ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕಾರಣಕ್ಕೆ ಹೊಸ ನಡಿಗೆ...

Last Updated 27 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಇಂದಿನ ರಾಜಕಾರಣದ ದುರಂತವನ್ನು ಸ್ವರಾಜ್ ಇಂಡಿಯಾ ಪಕ್ಷದ ‘ಸ್ವರಾಜ್ ಒಳನೋಟ’ (Swaraj Vision) ಕಣ್ಣಿಗೆ ಕಟ್ಟುವಂತೆ ಕಾಣಿಸಿಕೊಡುತ್ತದೆ:

1. ಪ್ರಜಾಪ್ರಭುತ್ವದಲ್ಲಿ ಅಧಿಕಾರ ಜನರಲ್ಲೇ ಇರಬೇಕು. ಆದರೆ ನಮ್ಮ ದೇಶದ ಪ್ರಜಾಪ್ರಭುತ್ವದ ಕಾರ್ಯವೈಖರಿಯು ಜನರಿಂದಲೇ ಅಧಿಕಾರವನ್ನು ಕಿತ್ತುಕೊಳ್ಳುವುದಕ್ಕಾಗಿ ಶ್ರಮಿಸುತ್ತಿದೆ.

2. ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಕುಬ್ಜಗೊಳಿಸಲಾಗಿದೆ. ಇದು ಐದು ವರ್ಷಕ್ಕೊಮ್ಮೆ ಆಳುವವರನ್ನು ಚುನಾಯಿಸುವ ಒಂದು ಪ್ರಯಾಸದ ರೂಢಿಯಾಗಿಬಿಟ್ಟಿದೆ ಹಾಗೂ ರಾಜಕೀಯ ಪಕ್ಷಗಳು, ಚುನಾಯಿತ ಪ್ರತಿನಿಧಿಗಳು ಜನದನಿಯನ್ನು ಅಭಿವ್ಯಕ್ತಿಸುವ  ಮಾಧ್ಯಮವಾಗಿ ಉಳಿದಿಲ್ಲ.

3. ನಾವು ಮೌಲ್ಯಯುತ ಮತ ಅಂದುಕೊಂಡಿರುವ ವೋಟುಗಳನ್ನು ಕಚ್ಚಾ ವಸ್ತು ಎಂಬಂತೆ ಪರಿಗಣಿಸಿ, ಅದರ ಮೇಲೆ ಹೂಡಿಕೆ ಮಾಡಿ ಅಧಿಕಾರ ಪಡೆದು, ಆ ಅಧಿಕಾರದ ಬಲದಿಂದ ಮತ್ತೆ ಹಣ ಮಾಡುವ ಯಂತ್ರವನ್ನಾಗಿ ಭಾರತ ಚುನಾವಣಾ ವ್ಯವಸ್ಥೆಯನ್ನು ವಿನ್ಯಾಸ ಮಾಡಲಾಗಿದೆ.

4. ಹಾಗಾಗಿ ಇದು ಕೇವಲ ವ್ಯಾಪಕ ಭ್ರಷ್ಟಾಚಾರದಿಂದ ಕೂಡಿದ ಒಂದು ವ್ಯವಸ್ಥೆಯಲ್ಲ, ಬದಲಾಗಿ ಭ್ರಷ್ಟಾಚಾರವೇ ಸಾಂಸ್ಥೀಕರಣಗೊಂಡು ತಾನೇ ಒಂದು ವ್ಯವಸ್ಥೆಯಾಗಿಬಿಟ್ಟಿದೆ. ಹಾಗಾಗೇ ಈಗಿರುವ ಆಡಳಿತ ವ್ಯವಸ್ಥೆಯಲ್ಲಿ ನಿಷ್ಠಾವಂತರು ಹಾಗೂ ದಕ್ಷತೆ ಇರುವವರು ಆಳ್ವಿಕೆ ನಡೆಸಿದರೂ ಸ್ವರಾಜ್ ಕನಸು ಈಡೇರದು.
ಈ ನಮ್ಮ ರಾಜಕಾರಣದ ದುರಂತ ವ್ಯವಸ್ಥೆಯನ್ನು ಕಣ್ಮುಂದೆ ತಂದುಕೊಂಡರೆ ಅದು ಹುಲಿಗೆ ಹುಣ್ಣು ಬಂದಂತೆ ಇದೆ.

‘ಹುಲಿಗೆ ಹುಣ್ಣು’ –ಇದೊಂದು ಗಾದೆ ಮಾತು. ಹುಲಿಗೆ ಹುಣ್ಣು ಆದಾಗ ಅದು ತನ್ನ ಗಾಯದ ನೋವನ್ನು ಶಮನ ಮಾಡಿಕೊಳ್ಳಲು, ತನ್ನ ದೇಹದ ಇನ್ನೊಂದು ಭಾಗದಿಂದ ಚರ್ಮವನ್ನು ಕಿತ್ತು ಹುಣ್ಣಾದ ಜಾಗಕ್ಕೆ ಅಂಟಿಸುತ್ತದಂತೆ. ಹೀಗೆ  ಒಂದು ಗಾಯಕ್ಕೆ ಮದ್ದಾಗಿ ಇನ್ನೊಂದು ಗಾಯ. ಹೀಗೆ ವ್ರಣ ಉಲ್ಬಣವಾಗಿಸಿಕೊಳ್ಳುತ್ತ ಭಾರತದ ರಾಜಕಾರಣ ನರಳುತ್ತಿದೆ. ಇದನ್ನು ಗುಣಪಡಿಸುವುದು ಕಡುಕಷ್ಟ ಅನ್ನಿಸುತ್ತದೆ. ಎಲ್ಲರೂ ಭ್ರಷ್ಟತೆಯೇ ವ್ಯವಸ್ಥೆಯಾಗಿರುವುದನ್ನು ಗಮನಿಸದೆ ಹೊಂದಾಣಿಕೆ ಮಾಡಿಕೊಂಡು ಸಾಗುತ್ತಿರುವುದು ಇದಕ್ಕೆ ಕಾರಣವಿರಬಹುದು.

ಮೊನ್ನೆ, ನಮ್ಮಂತೆಯೇ ಆಲೋಚಿಸುವ ಕ್ರಿಯಾಶೀಲರಾದ ನನ್ನ ಗೆಳೆಯ ಶಾಸಕರೊಬ್ಬರನ್ನು ಸ್ವರಾಜ್ ಇಂಡಿಯಾಕ್ಕೆ ಆಹ್ವಾನಿಸಿದೆ. ಅವರಿಗೆ ನಮ್ಮ ಬಗ್ಗೆ ತುಂಬಾ ಪ್ರೀತಿ, ಗೌರವ, ನಂಬಿಕೆಗಳಿವೆ. ನಮ್ಮ ಬಗ್ಗೆ ವಿಶ್ವಾಸ ಇಟ್ಟುಕೊಂಡೇ- ಪ್ರವಾಹದ ವಿರುದ್ಧ ಈಜುವುದು ಕಷ್ಟ ಅಂದರು. ನಾನು ಮುಂದಕ್ಕೆ ಮಾತಾಡಲಿಲ್ಲ. ಆದರೆ ಅವರು ಈಜುತ್ತಿಲ್ಲ ಅನ್ನಿಸಿತು. ಈಜುತ್ತಿದ್ದೇನೆಂದು ಕೈಕಾಲು ಆಡಿಸುತ್ತ, ಪ್ರವಾಹ ಕೊಂಡೊಯ್ದ ಕಡೆ ಹೋಗುವುದು ಇದು ಅನ್ನಿಸಿತು. ಈ ಈಜಿನಲ್ಲಿ ಸುಳಿಗೆ ಸಿಲುಕಿ ಕಳೆದು ಹೋಗಬೇಕಾಗುತ್ತದೆ.  ಹಾಗಾದರೆ ಅನೇಕರು ಅಂದುಕೊಂಡಿರುವಂತೆ, ನಮ್ಮ ಜನಾಂದೋಲನಗಳ ಹಿನ್ನೆಲೆಯ ತಳಪಾಯದ ರಾಜಕಾರಣ ಪ್ರವಾಹದ ವಿರುದ್ಧ ಈಜೆ? ಖಂಡಿತ ಅಲ್ಲ. ಮೊದಲು ಈ ಅಪಕಲ್ಪನೆಯನ್ನು ತೊಡೆದುಹಾಕಬೇಕಾಗಿದೆ. ಪ್ರವಾಹ ಕೊಂಡೊಯ್ದ ಕಡೆ ಕಣ್ಮುಚ್ಚಿಕೊಂಡು ತೇಲಿ ಸುಳಿಗೆ ಬಲಿಯಾಗುವ ರಾಜಕಾರಣವಲ್ಲ ಇದು. ಇದನ್ನು ಮನದಟ್ಟು ಮಾಡಬೇಕಿದೆ. ಆದರಿದು ಹೆಚ್ಚು ಶ್ರಮ ಕೇಳುತ್ತದೆ.

ರಾಜಕಾರಣದಲ್ಲಿ ಶ್ರಮಕ್ಕೆ ಉದಾಹರಣೆಯಾಗಿ ಈಗಷ್ಟೇ ಜರುಗಿದ ಉತ್ತರ ಪ್ರದೇಶದ ಚುನಾವಣೆಯಲ್ಲಿನ ಬಿಜೆಪಿಯ ಗೆಲುವನ್ನೇ ಕೊಡುವೆ. ಬಿಹಾರದ ಚುನಾವಣೆಯಲ್ಲಿ ಬಿಜೆಪಿ ಸೋತು ಮುಖಭಂಗವಾಗಿ ಇದು ಪ್ರಧಾನಿ ಮತ್ತು ಪಕ್ಷದ ಅಧ್ಯಕ್ಷ ಅಮಿತ್ ಷಾ ಅವರಿಗೆ ಪಕ್ಷದ ಹೊರಗೂ ಒಳಗೂ ಜೀವನ್ಮರಣದ ಪ್ರಶ್ನೆಯಾದಾಗ, ಆ ಸೋತ ಗಳಿಗೆಯಿಂದಲೇ ಇವರು ಉತ್ತರ ಪ್ರದೇಶದ ಮುಂಬರುವ ಚುನಾವಣೆಗೆ ಶ್ರಮ ಹಾಕುತ್ತಾರೆ. ಅಳಿವು ಉಳಿವಿನ ಪ್ರಶ್ನೆ ಎಂಬಂತೆ.

ನೆನಪಿರಲಿ, ಚುನಾವಣೆಗೆ ಇನ್ನೂ ವರ್ಷ ಇರುವಾಗಲೇ ಒಂದು ಸಣ್ಣ ಬೂತ್ ಮಟ್ಟದಲ್ಲೂ ಸಾಮ, ದಾನ, ಭೇದ, ದಂಡ- ಹೀಗೆಲ್ಲಾ ಅವರು ಕುತಂತ್ರಗಳ ಶ್ರಮ ಹಾಕದಿದ್ದರೆ ಬಿಜೆಪಿ ಇಷ್ಟೊಂದು ಪ್ರಮಾಣದಲ್ಲಿ ಗೆಲ್ಲುತ್ತಿತ್ತೆ? ಅಥವಾ ಬಿಜೆಪಿ ಕಾರ್ಯಪ್ರವೃತ್ತವಾದ ಗಳಿಗೆಯಿಂದಲೇ ಎಸ್‌ಪಿ, ಬಿಎಸ್‌ಪಿ, ಕಾಂಗ್ರೆಸ್‌ಗಳೂ ಚುನಾವಣೆಗಾಗಿ ಅವರಂತೆಯೇ ಶ್ರಮ ಹಾಕಿದ್ದರೆ ಇವರಿಗೆ ಈ ಬಗೆಯ ಸೋಲು ಆಗುತ್ತಿತ್ತೆ? ಬಿಜೆಪಿ ತನ್ನ ಶ್ರಮಕ್ಕೆ ಫಲ ಪಡೆದಿದೆ. ಇದು ಒಳ್ಳೆಯದೋ ಕೆಟ್ಟದ್ದೋ  ಆಮೇಲಿನ ಮಾತು. ಒಟ್ಟಿನಲ್ಲಿ ಶ್ರಮ ಹಾಕಿದೆ. ನಾವು ಈ ಶ್ರಮವನ್ನು ನೋಡುತ್ತಿಲ್ಲ. ಬದಲಾಗಿ ಆಕಾಶದಲ್ಲಿ ಮೋದಿ ವೇಷದ ಗಾಳಿಪಟ ಹಾರಿಸಿ, ಗೆಲುವಿಗೆ ಇದು ಕಾರಣ ಎಂದು ಅವರು ಅಬ್ಬರಿಸುತ್ತಿರುವುದನ್ನಷ್ಟೇ ನೋಡುತ್ತಿದ್ದೇವೆ. ಮಾರಿಕೊಂಡ ಮಾಧ್ಯಮಗಳ ಮಾಯಾಜಾಲವೂ ಮಂಕುಬೂದಿ ಎರಚುತ್ತಿದೆ. ನಾವು ಈ ವಶೀಕರಣಕ್ಕೆ ಒಳಗಾದವರಂತೆ ಇದ್ದೇವೆ.

ಮಾಡಬಾರದ್ದನ್ನು ಮಾಡಿ ಗೆದ್ದ ಗೆಲುವು ಅದು. ಈ ಗೆಲುವು ನಮಗೆ ಗೆಲುವಲ್ಲ. ಆಡಳಿತ ಪಕ್ಷ, ವಿರೋಧ ಪಕ್ಷ ಎಂಬ ಒಂದೇ ಡ್ರಾಮ ಕಂಪೆನಿಯ ಅದಲು ಬದಲು ರಾಜಕಾರಣವೂ ನಮ್ಮದಲ್ಲ. ಅವರ ಕುತಂತ್ರಕ್ಕೆ ನಾವು ಕುತಂತ್ರ ಮಾಡಬೇಕಿಲ್ಲ. ತಂತ್ರ ಮಾಡಬೇಕು. ಅವರು, ಸಮಾಜದಲ್ಲಿ ಮಲಗಿರುವ ದ್ವೇಷ, ಒಡಕುಗಳನ್ನು ಬಡಿದೆಬ್ಬಿಸಿ ರಾಜಕಾರಣ ಮಾಡಿದರೆ ನಾವು ಅದಕ್ಕೆ ಪ್ರತಿಕ್ರಿಯೆ ತೋರಿಸುತ್ತ ಕಳೆದುಹೋಗುತ್ತಿದ್ದೇವೆ. ಬದಲಾಗಿ ಸಮಾಜದಲ್ಲಿನ ಪ್ರೀತಿ, ಏಕತೆ ಉದ್ದೀಪಿಸಿ ಸೌಹಾರ್ದಕ್ಕೆ ಶ್ರಮಿಸಬೇಕು.

ಹಾಗಾದರೆ ಗೆಲ್ಲುವುದಕ್ಕೆ ನಮ್ಮ ನಡಿಗೆ ಹೇಗಿರಬೇಕು?  ಭ್ರಷ್ಟತೆ ಸಾಂಸ್ಥೀಕರಣಗೊಂಡು ಅದೇ ಸಹಜವೆನ್ನಿಸಿರುವ ಈ ಭೂಗತಜಗತ್‌ ರಾಜಕಾರಣದಲ್ಲಿ ಗೆಲ್ಲುವುದು ಹೇಗೆ? ಉದಾಹರಣೆಗೆ- ನಾನೇ ಚುನಾವಣೆಗೆ ನಿಂತರೆ, ಇವ ಗೆಲ್ಲುವುದಿಲ್ಲ ಅಂತ ಜನರ ಮನಸಿನಲ್ಲಿರುವುದರಿಂದ ಠೇವಣಿ ಕಳೆದುಕೊಳ್ಳುತ್ತೇನೆ. ಆದರೆ, ನಾನು
ಸ್ಪರ್ಧೆ ನೀಡುತ್ತಿದ್ದು ಮೂರನೇ ಸ್ಥಾನದಲ್ಲಿದ್ದೇನೆ ಎಂದು ಮತದಾರರಿಗೆ ಮನದಟ್ಟಾದರೆ, ಆಗ ಮತದಾರರು ತಾರ್ಕಿಕವಾಗಿ ಎರಡನೇ ಸ್ಥಾನಕ್ಕೆ ನಿಲ್ಲಿಸುವುದಿಲ್ಲ, ಬದಲಾಗಿ ಮಾಂತ್ರಿಕ ಗೆಲುವು ತಂದುಕೊಡುತ್ತಾರೆ. ಯಾಕೆಂದರೆ ನಾವು ನಮ್ಮ ಸಾಮರ್ಥ್ಯವನ್ನು ಇಷ್ಟು ಸಾಬೀತುಪಡಿಸಿದರೆ ಹವಾ ಎಲ್ಲರಿಗಿಂತ ಹೆಚ್ಚು ನಮ್ಮ ಕಡೆಗೇ ಬೀಸುತ್ತದೆ. ಹಾಗಾಗಿ ಹಣಬಲ, ತೋಳ್ಬಲ, ಹೆಂಡದ ಆಮಿಷಗಳನ್ನು ಬಳಸದೆ ರಾಜಕಾರಣ ಮಾಡಬಯಸುವ ನಮಗೆ, ನಾವು ಚುನಾವಣಾ ಅಖಾಡದಲ್ಲಿ ಮೂರನೇ ಸ್ಥಾನದಲ್ಲಿದ್ದು ಸ್ಪರ್ಧೆ ಕೊಡುತ್ತಿದ್ದೇವೆಂದು ಮತದಾರರಿಗೆ ಮನದಟ್ಟಾಗಿಸಲು ದಾರಿಗಳನ್ನು ಹುಡುಕಬೇಕಾಗಿದೆ.

ನಮಗೂ ಒಂದು ದಾರಿ ಇದೆ. ಅದೆಂದರೆ, ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ನಮ್ಮ ಅಸ್ತಿತ್ವವನ್ನು ವ್ಯಾಪಕವಾಗಿ ಸ್ಥಾಪಿಸುವುದು. ಉದಾಹರಣೆಗೆ, ರಾಯಚೂರು ಜಿಲ್ಲೆಯಲ್ಲಿ ನವಜೀವನ ಮಹಿಳಾ ಒಕ್ಕೂಟ ಮತ್ತು ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಗಳು ಒಗ್ಗೂಡಿ 474 ಗ್ರಾಮ ಪಂಚಾಯಿತಿ ಕ್ಷೇತ್ರಗಳಲ್ಲಿ ಚುನಾವಣೆಗೆ ಸ್ಪರ್ಧಿಸಿ 268 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿವೆ. ಐದು ಪಂಚಾಯಿತಿಗಳಲ್ಲಿ ಬಹುಮತ ಪಡೆದಿವೆ. ರಾಜಕಾರಣದ ವಾಸ್ತವಕ್ಕೆ ಹೀಗೆ ತಳಪಾಯ ಕಟ್ಟುವುದು ನಮಗೆ ದಾರಿಯಾಗಬೇಕು. ಹಾಗೇ ಎಲ್ಲಾ ಜನಾಂದೋಲನಗಳಿಗೂ ಕೂಡ. ಜನವಷ್ಟೇ ಅಲ್ಲ, ಆ ಜನಗಳ ಮತಗಳೂ ತಮಗಿವೆ ಎಂದಾದಾಗ ಮಾತ್ರವೇ ಜನಾಂದೋಲನಗಳ ಧ್ವನಿಗೂ ಸತ್ವ ಬರುತ್ತದೆ.

ಒಟ್ಟಿನಲ್ಲಿ ತಳಪಾಯದ ರಾಜಕಾರಣವನ್ನು ತಳಪಾಯ ಮಾಡಿಕೊಂಡೇ ನಾವು ಈ  ಭೂಗತಜಗತ್‌ ರಾಜಕಾರಣಕ್ಕೆ ಮುಖಾಮುಖಿಯಾಗಬೇಕಾಗಿದೆ. ಇದಕ್ಕೆ ಆ ಪಕ್ಷ ಈ ಪಕ್ಷಗಳ ಅದಲು ಬದಲು, ಅಧಿಕಾರ- ಆಡಳಿತ ಬದಲಾವಣೆ ಸಾಲದು; ರಾಜಕಾರಣಕ್ಕೇನೇ ಹೊಸ ನಡಿಗೆ ಬೇಕು. ಹಾಗಾಗಿ ಸ್ವರಾಜ್ ಇಂಡಿಯಾ, ಅನ್ವೇಷಣಾ ರಾಜಕಾರಣದತ್ತ ಹೆಜ್ಜೆ ಇಡುತ್ತಿದೆ. ಸಮಾಜದ ಎಲ್ಲಾ ಸಮುದಾಯ, ಕ್ಷೇತ್ರಗಳಿಂದಲೂ ನಾಳಿನ ರಾಜಕಾರಣದ ಯುವಜನ ಹಾಗೂ ಮಹಿಳೆಯರು ಈ ನಡೆಯ ನಾಯಕತ್ವ ವಹಿಸಿಕೊಳ್ಳಬೇಕಾಗಿದೆ. ಯಾವುದೇ ಕೇಂದ್ರೀಕರಣವು ಸರ್ವಾಧಿಕಾರಕ್ಕೆಡೆ ಮಾಡಿ ಅಧಿಕಾರವನ್ನು ವ್ಯಾಘ್ರನನ್ನಾಗಿಸುತ್ತದೆ. ಇದರ ಎದುರು ನಾವು ವಿಕೇಂದ್ರೀಕರಣದ ಪಾರಿವಾಳ ಹಾರಿಸಬೇಕಾಗಿದೆ. ಇದು ಕಷ್ಟ ನಿಜ, ಆದರೆ ಅಸಾಧ್ಯವಲ್ಲ. ಜನಾಂದೋಲನಗಳೂ ಜೊತೆಗೂಡಿ ಈ ದಿಕ್ಕಿನಲ್ಲಿ ನಡೆಯಬೇಕಾಗಿದೆ.

ಲೇಖಕ: ಕಥೆಗಾರ ಹಾಗೂ ‘ಸ್ವರಾಜ್ ಇಂಡಿಯಾ’ ರಾಷ್ಟ್ರೀಯ  ಅಧ್ಯಕ್ಷೀಯ ಮಂಡಳಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT