ಕುಂದಾಪುರ: ಉಡುಪಿ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದ ಸಂದರ್ಭ ದಲ್ಲಿಯೇ ಬೈಂದೂರು ಹಾಗೂ ಬ್ರಹ್ಮಾವ ರನ್ನು ತಾಲ್ಲೂಕು ರಚನೆ ಮಾಡುವಂತೆ ಪ್ರಸ್ತಾವನೆ ಮಾಡಲಾಗಿತ್ತು. ಜಿಲ್ಲೆಯಲ್ಲಿ ಮೂರು ತಾಲ್ಲೂಕು ಘೋಷಣೆಯಾಗು ವುದರೊಂದಿಗೆ ಕಾಪು ತಾಲ್ಲೂಕು ಬೋನಸ್ ಆಗಿ ದೊರಕಿದೆ ಎಂದು ಮಾಜಿ ಸಂಸದ ಕೆ.ಜಯಪ್ರಕಾಶ ಹೆಗ್ಡೆ ಹೇಳಿದರು.
ಇಲ್ಲಿನ ಬಿಜೆಪಿ ಕ್ಷೇತ್ರ ಸಮಿತಿಯ ಕಚೇರಿಗೆ ಗುರುವಾರ ಸಂಜೆ ಭೇಟಿ ನೀಡಿದ ಅವರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ನಾನು ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಬಂದಿರುವುದಾಗಿ ಹೇಳಲಾಗುತ್ತಿದೆ. ಆದರೆ ವಾಸ್ತವವಾಗಿ ನಾನು ಪಕ್ಷೇತರ ನಾಗಿಯೇ ಬಿಜೆಪಿ ಸೇರಿದ್ದೇನೆ.
ತಲ್ಲೂರು ಸೇತುವೆಯಿಂದ ಆಚೆ ಇರುವುವವರು ಕೂಡ ಹೊಸದಾಗಿ ರಚನೆಗೊಳ್ಳುತ್ತಿರುವ ಬೈಂದೂರು ತಾಲ್ಲೂಕಿಗೆ ನಮ್ಮನ್ನು ಸೇರಿಸದೆ ಕುಂದಾಪುರದಲ್ಲಿಯೇ ಉಳಿಸಿಕೊಳ್ಳುವಂತೆ ಆಗ್ರಹಿಸುತ್ತಿದ್ದಾರೆ. ಯಾವುದೇ ಒಳ್ಳೆಯ ಕೆಲಸವನ್ನು ಮಾಡುವಾಗಲೂ ಪ್ರಾರಂಭದಲ್ಲಿ ಆಕ್ಷೇಪ ಗಳು ಇದ್ದೆ ಇರುತ್ತದೆ. ಕಾಲ ಕಳೆದಂತೆ ಅದರ ಉದ್ದೇಶದ ಅರಿವಾಗುತ್ತದೆ.
ನಾನು ಶಾಸಕನಾಗಿದ್ದಾಗ ಗುಲ್ವಾಡಿ ಮತ್ತು ಬಳ್ಕೂರು ನಡುವೆ ಡ್ಯಾಂ ಮಾಡಿಸಲಾಗಿತ್ತು. ಜನಪ್ರತಿನಿಧಿಗಳಿಗೆ ಎಲ್ಲವೂ ತಿಳಿದಿರುವುದಿಲ್ಲ, ನಮ್ಮೂರಿನ ಜನರ ಅವಶ್ಯಕತೆಗಳನ್ನು ಜನಪ್ರತಿನಿಧಿ ಗಳ ಬಳಿ ಹೇಳಿ ಅವರಿಂದ ಕೆಲಸ ಮಾಡಿಸಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬ ಕಾರ್ಯಕರ್ತರ ಮೇಲೆ ಇದೆ.
ರಾಜಕೀಯವನ್ನೇ ವೃತ್ತಿಯಾಗಿ ತೆಗೆದು ಕೊಂಡವರಲ್ಲಿ ಪ್ರಾಮಾಣಿಕತೆಯ ಕೊರತೆ ಇರುತ್ತದೆ. ನಾವೆಲ್ಲ ವೃತ್ತಿಯ ಜತೆಗೆ ರಾಜಕೀಯದಲ್ಲಿಯೂ ಸಕ್ರಿಯರಾಗಿರು ವುದರಿಂದ ಪ್ರಾಮಾಣಿಕತೆ ಉಳಿಸಿ ಕೊಳ್ಳಲು ಸಾಧ್ಯವಾಗಿದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಈಚೆಗೆ ನಡೆದ ಪಂಚರಾಜ್ಯ ಚುನಾವಣೆ ಯಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಿದೆ. ಚುನಾವಣಾ ಸಮೀಕ್ಷೆಗಳನ್ನು ಮೀರಿ ಬಿಜೆಪಿ ಸಾಧನೆ ಮಾಡಿದೆ. ಜಯಪ್ರಕಾಶ್ ಹೆಗ್ಡೆ ಅವರಾಗಿಯೇ ಬಿಜೆಪಿಗೆ ಬಂದಿರುವುದಲ್ಲ. ನಾವು ಅವರನ್ನ ಕರೆಯಿಸಿಕೊಂಡಿರುವುದು. ಹೆಗ್ಡೆ ಬಂದಿರುವುದರಿಂದ ಬಿಜೆಪಿಗೆ ಆನೆಬಲ ಬಂದಿದೆ.
ಸಾಮಾಜಿಕ ಜಾಲ ತಾಣಗಳಲ್ಲಿ ಪಕ್ಷ ವಿರೋಧಿ ಸಂದೇಶ ಗಳು ರವಾನೆಯಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಪಕ್ಷದ ಕಾರ್ಯಕರ್ತರು ಇಂತಹ ಸಂದೇಶಗಳನ್ನು ಫಾರ್ವರ್ಡ್ ಮಾಡ ದಂತೆ ವಿನಂತಿಸಿದ ಅವರು, ಈ ರೀತಿ ಸಂದೇಶ ಕಳಹಿಸಿದ ಪಕ್ಷದ ಕಾರ್ಯಕರ್ತರಿಗೆ ನೋಟಿಸು ನೀಡಲಾಗುತ್ತದೆ ಎಂದು ಎಚ್ಚರಿಸಿದರು.
ಕುಂದಾಪುರ ಬಿಜೆಪಿ ಮಂಡಲ ಅಧ್ಯಕ್ಷ ಕಾಡೂರು ಸುರೇಶ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಬಿಜೆಪಿ ಮೀನು ಗಾರರ ಪ್ರಕೋಷ್ಠದ ಮಾಜಿ ಸಂಚಾಲಕ ಬಿ.ಕಿಶೋರಕುಮಾರ, ಬಿಜೆಪಿ ಕ್ಷೇತ್ರ ಸಮಿತಿ ಉಪಾಧ್ಯಕ್ಷರಾದ ಪ್ರಕಾಶ್ ಮೆಂಡನ್, ಸುರೇಶ್ ನಾಯ್ಕ ಕುಯಿ ಲಾಡಿ,
ಜಿಲ್ಲಾ ಹಿಂದುಳಿದ ಮೋರ್ಚಾ ಅಧ್ಯಕ್ಷ ರಾಜೇಶ್ ಕಾವೇರಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ತಾರಾನಾಥ ಶೆಟ್ಟಿ, ರಾಘವೇಂದ್ರ ಕಾಂಚನ್, ಸುಪ್ರೀತಾ ಕುಲಾಲ್, ಲಕ್ಷ್ಮಿ ಮಂಜು ಬಿಲ್ಲವ, ಪ್ರತಾಪ್ ಹೆಗ್ಡೆ, ರವಿ ಅಮೀನ್, ಕುಂದಾಪುರ ಮಂಡಲ ಕಾರ್ಯದರ್ಶಿ ಭಾಸ್ಕರ ಬಿಲ್ಲವ ಇದ್ದರು. ಶಂಕರ ಅಂಕದಕಟ್ಟೆ ಕಾರ್ಯಕ್ರಮ ನಿರ್ವಹಿಸಿದರು.
*
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದೊಂದಿಗೆ ನಾನು ಸೋತಿದ್ದೇನೆ. ಸೋತಿದ್ದರೂ ಜನ ಪ್ರೀತಿಸುವುದರಿಂದಾಗಿ ಈಗಲೂ ಚಲಾವಣೆಯಲ್ಲಿ ಇದ್ದೇನೆ.
-ಕೆ.ಜಯಪ್ರಕಾಶ ಹೆಗ್ಡೆ,
ಮಾಜಿ ಸಂಸಚ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.