ಹನೂರು: ನಗರೀಕರಣದಿಂದಾಗಿ ಸಮೃದ್ಧವಾಗಿದ್ದ ಅರಣ್ಯ ಪ್ರದೇಶ ನಶಿಸುತ್ತಿದೆ. ಈ ಪ್ರಕ್ರಿಯೆ ಹೀಗೆ ಮುಂದುವರಿದರೆ ಭವಿಷ್ಯದಲ್ಲಿ ಗಂಡಾಂತರ ಎದುರಾಗಲಿದೆ ಎಂದು ಕಾವೇರಿ ವನ್ಯಜೀವಿಧಾಮದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎನ್. ಅಂಕರಾಜು ಎಚ್ಚರಿಕೆ ನೀಡಿದರು.
ಕಾವೇರಿ ವನ್ಯಜೀವಿಧಾಮ ಹಾಗೂ ಮಲೆಮಹದೇಶ್ವರ ವನ್ಯಜೀವಿಧಾಮದ ಆಶ್ರಯದಲ್ಲಿ ಮಂಗಳವಾರ ಪಟ್ಟಣದ ಅರಣ್ಯ ಇಲಾಖೆ ಆವರಣದಲ್ಲಿ ನಡೆದ ಅಂತರರಾಷ್ಟ್ರೀಯ ಅರಣ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಚಾಮರಾಜನಗರ ಜಿಲ್ಲೆಯ ಶೇ 50ಕ್ಕೂ ಭಾಗ ಅರಣ್ಯದಿಂದ ಆವೃತ್ತವಾಗಿದೆ. ಅಲ್ಲದೇ ರಾಜ್ಯದಲ್ಲೇ ಅತಿ ಹೆಚ್ಚು ವಿಸ್ತೀರ್ಣವನ್ನು (1027 ಚ.ಕಿ.ಮೀ) ಹೊಂದಿರುವ ಕಾವೇರಿ ವನ್ಯಜೀವಿಧಾಮ ಜಿಲ್ಲೆಯಲ್ಲಿರುವುದು ಹೆಮ್ಮೆಯ ಸಂಗತಿ. ಅಲ್ಲದೆ ಹನೂರು ಕ್ಷೇತ್ರವ್ಯಾಪ್ತಿಗೆ ಎರಡು ವನ್ಯಜೀವಿಧಾಮ ಹಾಗೂ ಹುಲಿ ಸಂರಕ್ಷಿತ ಪ್ರದೇಶ ಒಳಪಟ್ಟಿದೆ. ಇಂತಹ ಸಮೃದ್ಧ ಅರಣ್ಯ ಸಂಪತ್ತನ್ನು ಸಂರಕ್ಷಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದರು.
ದಿನವಿಡೀ ಎಡಬಿಡದೆ ಸುರಿಯುತ್ತಿದ್ದ ಮಳೆ ಇಂದು ಮಾಯವಾಗಿದೆ. ಇದಕ್ಕೆ ಕಾರಣ ದಿನೇ ದಿನೇ ಅರಣ್ಯದ ವಿಸ್ತೀರ್ಣ ಕಡಿಮೆಗೊಳ್ಳುತ್ತಿರುವುದು. ಪರಿಸರ ನಾಶದಿಂದ ಪ್ರಕೃತಿ ವಿಕೋಪವುಂಟಾಗುವುದಲ್ಲದೆ ವನ್ಯಜೀವಿಗಳ ಮೇಲೂ ಅದು ಪರಿಣಾಮ ಬೀರಲಿದೆ ಎಂದರು.
ಪರಿಸರವನ್ನು ಸಂರಕ್ಷಿಸಲು ಸರ್ಕಾರವೂ ಸಹ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದೆ. ಅಲ್ಲದೇ ಸರ್ಕಾರೇತರ ಸಂಘ ಸಂಸ್ಥೆಗಳು ಸಹ ಅರಣ್ಯದಂಚಿನ ಗ್ರಾಮಗಳಲ್ಲಿ ಪ್ರಕೃತಿ ಶಿಬಿರ ಮತ್ತು ಕಾರ್ಯಾಗಾರವನ್ನು ಹಮ್ಮಿಕೊಳ್ಳವುದರ ಮೂಲಕ ಜಾಗೃತಿ ಮೂಡಿಸುತ್ತಿದೆ. ಶಾಲಾ ಕಾಲೇಜುಗಳಲ್ಲಿ ಸಹ ಉಪನ್ಯಾಸಕರು ಮಕ್ಕಳಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಅರಣ್ಯವನ್ನು ಬೆಳೆಸಲು ಪ್ರೇರೇಪಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ವಲಯ ಅರಣ್ಯಾಧಿಕಾರಿ ಬಿ.ಸಿ.ಲೋಕೇಶ್, ವಿವೇಕನಂದಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಮಧುಸೂಧನ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.