ಲಖನೌ: ಸಾರ್ವಜನಿಕರಿಗೆ ಭದ್ರತೆಯನ್ನು ಒದಗಿಸುವ ಜತೆಗೆ ಅಪರಾಧಿಗಳಲ್ಲಿ ನಡುಕ ಹುಟ್ಟಿಸುವಂತೆ ಕೆಲಸ ಮಾಡಬೇಕು ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪೊಲೀಸರಿಗೆ ಆದೇಶಿಸಿದ್ದಾರೆ.
ಲಖನೌನಲ್ಲಿ ನಿನ್ನೆ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಆದಿತ್ಯನಾಥ್, ಪೊಲೀಸರ ಕರ್ತವ್ಯ ನಿರ್ವಹಣೆಯಲ್ಲಿ ಪಾರದರ್ಶಕತೆ ಇರಬೇಕು ಮತ್ತು ಅದು ಭ್ರಷ್ಚಾಚಾರ ಮುಕ್ತವಾಗಿರಬೇಕು ಎಂದು ಹೇಳಿದ್ದಾರೆ.
ಪೊಲೀಸರು ಜನರೊಂದಿಗೆ ನೇರ ಸಂವಹನ ಮಾಡಬೇಕು ಜತೆಗೆ ಚಿಕ್ಕ ಚಿಕ್ಕ ವಿಷಯಗಳ ಬಗ್ಗೆಯೂ ಗಮನ ಹರಿಸಬೇಕು ಎಂದಿದ್ದಾರೆ.
ಗ್ರೇಟರ್ ನೋಯ್ಡಾದಲ್ಲಿ ಆಫ್ರಿಕಾದ ವಿದ್ಯಾರ್ಥಿಗಳ ಮೇಲೆ ಹಲ್ಲೆ ಪ್ರಕರಣ ಮತ್ತು ಸಂತ್ ಕಬೀರ್ ನಗರ್ನಲ್ಲಿ ನಡೆದ ಕಚ್ಛಾ ಬಾಂಬ್ ಸ್ಫೋಟ ಪ್ರಕರಣದ ಬಗ್ಗೆಯೂ ಆದಿತ್ಯನಾಥ್ ಪೊಲೀಸರೊಂದಿಗೆ ಚರ್ಚೆ ನಡೆಸಿದ್ದಾರೆ.
ಪೊಲೀಸರು ತಮ್ಮ ಬ್ಯುಸಿ ಕೆಲಸದ ನಡುವೆ ಒಂದಷ್ಟು ಸಮಯಗಳನ್ನು ಮೀಸಲಿಟ್ಟು ತಮ್ಮ ಸಹೋದ್ಯೋಗಿಗಳೊಂದಿಗೆ ಯಾವುದಾದರೂ ಪ್ರದೇಶದಲ್ಲಿ ಗಸ್ತು ತಿರುಗಿದರೆ ಸಾರ್ವಜನಿಕರಿಗೆ ಸುರಕ್ಷಿತ ಭಾವನೆ ನೀಡಲು ಸಾಧ್ಯ. ಪೊಲೀಸರ ಕಾರ್ಯ ವೈಖರಿ ಹೇಗಿರಬೇಕೆಂದರೆ, ಅಪರಾಧಿ ಮತ್ತು ಸಮಾಜ ಘಾತುಕರಲ್ಲಿ ನಡುಕ ಹುಟ್ಟಿಸುವಂತಿರಬೇಕು.
ಪೊಲೀಸ್ ಇಲಾಖೆಯಲ್ಲಿಯೇ ಅಪರಾಧಿಗಳಿಗೆ ಮತ್ತು ಸಮಾಜಘಾತುಕರಿಗೆ ಬೆಂಬಲ ನೀಡುವ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಆಂತರಿಕವಾಗಿ ಇಲಾಖೆ ಸುಭದ್ರವಾಗಿರಬೇಕು. ಅದೇ ವೇಳೆ ಪೊಲೀಸ್ ಅಧಿಕಾರಿಗಳು ಮತ್ತು ಸಹೋದ್ಯೋಗಿಗಳು ಶಿಸ್ತು ಕಾಪಾಡಬೇಕು.
ರಾಜ್ಯದಲ್ಲಿ ಮಹಿಳೆಯರಿಗೆ ಭದ್ರತೆ ಮತ್ತು ಮಾನವ ಹಕ್ಕುಗಳ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಆದಿತ್ಯನಾಥ್ ಹೇಳಿದ್ದಾರೆ.