ಹಾಸನ: ಯುವ ಜನಾಂಗ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡು ಉತ್ತಮ ಸಮಾಜದ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಜಿಲ್ಲಾ ಯುವ ರೆಡ್ಕ್ರಾಸ್ ಸಲಹಾ ಸಮಿತಿ ಸದಸ್ಯೆ ಬಿ.ವೇದಾವತಿ ಸಲಹೆ ನೀಡಿದರು.
ಸರ್ಕಾರಿ ಕಾನೂನು ಕಾಲೇಜು ಹಾಗೂ ಹಾಸನಾಂಬ ದಂತ ಮಹಾ ವಿದ್ಯಾಲಯದ ಆಶ್ರಯದಲ್ಲಿ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಉಚಿತ ದಂತ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಸ್ವಾರ್ಥ ಹೆಚ್ಚಾಗಿದೆ. ಎಲ್ಲರೂ ವೈಯಕ್ತಿಕ ಜೀವನದ ಬಗ್ಗೆ ಕಾಳಜಿ ವಹಿಸುತ್ತಿರುವ ಸ್ಥಿತಿಯಲ್ಲಿ ರೆಡ್ಕ್ರಾಸ್ ಸಂಸ್ಥೆ ಸಾಮಾಜಿಕ ಸೇವೆಯಲ್ಲಿ ತೊಡಗಿರುವುದು ಶ್ಲಾಘನೀಯ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ಮಡಿವಾಳಪ್ಪ ಮಾಟೊಳ್ಳಿ ಮಾತನಾಡಿ, ಯೂಥ್ ರೆಡ್ ಕ್ರಾಸ್ ಘಟಕದಿಂದ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಆರೋಗ್ಯವಂತ ಜೀವನ ನಡೆಸಲು ಆರೋಗ್ಯದ ಅಗತ್ಯವಿದ್ದು, ಉಚಿತವಾಗಿ ಏರ್ಪಡಿಸುವ ಆರೋಗ್ಯ ಶಿಬಿರಗಳ ಸದುಪಯೋಗವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಯುವ ರೆಡ್ಕ್ರಾಸ್ ರಾಜ್ಯ ನಿರ್ದೇಶಕ ಕೃಷ್ಣಪ್ಪ, ಹಾಸನಾಂಬ ದಂತ ಮಹಾ ವಿದ್ಯಾಲಯದ ವೈದ್ಯ ಎಂ.ಆರ್ .ಡಾ.ವಿವೇಕಾನಂದ, ಯೂಥ್ ರೆಡ್ ಕ್ರಾಸ್ ಘಟಕದ ಸಂಯೋಜಕ ಶಿವಣ್ಣ ನಾಯ್ಕ, ಹಾಸನಾಂಬ ದಂತ ಮಹಾ ವಿದ್ಯಾಲಯದ ಡಾ.ಪ್ರವೀಣ್ ಇದ್ದರು.