ಮಡಿಕೇರಿ: ಡಿವೈಎಸ್ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಮತ್ತೆ ಹೊಸ ತಿರುವು ಸಿಕ್ಕಿದ್ದು, ಸಿಐಡಿ ವರದಿಗೆ ಆಕ್ಷೇಪಣೆ ಸಲ್ಲಿಸಲು ಗಣಪತಿ ಕುಟುಂಬಸ್ಥರಿಗೆ ಅವಕಾಶ ನೀಡಿ ಮಡಿಕೇರಿ ಜೆಎಂಎಫ್ಸಿ ನ್ಯಾಯಾಲಯ ಸೋಮವಾರ ಆದೇಶ ಹೊರಡಿಸಿದೆ.
ಏಪ್ರಿಲ್ 10ರಂದು ಆಕ್ಷೇಪಣೆ ಸಲ್ಲಿಸುವಂತೆ ಗಣಪತಿ ತಂದೆ ಎಂ.ಕೆ. ಕುಶಾಲಪ್ಪ, ತಾಯಿ ಜಾಜಿ ಪೂವಪ್ಪ, ಸಹೋದರ ಎಂ.ಕೆ. ಮಾಚಯ್ಯ ಹಾಗೂ ಸಹೋದರಿ ಸಬಿತಾಗೆ ಸೂಚಿಸಿ ನ್ಯಾಯಾಧೀಶರಾದ ಅನ್ನಪೂರ್ಣೇಶ್ವರಿ ಆದೇಶಿಸಿದರು.
ಗಣಪತಿ ಪುತ್ರ ನೇಹಾಲ್ ‘ಬಿ–ರಿಪೋರ್ಟ್’ ಒಪ್ಪಿಕೊಂಡು ಪ್ರಕರಣದಿಂದ ಹಿಂದೆ ಸರಿಯುವುದಾಗಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು.
ಬಳಿಕ ಖಾಸಗಿ ದೂರಿನ ವಿಚಾರಣೆ ಬಹುತೇಕ ಮುಕ್ತಾಯವಾಗಿತ್ತು.
ಈ ಮಧ್ಯೆ ಕುಟುಂಬಸ್ಥರು ಆಕ್ಷೇಪಣೆಗೆ ಅವಕಾಶ ನೀಡುವಂತೆ ಕೋರಿಕೊಂಡಿದ್ದು ನ್ಯಾಯಾಲಯ ಅವಕಾಶ ನೀಡಿದೆ. ಹಾಗಾಗಿ ಖಾಸಗಿ ದೂರಿಗೆ ಮತ್ತೆ ಮರುಜೀವ ಬಂದಿದೆ.