ವಿಶಾಖಪಟ್ಟಣ: ದಿನೇಶ್ ಕಾರ್ತಿಕ್ (93; 98ಎ, 6ಬೌಂ, 1ಸಿ) ಮತ್ತು ನಾರಾಯಣ ಜಗದೀಶನ್ (71; 82ಎ, 4ಬೌಂ, 2ಸಿ) ಅವರ ಅಮೋಘ ಜೊತೆಯಾಟದ ಬಲ ದಿಂದ ತಮಿಳುನಾಡು ತಂಡ ದೇವಧರ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ 73ರನ್ಗಳಿಂದ ಇಂಡಿಯಾ ಬ್ಲೂ ತಂಡವನ್ನು ಮಣಿಸಿದೆ.
ಇದರೊಂದಿಗೆ ವಿಜಯ್ ಹಜಾರೆ ಟ್ರೋಫಿಯಲ್ಲಿ ಚಾಂಪಿಯನ್ ಆಗಿದ್ದ ವಿಜಯ್ ಶಂಕರ್ ಬಳಗದ ಫೈನಲ್ ಕನಸಿಗೆ ಬಲ ಬಂದಂತಾಗಿದೆ. ಈ ತಂಡ ಮೊದಲ ಪಂದ್ಯದಲ್ಲಿ ಇಂಡಿಯಾ ರೆಡ್ ವಿರುದ್ಧ ಸೋಲು ಕಂಡಿತ್ತು.
ವೈ.ಎಸ್. ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ಸೋಮವಾರ ಮೊದಲು ಬ್ಯಾಟ್ ಮಾಡಿದ ತಮಿಳುನಾಡು 50 ಓವರ್ಗಳಲ್ಲಿ 6 ವಿಕೆಟ್ಗೆ 303ರನ್ ಗಳಿಸಿತು.
ಸವಾಲಿನ ಗುರಿ ಬೆನ್ನಟ್ಟುವ ಹಾದಿಯಲ್ಲಿ ಇಂಡಿಯಾ ಬ್ಲೂ ತಂಡ ಬ್ಯಾಟಿಂಗ್ ವೈಫಲ್ಯಕ್ಕೆ ಒಳಗಾಯಿತು. ಹರಭಜನ್ ಸಿಂಗ್ ಸಾರಥ್ಯದ ತಂಡ 44.4 ಓವರ್ಗಳಲ್ಲಿ 230ರನ್ ಪೇರಿಸಲಷ್ಟೇ ಶಕ್ತವಾಯಿತು.
ಇಂಡಿಯಾ ಬ್ಲೂ ತಂಡಕ್ಕೆ ಟೂರ್ನಿ ಯಲ್ಲಿ ಎದುರಾದ ಸತತ ಎರಡನೇ ಸೋಲು ಇದಾಗಿದೆ. ಈ ತಂಡ ಮೊದಲ ಪಂದ್ಯದಲ್ಲಿ ಇಂಡಿಯಾ ರೆಡ್ಗೆ ಮಣಿದಿತ್ತು.
ಬ್ಯಾಟಿಂಗ್ ಆರಂಭಿಸಿದ ತಮಿಳುನಾಡು ತಂಡ 51ರನ್ ಆಗುವಷ್ಟರಲ್ಲಿ ಗಂಗ ಶ್ರೀಧರ್ ರಾಜು (15) ಮತ್ತು ಕೌಶಿಕ್ ಗಾಂಧಿ (34; 29ಎ, 6ಬೌಂ) ಅವರ ವಿಕೆಟ್ ಕಳೆದುಕೊಂಡಿತು. ಹೀಗಾಗಿ ತಂಡದ ಮೇಲೆ ಆತಂಕದ ಕಾರ್ಮೋಡ ಕವಿದಿತ್ತು. ಆದರೆ ಅನುಭವಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ದಿನೇಶ್ ಕಾರ್ತಿಕ್ ಮತ್ತು ನಾರಾಯಣ ಜಗದೀಶನ್ ಅವರು ಮೂರನೇ ವಿಕೆಟ್ ಜೊತೆಯಾಟದಲ್ಲಿ 159ರನ್ ಕಲೆಹಾಕಿ ಆತಂಕ ದೂರ ಮಾಡಿದರು. 28.1 ಓವರ್ಗಳನ್ನು ಎದುರಿಸಿದ ಈ ಜೋಡಿ 5.64ರ ಸರಾಸರಿಯಲ್ಲಿ ರನ್ ಪೇರಿಸಿತು.
ಜಗದೀಶನ್ 71ರನ್ ಗಳಿಸಿದ್ದ ವೇಳೆ ಕೃಣಾಲ್ ಪಾಂಡ್ಯಗೆ ವಿಕೆಟ್ ನೀಡಿದರೆ, ಶತಕದ ಹಾದಿಯಲ್ಲಿ ಸಾಗಿದ್ದ ಕಾರ್ತಿಕ್, ಶಾರ್ದೂಲ್ ಠಾಕೂರ್ ಬೌಲಿಂಗ್ನಲ್ಲಿ ಮನದೀಪ್ ಸಿಂಗ್ಗೆ ಕ್ಯಾಚ್ ನೀಡಿದರು.
ಬಳಿಕ ನಾಯಕ ವಿಜಯ್ ಶಂಕರ್ (23; 24ಎ) ಮತ್ತು ಬಾಬಾ ಇಂದ್ರಜಿತ್ (ಔಟಾಗದೆ 36; 28ಎ, 4ಬೌಂ) ತಂಡದ ಮೊತ್ತ ಹೆಚ್ಚಿಸಿದರು.
ಮಯಂಕ್ ವಿಫಲ: ಗುರಿ ಬೆನ್ನಟ್ಟಿದ ಇಂಡಿಯಾ ಬ್ಲೂ ತಂಡ ಕರ್ನಾಟಕದ ಮಯಂಕ್ ಅಗರ ವಾಲ್ ವಿಕೆಟ್ ಅನ್ನು ಬೇಗನೆ ಕಳೆದು ಕೊಂಡಿತು. ಮಯಂಕ್ 12 ರನ್ ಗಳಿಸಿದ್ದ ವೇಳೆ ಮಹಮ್ಮದ್ ಬೌಲಿಂಗ್ನಲ್ಲಿ ಔಟಾದರು.
ಮನದೀಪ್ ಸಿಂಗ್ (97; 114ಎ, 6ಬೌಂ, 3ಸಿ) ಕೊನೆಯವರೆಗೂ ತಂಡವನ್ನು ಗೆಲುವಿನ ದಡ ಸೇರಿಸಲು ಹೋರಾಡಿದರಾದರೂ ಇತರ ಬ್ಯಾಟ್ಸ್ ಮನ್ಗಳಿಂದ ಅವರಿಗೆ ಸೂಕ್ತ ಬೆಂಬಲ ಸಿಗಲಿಲ್ಲ.
ಸಂಕ್ಷಿಪ್ತ ಸ್ಕೋರ್:
ತಮಿಳುನಾಡು: 50 ಓವರ್ಗಳಲ್ಲಿ 6 ವಿಕೆಟ್ಗೆ 303 (ಕೌಶಿಕ್ ಗಾಂಧಿ 34, ಗಂಗ ಶ್ರೀಧರ್ ರಾಜು 15, ನಾರಾಯಣ ಜಗದೀಶನ್ 71, ದಿನೇಶ್ ಕಾರ್ತಿಕ್ 93, ವಿಜಯ್ ಶಂಕರ್ 23, ಬಾಬಾ ಇಂದ್ರಜಿತ್ ಔಟಾಗದೆ 36; ಶಾರ್ದೂಲ್ ಠಾಕೂರ್ 49ಕ್ಕೆ3, ಸಿದ್ದಾರ್ಥ್್ ಕೌಲ್ 65ಕ್ಕೆ1, ಕೃಣಾಲ್ ಪಾಂಡ್ಯ 65ಕ್ಕೆ1).
ಇಂಡಿಯಾ ಬ್ಲೂ: 44.4 ಓವರ್ಗಳಲ್ಲಿ 230 (ಮಯಂಕ್ ಅಗರವಾಲ್ 12, ಮನದೀಪ್ ಸಿಂಗ್ 97, ಅಂಬಟಿ ರಾಯುಡು 21, ಕೃಣಾಲ್ ಪಾಂಡ್ಯ 36, ಮನೋಜ್ ತಿವಾರಿ 14, ದೀಪಕ್ ಹೂಡಾ 26, ಶಹಬಾಜ್ ನದೀಮ್ 13; ಎಂ. ಮಹಮ್ಮದ್ 41ಕ್ಕೆ1, ರಾಹಿಲ್ ಷಾ 37ಕ್ಕೆ3, ಆರ್. ಸಾಯಿ ಕಿಶೋರ್ 39ಕ್ಕೆ3, ವಾಷಿಂಗ್ಟನ್ ಸುಂದರ್ 40ಕ್ಕೆ1, ಮುರುಗನ್ ಅಶ್ವಿನ್ 43ಕ್ಕೆ1).
ಫಲಿತಾಂಶ: ತಮಿಳುನಾಡು ತಂಡಕ್ಕೆ 73ರನ್ ಗೆಲುವು ಹಾಗೂ 2 ಪಾಯಿಂಟ್ಸ್.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.