ಬೆಂಗಳೂರು: ಕ್ರಿಕೆಟಿಗ ಮಹೇಂದ್ರ ಸಿಂಗ್ ದೋನಿ ಅವರು ಶೂ ಜಾಹೀರಾತಿನಲ್ಲಿ ವಿಷ್ಣು ವೇಷಧಾರಿಯಾಗಿ ಕಾಣಿಸಿಕೊಂಡ ವಿವಾದಕ್ಕೆ ಸಂಬಂಧಿಸಿದಂತೆ ಇಂಗ್ಲಿಷ್ ನಿಯತಕಾಲಿಕೆಯ ನಾಲ್ವರು ಉದ್ಯೋಗಿಗಳ ವಿರುದ್ಧದ ವಿಚಾರಣೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
ಈ ಸಂಬಂಧ ‘ಬ್ಯುಸಿನೆಸ್ ಟುಡೆ ಇಂಡಿಯಾ’ ಇಂಗ್ಲಿಷ್ ನಿಯತಕಾಲಿಕೆಯ ಉದ್ಯೋಗಿಗಳಾದ ಚೈತನ್ಯ ಕಲಬಾಗ್, ಸುವೀನ್ ಕೆ. ಸಿನ್ಹಾ, ಆಶೀಶ್ ಬಗ್ಗಾ ಹಾಗೂ ಸಂತೋಷ್ ಖುಷ್ವಾಹ್ ವಿರುದ್ಧದ ಅಧೀನ ನ್ಯಾಯಾಲಯದ ವಿಚಾರಣೆಗೆ ನ್ಯಾಯಮೂರ್ತಿ ಆನಂದ ಬೈರಾರೆಡ್ಡಿ ಅವರಿದ್ದ ಏಕಸದಸ್ಯ ಪೀಠ ಸೋಮವಾರ ತಡೆ ನೀಡಿ ಆದೇಶಿಸಿದೆ.
‘ಬ್ಯುಸಿನೆಸ್ ಟುಡೆ ಇಂಡಿಯಾ ನಿಯತಕಾಲಿಕೆಯ 2013ರ ಏಪ್ರಿಲ್ ಸಂಚಿಕೆಯಲ್ಲಿ ಧೋನಿ ಅವರು, ವಿಷ್ಣುವಿನ ವೇಷಧಾರಿಯಾಗಿ ರಿಬಾಕ್ ಕಂಪೆನಿಯ ಶೂಗಳನ್ನು ಕೈಯಲ್ಲಿ ಹಿಡಿದು ಜಾಹೀರಾತು ನೀಡಿದ್ದಾರೆ. ಇದರಿಂದ ಹಿಂದೂಗಳ ಭಾವನೆಗಳಿಗೆ ಧಕ್ಕೆಯಾಗಿದೆ’ ಎಂದು ಆರೋಪಿಸಿ ಜಯಕುಮಾರ್ ಹಿರೇಮಠ್ ಅಧೀನ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.
ನ್ಯಾಯಪೀಠ ಪ್ರತಿವಾದಿ ಜಯಕುಮಾರ್ ಹಿರೇಮಠ ಅವರಿಗೆ ನೋಟಿಸ್ ಜಾರಿಗೆ ಆದೇಶಿಸಿದೆ. ನಿಯತ ಕಾಲಿಕೆಯ ಪ್ರಧಾನ ಸಂಪಾದಕ ಅರುಣ್ ಪುರಿ ಮತ್ತು ಧೋನಿ ವಿರುದ್ಧದ ಪ್ರಕರಣವನ್ನು ಸುಪ್ರೀಂ ಕೋರ್ಟ್ ಈಗಾಗಲೇ ವಿಲೇವಾರಿ ಮಾಡಿದೆ.