ಹುಬ್ಬಳ್ಳಿ: ‘ರಾಜ್ಯದಲ್ಲಿ ಸರಿಯಾಗಿ ಮಳೆ ಬಾರದೆ ಕಾರಣ ಬರಗಾಲ ಬಂದಿದೆ. ಎಲ್ಲ ಕಡೆ ನೀರಿಗಾಗಿ ಹಾಹಾಕಾರ ಎದ್ದಿದೆ. ಹೀಗಾಗಿ ನಾವು ಹೋಟೆಲ್ ಉದ್ಯಮಗಳಲ್ಲಿ ನೀರನ್ನು ಮಿತವಾಗಿ ಬಳಸಬೇಕಾಗಿದೆ’ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಕೃಷ್ಣಾ ಉಚ್ಚಿಲ್ ತಿಳಿಸಿದರು.
ರೋಟರಿ ಕ್ಲಬ್ ಆಪ್ ಹುಬ್ಬಳ್ಳಿ ಮಿಡ್ಟೌನ್ ಹಾಗೂ ಹುಬ್ಬಳ್ಳಿ- ಧಾರವಾಡ ಹೋಟೆಲ್ ಮಾಲೀಕರ ಸಂಘದ ಸಹಯೋಗದಲ್ಲಿ ‘ವಿಶ್ವ ಜಲ ದಿನಾಚರಣೆ’ ಅಂಗವಾಗಿ ನಡೆದ ಸಮಾ ರಂಭದಲ್ಲಿ ಅವರು ಮಾತನಾಡಿದರು.
‘ಹೋಟೆಲ್ ನಡೆಸಲು ನೀರು ಬೇಕೇಬೇಕು. ನಾವು ಇಲ್ಲಿಯವರೆಗೆ ಬಹಳಷ್ಟು ನೀರನ್ನು ಪೋಲು ಮಾಡುತ್ತಿ ದ್ದೆವು. ಆದರೆ ಈಗ ಕಾಲ ಬದಲಾಗಿದೆ. ನಾವು ಎಲ್ಲೆಲ್ಲಿ ನೀರನ್ನು ಉಳಿಸಲು, ಮಿತವಾಗಿ ಬಳಸಲು ಸಾಧ್ಯವಾ ಗುತ್ತದೆಯೋ ಅಲ್ಲಲ್ಲಿ ನಾವು ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ’ ಎಂದರು.
ಹೋಟೆಲ್ ಮಾಲೀಕರ ಸಂಘದ ಮಾಜಿ ಅಧ್ಯಕ್ಷ ಸುಧಾಕರ ಶೆಟ್ಟಿ ಮಾತ ನಾಡಿ, ‘ಮೊದಲು ನಾವು ನಮ್ಮ ಮನೆ ಗಳಲ್ಲಿ ನೀರನ್ನು ಮಿತವಾಗಿ ಬಳಸಲು ಪ್ರಾರಂಭಿಸಬೇಕು, ನಂತರ ಇತರರಿಗೂ ನೀರಿನ ಮಹತ್ವವನ್ನು ತಿಳಿಸಬೇಕು’ ಎಂದು ಹೇಳಿದರು.
ರೋಟರಿ ಕ್ಲಬ್ ಆಫ್ ಹುಬ್ಬಳಿ ಮಿಡ್ಟೌನ್ ಅಧ್ಯಕ್ಷ ಲಿಂಗರಾಜ ಪಾಟಿಲ ಮಾತನಾಡಿ, ‘ನೀರನ್ನು ಮಿತವಾಗಿ ಬಳಸಿರಿ’, ’ನೀರನ್ನು ಉಳಿಸಿರಿ’ ಎಂಬ ಸ್ಟಿಕ್ಕರ್ಗಳನ್ನು ಹೋಟೆಲ್ಗಳಲ್ಲಿ ಕೈತೊಳೆ ಯುವ ಸ್ಥಳದಲ್ಲಿ ಹಚ್ಚಿ ಜನ ಜಾಗೃತಿ ಮಾಡಬೇಕೆಂದು ವಿನಂತಿಸಿದರು.
ಹೋಟೆಲ್ ಸಂಘದ ಸದಸ್ಯರಾದ ಸರ್ವೋತ್ತಮ ಕಾಮತ, ಪ್ರಕಾಶ ರಾವ, ರಾಜೇಂದ್ರ ಶೆಟ್ಟಿ, ದೀಪಕ ಶೆಟ್ಟಿ, ಸುಂದರ ಪೂಜಾರಿ, ಸರ್ವೋತ್ತಮ ಶೆಟ್ಟಿ ಅಲ್ಲದೇ ರೋಟರಿ ಸದ್ಯಸ್ಯರಾದ ಅವಿನಾಶ ಕುರ್ತಕೋಟಿ, ಗಿರೀಶ ಕುಲಕರ್ಣಿ, ಪ್ರಭುರಾಜ ಪಾಟೀಲ, ರೋಟರಿ ಕಾರ್ಯದರ್ಶಿ ಅನೀಸ ಖೋಜೆ, ಶಿವಪ್ರಸಾದ ಲಕಮನಹಳ್ಳಿ ಇದ್ದರು.