ಮದ್ದೂರು: ಬೇಸಿಗೆಯಿಂದ ಬಳವಳಿದಿರುವ ಜನ, ಜಾನುವಾರುಗಳಿಗೆ ಅನುಕೂಲವಾಗಲಿ ಎಂದು ಕೃಷಿಕರೊಬ್ಬರು ತಮ್ಮ ಜಮೀನಿಗೆ ನೀರು ಹಾಯಿಸಲು ಎಂದು ಕೊರೆಯಿಸಿದ್ದ ಎರಡು ಕೊಳವೆಬಾವಿಗಳಿಂದ ಕೆರೆ ತುಂಬಿಸುತ್ತಿದ್ದಾರೆ.
ಹೆಮ್ಮನಹಳ್ಳಿ ಗ್ರಾಮದ ಹಾಲಿನ ವ್ಯಾಪಾರ ಮಾಡುವ ಕೃಷ್ಣಪ್ಪ ಮೂಲತಃ ಕೃಷಿಕರು. ಕಳೆದ ಎರಡೂವರೆ ತಿಂಗಳ ಹಿಂದೆ ಜಮೀನಿನಲ್ಲಿದ್ದ ತೆಂಗಿನ ಮರಗಳ ರಕ್ಷಣೆಗಾಗಿ ಕೊಳವೆಬಾವಿ ಕೊರೆಯಿಸಿದ್ದರು. ಈಗ ಆ ಕೊಳವೆಬಾವಿಗಳಿಂದ ಕೆರೆ ನೀರು ಹರಿಸುವ ಮೂಲಕ ‘ಆಧುನಿಕ ಭಗೀರಥ’ ನಾಗಿದ್ದಾರೆ.
ಗ್ರಾಮದ ಜೀವನಾಡಿ ಕೆರೆ ಬತ್ತಿ ಹೋದುದ್ದನ್ನು ಕಂಡು ಮಮ್ಮಲ ಮರುಗಿದರು. ತಮ್ಮ ಜಮೀನಿಗೆ ಹರಿ ಬಿಡುತ್ತಿದ್ದ ನೀರನ್ನು ನಿಲ್ಲಿಸಿ, ಕೆರೆಯೆಡೆಗೆ ತಿರುಗಿಸುವ ಮೂಲಕ ಉದಾರತೆ ಮೆರೆದಿದ್ದಾರೆ.
ಜಮೀನಿನಲ್ಲಿರುವ ತೆಂಗಿನ ಮರಗಳು ಒಣಗುತ್ತಿದ್ದರೂ, ಕೆರೆ ತುಂಬಿಸುವ ಕಾರ್ಯ ಕಂಡು ಜಿಲ್ಲಾಡಳಿತವು ಕೃಷ್ಣ ಅವರಿಗೆ ತಿಂಗಳಿಗೆ ₹ 18 ಸಾವಿರ ನೆರವು ನೀಡುವುದಾಗಿ ತಿಳಿಸಿತು. ಆದರೆ, ಆ ನೆರವನ್ನು ಕೃಷಿಕರು ನಿರಾಕರಿಸಿದ್ದಾರೆ.
‘ಗ್ರಾಮದವನಾಗಿ ಸಣ್ಣದಾದ ಸೇವೆ ಮಾಡುತ್ತಿದ್ದೇನೆ. ಈ ಸೇವೆಗೆ ಹಣ ಪಡೆಯುವುದು ಸರಿಯಲ್ಲ’ ಎನ್ನುತ್ತಾರೆ ಅವರು.ಹೆಮ್ಮನಹಳ್ಳಿ ಗ್ರಾಮ ಪಂಚಾಯತಿ ವತಿಯಿಂದಲೂ ಶಾಸಕರ ಅನುದಾನದಲ್ಲಿ ಹೊಸದಾಗಿ ಕೊಳವೆಬಾವಿ ಕೊರೆಯಿಸಿ ಕೆರೆಗೆ ನೀರು ತುಂಬಿಸುವ ಕೆಲಸಕ್ಕೆ ಮುಂದಾಗಿದೆ.
‘ಹೆಮ್ಮನಹಳ್ಳಿ ಕೆರೆ ನಮ್ಮೂರಿನ ಹೆಮ್ಮೆಯ ಪ್ರತೀಕ. ಈ ಕೆರೆ ಹಿಂದೆ ಸರೋವರದಂತೆ ಕಂಗೊಳಿಸುತ್ತಿತ್ತು. ಈ ವರ್ಷ ತೀವ್ರ ಬರಗಾಲದಿಂದ ನೀರಿಲ್ಲದೇ ಒಣಗಿದೆ. ಪ್ರಾಣಿ, ಪಕ್ಷಿಗಳ ಸಂಕಷ್ಟ ಕಂಡು ನೀರು ಹರಿಸುವ ನಿರ್ಧಾರವನ್ನು ಸ್ವ ಇಚ್ಛೆಯಿಂದ ಕೈಗೊಂಡೆ’ ಎನ್ನುತ್ತಾರೆ ಕೃಷ್ಣ.