ಹುಳಿಯಾರು: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುವ ಸಂತೆ, ಬಸ್ ನಿಲ್ದಾಣಕ್ಕೆ ಬರುವ ಖಾಸಗಿ ಬಸ್ ಗಳ ಸುಂಕ ಹಾಗೂ ಪುಟ್ಪಾತ್ ನಲ್ಲಿರುವ ಅಂಗಡಿಗಳಿಂದ ಪ್ರಸಕ್ತ ಸಾಲಿನ ಸುಂಕ ವಸೂಲಾತಿಗಾಗಿ ಪಂಚಾಯಿತಿ ಆವರಣದಲ್ಲಿ ಬಹಿರಂಗ ಹರಾಜು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾಪ್ರದೀಪ್ ಅಧ್ಯಕ್ಷತೆಯಲ್ಲಿ ಬುಧವಾರ ನಡೆಯಿತು.
ಹರಾಜಿನಲ್ಲಿ ಒಟ್ಟು 17 ಜನ ಭಾಗವಹಿಸಿದ್ದರು. ಪ್ರತಿ ಗುರುವಾರ ನಡೆಯುವ ಸಂತೆಯಲ್ಲಿ ಹಾಕುವ ಅಂಗಡಿಗಳಿಂದ ಸುಂಕ ವಸೂಲಾತಿ ಮಾಡಲು ಕುಮಾರ್ ನಾಯ್ಕ ಎಂಬುವವರಿಗೆ ₹ 2.94 ಲಕ್ಷಕ್ಕೆ ಹರಾಜು ನಿಂತಿತು.
ಹುಳಿಯಾರಿನ ಬಸ್ ನಿಲ್ದಾಣಕ್ಕೆ ಬರುವ ಖಾಸಗಿ ಬಸ್ ಗಳಿಂದ ನಿತ್ಯ ಸುಂಕ ವಸೂಲಿ ಮಾಡಲು ₹ 1.68 ಲಕ್ಷಕ್ಕೆ ಸೈಯದ್ ಮುನಾವರ್ ಹರಾಜು ಕೂಗಿದರು.
ಪಂಚಾಯಿತಿ ಜಾಗದಲ್ಲಿಹಾಗೂ ಪುಟ್ಪಾತ್ನಲ್ಲಿ ಹಾಕಿ ಕೊಂಡಿರುವ ಅಂಗಡಿಗಳಿಂದ ನಿತ್ಯ ಸುಂಕ ವಸೂಲಾತಿ ಮಾಡಲು ನಡೆದ ಹರಾಜು ತೀವ್ರ ಏರಿಕೆ ಕಂಡು ಚನ್ನಕೇಶವ ಎಂಬುವವರು ₹ 3.52ಲಕ್ಷಕ್ಕೆ ಹರಾಜು ಕೂಗಿ ತಮ್ಮದಾಗಿಸಿಕೊಂಡರು.
ಈ ಸುಂಕ ವಸೂಲಾತಿ ಮಾರ್ಚ್ 2018ರ ವರೆಗೆ ಜಾರಿಯಲ್ಲಿರುತ್ತದೆ. ಅಲ್ಲದೆ ಪಟ್ಟಣದ ಎಂಪಿಎಸ್ ಶಾಲಾ ಆವರಣದಲ್ಲಿರುವ ಶಿಥಿಲಗೊಂಡಿರುವ ನೀರು ಸರಬರಾಜಿನ ನೀರಿನ ಟ್ಯಾಂಕನ್ನು ಬಿಳಿಸಲು ಗುಜರಿ ನಾಗಣ್ಣ ₹ 10 ಸಾವಿರಕ್ಕೆ ಹರಾಜು ಕೂಗಿದರು. ಒಟ್ಟಾರೆ ಹರಾಜು ಪ್ರಕ್ರಿಯೆಯಿಂದ ₹ 8.24 ಲಕ್ಷ ಜಮಾವಣೆಗೊಂಡಿದೆ.
ಪಿಡಿಒ ಕೃಷ್ಣಾಬಾಯಿವಿಠ್ಠಲ್ ಬಂಡಾರಿ, ಉಪಾಧ್ಯಕ್ಷ ಗಣೇಶ್, ಕಾರ್ಯದರ್ಶಿ ಉಮಾಮಹೇಶ್, ಸದಸ್ಯರುಗಳಾದ ಹೇಮಂತ್, ಜಬೀಉಲ್ಲಾ, ಗೀತಾಬಾಬು, ಬಿಂಧುಬಾಬು, ಪುಟ್ಟಮ್ಮ, ಡಿಶ್ ಬಾಬು, ಡಾಬಾ ಸೂರಪ್ಪ, ಕೆಂಪಮ್ಮ, ಮಾಮಾಜಿಗ್ನಿ, ಜಯಮ್ಮ, ಕೋಳಿ ಶ್ರೀನಿವಾಸ್, ಚಂದ್ರಶೇಖರ್ ಇದ್ದರು.