ಬೆಂಗಳೂರು: ‘ಮಹಾದಾಯಿ ಮತ್ತು ಕಾವೇರಿ ಹೋರಾಟಕ್ಕೆ ಸಂಬಂಧಿಸಿದಂತೆ ರೈತರ ಮೇಲಿನ ಎಲ್ಲ ಮೊಕದ್ದಮೆಗಳನ್ನು ಸರ್ಕಾರ ಹಿಂದಕ್ಕೆ ಪಡೆದಿದೆ’ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ವಿಧಾನಪರಿಷತ್ತಿನಲ್ಲಿ ಗುರುವಾರ ಕಾಂಗ್ರೆಸ್ನ ಎಂ.ನಾರಾಯಣ ಸ್ವಾಮಿ, ಬಿಜೆಪಿಯ ರಾಮಚಂದ್ರಗೌಡ ಮತ್ತು ತಾರಾ ಅನೂರಾಧ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು.
ಕಾವೇರಿ ಹೋರಾಟದ ಸಂದರ್ಭದಲ್ಲಿ ರೈತರ ಮೇಲೆ ದಾಖಲಾಗಿದ್ದ 25 ಮೊಕದ್ದಮೆಗಳು ಮತ್ತು ಮಹಾದಾಯಿ ಹೋರಾಟದ ಸಂದರ್ಭದಲ್ಲಿ ದಾಖಲಾಗಿದ್ದ 51 ಪ್ರಕರಣಗಳನ್ನು ಹಿಂದಕ್ಕೆ ಪಡೆಯಲಾಗಿದೆ.
ಮಹಾದಾಯಿ ರೈತರ ಚಳವಳಿ ಸಂದರ್ಭ ದಾಖಲಿಸಲಾಗಿದ್ದ ಒಟ್ಟು ಮೊಕದ್ದಮೆಗಳಲ್ಲಿ, ಈಗಾಗಲೇ 51 ಪ್ರಕರಣಗಳನ್ನು ಹಿಂದಕ್ಕೆ ಪಡೆಯಲಾಗಿದೆ. ಉಳಿದ 25 ಪ್ರಕರಣಗಳನ್ನು ಹಿಂದಕ್ಕೆ ಪಡೆಯುವ ಪ್ರಕ್ರಿಯೆ ನಡೆದಿದೆ ಎಂದರು.
‘ಈ ಹೋರಾಟದ ಸಂದರ್ಭದಲ್ಲಿ 9 ಸರ್ಕಾರಿ ಕಚೇರಿಗಳಿಗೆ ಬೆಂಕಿ ಹಾಕಲಾಗಿತ್ತು. ಸಾಕಷ್ಟು ಕಡತಗಳು ಸುಟ್ಟು ಹೋದವು. ಆದರೂ ರೈತರ ಹಿತದೃಷ್ಟಿಯಿಂದ ಮೊಕದ್ದಮೆಯನ್ನು ಹಿಂದಕ್ಕೆ ಪಡೆಯಲು ತೀರ್ಮಾನಿಸಿದ್ದೇವೆ’ ಎಂದು ಹೇಳಿದರು.