ಕೋಡಂಬಹಳ್ಳಿ (ಚನ್ನಪಟ್ಟಣ): ಶನಿವಾರ ನೇಣು ಬಿಗಿದು ಗರ್ಭಿಣಿ ಆತ್ಮಹತ್ಯೆ ಘಟನೆಗೆ ಸಂಬಂಧಿಸಿದಂತೆ ಮಹಿಳೆಯ ಸಂಬಂಧಿಕರು ‘ಇದು ಆತ್ಮಹತ್ಯೆಯಲ್ಲ ಕೊಲೆ’ ಎಂದು ಆರೋಪಿಸಿ ಗ್ರಾಮದಲ್ಲಿ ಭಾನುವಾರ ಮೃತದೇಹದ ಎದುರು ಪ್ರತಿಭಟನೆಗೆ ಮುಂದಾದರು.
ನಂದಿನಿ (32) ಆತ್ಮಹತ್ಯೆ ಮಾಡಿಕೊಂಡಿಲ್ಲ, ಆಕೆಯನ್ನು ಕೊಲೆ ಮಾಡಲಾಗಿದೆ. ಆಕೆಯ ಗಂಡನನ್ನು ಸ್ಥಳಕ್ಕೆ ಕರೆಸಿ ಎಂದು ಒತ್ತಾಯಿಸಿ ಸಂಬಂಧಿಕರಾದ ಮಂಡ್ಯ ಜಿಲ್ಲೆಯ ಚಿಕ್ಕಕೊಪ್ಪಲು ಗ್ರಾಮಸ್ಥರು ಪ್ರತಿಭಟನೆಗೆ ಮುಂದಾದರು.
ಕೆಲವು ಮಹಿಳೆಯರು ಧರಣಿಗೆ ಕುಳಿತರು. ಸ್ಥಳದಲ್ಲಿದ್ದ ಪೊಲೀಸರು ಮಹಿಳೆಯರ ಮನವೊಲಿಸಲು ಮುಂದಾದರು. ಇದಕ್ಕೆ ಒಪ್ಪದ ಮಹಿಳೆಯರು ಆಕೆಯ ಗಂಡ ಸ್ಥಳಕ್ಕೆ ಬರಬೇಕು ಎಂದು ಒತ್ತಾಯಿಸಿದರು.
ಸರ್ಕಲ್ ಇನ್ಸ್ಪೆಕ್ಟರ್ ಗೋಪಿನಾಥ್, ಅಕ್ಕೂರು ಎಸ್ಐ ಸದಾನಂದ ಮಹಿಳೆಯರಿಗೆ ತಿಳಿಹೇಳಿ, ಈಗಾಗಲೇ ಮರಣೋತ್ತರ ಪರೀಕ್ಷೆ ನಡೆದಿದೆ. ಅದರ ವರದಿ ಬಂದ ನಂತರ ಸಾವಿಗೆ ಕಾರಣ ತಿಳಿಯಲಿದೆ. ಆನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮನವೊಲಿಸಿದರು. ಬಳಿಕ ಗ್ರಾಮದ ಹೊರವಲಯದ ರುದ್ರಭೂಮಿಯಲ್ಲಿ ಮೃತದೇಹದ ಅಂತ್ಯಕ್ರಿಯೆ ನಡೆಸಲಾಯಿತು.