂರ್ಣ ಬೀಳಗಿ ತಾಲ್ಲೂಕು, ಮುಧೋಳ ತಾಲ್ಲೂಕಿನ ಜಮೀನುಗಳು ಸಂಪೂರ್ಣವಾಗಿ ನೀರಾವರಿಗೊಳಪಡುತ್ತವೆ. ಜೊತೆಗೆ ಜಿ.ಎಲ್.ಬಿ.ಸಿ. ಕಾಲುವೆ ಮೇಲಿರುವ ಒತ್ತಡ ಕಡಿಮೆಯಾಗುತ್ತದೆ ಎಂದು ಸಲಹೆ ಮಾಡಲಾಯಿತು.
ತಾಲ್ಲೂಕಿನ 19 ಗ್ರಾಮಗಳ 2,793 ರೈತರ 3,238 ಹೆಕ್ಟೇರ್ ಜಮೀನಿಗೆ 2016–17ನೇ ಸಾಲಿನಲ್ಲಿ ಹಿಂಗಾರು ಹಂಗಾಮಿನ ತೇವಾಂಶ ಕೊರತೆಯಿಂದಾದ ₹ 80.51 ಲಕ್ಷ ಬೆಳೆ ಪರಿಹಾರ ಇನ್ನೂ ದೊರೆತಿಲ್ಲವೆಂದು ಸಭೆಯಲ್ಲಿ ವಿಷಾದಿಸಲಾಯಿತು.
ಸವುಳು, ಜವುಳು ಭೂಮಿಯ ಸುಧಾರಣೆಗೆ ಒತ್ತಾಯಿಸಿದ ಸಭೆ ಪಟ್ಟಣದ ರಸ್ತೆ ವಿಸ್ತರಣೆ, ಆಮೆಗತಿಯಲ್ಲಿ ಸಾಗಿರುವ ಒಳಚರಂಡಿ ಕಾಮಗಾರಿಗಳನ್ನು ತ್ವರಿತವಾಗಿ ಮುಗಿಸಲು ಸಂಬಂಧಿಸಿದವರನ್ನು ಒತ್ತಾಯಿಸಿತು.
ಕೃಷ್ಣಾ ಮೇಲ್ದಂಡೆ ಯೋಜನೆಯ ಸಂತ್ರಸ್ತರ ಸಮಿತಿ ಒಡೆದು ಈಗಾಗಲೇ ಮೂರಾಗುವ ಹಂತ ತಲುಪಿದೆ. ಹೀಗಾಗುವುದರಿಂದ ಸಂತ್ರಸ್ತರಿಗೆ ಸರಿಯಾದ ನ್ಯಾಯ ಸಿಗುವುದಿಲ್ಲ. ಅಧಿಕಾರಿಗಳು ಒಡಕಿನ ಲಾಭ ಪಡೆದುಕೊಂಡು ಉದಾಸೀನ ಮಾಡುತ್ತ ಹೋಗುತ್ತಾರೆ. ಸರ್ಕಾರವೂ ನಿರ್ಲಕ್ಷಿಸುತ್ತದೆ.