ದೊಡ್ಡಬಳ್ಳಾಪುರ: 7ನೇ ವೇತನ ಆಯೋಗವನ್ನು ಅಂಚೆ ಇಲಾಖೆಯ ಎಲ್ಲ ನೌಕರರಿಗೂ ಜಾರಿಗೊಳಿಸುವಂತೆ ಆಗ್ರಹಿಸಿ ಏಪ್ರಿಲ್ 25 ರಂದು ನಡೆಯಲಿರುವ ಮುಷ್ಕರದಲ್ಲಿ ಎಲ್ಲರು ಭಾಗವಹಿಸಬೇಕು ಎಂದು ಅಖಿಲ ಭಾರತ ಗ್ರಾಮೀಣ ಅಂಚೆ ಸೇವಕರ ಸಂಘದ ಕೇಂದ್ರ ಸಂಘಟನೆ ವಿಶೇಷ ಪ್ರತಿನಿಧಿ ಕೆ.ಸಿ.ಅಣ್ಣಪ್ಪ ಹೇಳಿದರು.
ಅವರು ನಗರದ ಬೆಸೆಂಟ್ ಪಾರ್ಕ್ನಲ್ಲಿ ಭಾನುವಾರ ಅಖಿಲ ಭಾರತ ಗ್ರಾಮೀಣ ಅಂಚೆ ಸೇವಕರ ಸಂಘದ ಚನ್ನಪಟ್ಟಣ ವಿಭಾಗದ 9ನೇ ದ್ವೈವಾರ್ಷಿಕ ಅಧಿವೇಶನದಲ್ಲಿ ಮಾತನಾಡಿದರು.
ನೌಕರರು ಸಂಘಟಿತರಾಗಿ ಹೋರಾಡಿದಾಗ ನ್ಯಾಯಯುತ ಬೇಡಿಕೆಈಡೇರಲು ಸಾಧ್ಯ. ಯಾವುದೇ ಇಲಾಖೆಯಲ್ಲಿ ನೌಕರರು ಸಂಘಟಿತರಾಗುತ್ತಿದ್ದಾರೆ ಎಂದರೆ ಸಹಜವಾಗಿಯೇ ಅಸಮಾಧಾನ ಇರುತ್ತದೆ. ಇದನ್ನು ಮೀರಿ ನಾವು ಸಂಘಟಿತರಾಗಬೇಕು ಎಂದರು.
ಎಐಪಿಇಯು ವಲಯ ಮಾಜಿ ಕಾರ್ಯದರ್ಶಿ ಎಸ್.ಎಸ್.ಮಂಜುನಾಥ್ ಮಾತನಾಡಿ, ಅಂಚೆ ಇಲಾಖೆಯಲ್ಲಿ ಕೆಳಹಂತದ ನೌಕರರ ಕಷ್ಟಗಳಿಗೆ ಸ್ಪಂದಿಸಬೇಕು. ಅಂಚೆ ಇಲಾಖೆಯಲ್ಲಿ ಮೇಲಿನ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಕೆಲಸ ನಿರ್ವಹಿಸಿದಾಗ ಸೇವೆ ಉತ್ತಮವಾಗಿ ನಡೆಯುತ್ತದೆ. ಉತ್ತಮ ಸೇವೆ ನೀಡಿದಾಗ ಮಾತ್ರ ಜನರಲ್ಲಿ ವಿಶ್ವಾಸ ಮೂಡಲು ಸಾಧ್ಯವಾಗಲಿದೆ ಎಂದರು.
ತಾಪಂ ಉಪಾಧ್ಯಕ್ಷೆ ಮೀನಾಕ್ಷಿಕೆಂಪಣ್ಣ, ಚನ್ನಪಟ್ಟಣ ವಿಭಾಗದ ಅಂಚೆ ಅಧೀಕ್ಷಕ ಬಿ.ಎಸ್. ವೆಂಕಟಾಚಲಭಟ್, ಅಖಿಲ ಭಾರತ ಗ್ರಾಮೀಣ ಅಂಚೆ ಸೇವಕರ ಸಂಘದ ಶಂಕರೇಗೌಡ, ರುದ್ರೇಶ್, ಎಂ.ಎನ್.ಕುರುಹಟ್ಟಿ, ಮೋಹನ್ಕುಮಾರ್ ಹಾಜರಿದ್ದರು.