ಸುಂಟಿಕೊಪ್ಪ: ಸಮೀಪದ ಏಳನೇ ಹೊಸಕೋಟೆ ಮೆಟ್ನಹಳ್ಳಿಯಲ್ಲಿ ಭಾನುವಾರ ಬೆಳಿಗ್ಗೆ ಕಾಡಾನೆಯ ದಾಳಿಯಿಂದ ಸರೋಜಾ ಎಂಬವರು ಸತ್ತಿದ್ದು, ಮೃತರ ನಿವಾಸಕ್ಕೆ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಭೇಟಿ ಮಾಡಿದ್ದು, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
ಕಾಡಾನೆ ದಾಳಿ ಮಾಡಿದ ಸ್ಥಳ ವೀಕ್ಷಿಸಿದರು. ಈ ಸಂದರ್ಭ ಗ್ರಾಮಸ್ಥರು ಆಸುಪಾಸಿನಲ್ಲಿ ಹಗಲು–ರಾತ್ರಿ ಕಾಡಾನೆಗಳ ಓಡಾಟ ಇದೆ. ಮನೆಯಿಂದ ಹೊರಬರಲು ಭಯವಾಗುತ್ತಿದೆ ಎಂದು ಅಳಲು ತೋಡಿಕೊಂಡರು.
ಇದಕ್ಕೆ ಶಾಸಕ ಅಪ್ಪಚ್ಚು ರಂಜನ್ ಅವರು, ಕಾಡಾನೆ ಹಾವಳಿ ನಿಯಂತ್ರಿಸಲು ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಅರಣ್ಯ ಇಲಾಖೆ ಸಿಬ್ಬಂದಿಯೂ ಮುತುವರ್ಜಿ ವಹಿಸಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಆನೆಗಳಿಗೆ ಅರಣ್ಯದಲ್ಲಿಯೇ ಮೇವು ಲಭ್ಯವಾಗುವಂತೆ ಅರಣ್ಯ ಇಲಾಖೆಗೆ ತಾವು, 1000 ಎಕರೆ ಭೂಮಿಯಲ್ಲಿ ಹಲಸು, ಮಾವು, ಬಿದಿರು, ಹತ್ತಿ, ಗೋಳಿ ಮರ ನೆಡುವ ಜೊತೆಗೆ ನೀರು ಒದಗಿಸಲು ಕೆರೆ ನಿರ್ಮಿಸಬೇಕು ಎಂದು ಸಲಹೆ ನೀಡಿದ್ದೇನೆ ಎಂದರು.
ಏಳನೇ ಹೊಸಕೋಟೆ ಉಪಾಧ್ಯಕ್ಷ ಮುಸ್ತಾಪ (ಕುಂಞಕುಟ್ಟಿ) ಮತ್ತು ಬಿಜೆಪಿ ಮುಖಂಡ ವಿಜಯ ಅವರು. ‘ಕಾಡಾನೆಗಳು ಬರದಂತೆ ವೈಜ್ಞಾನಿಕವಾದ ಕಂದಕ ನಿರ್ಮಿಸಬೇಕು’ ಎಂದು ಸಲಹೆ ಮಾಡಿದರು.
ಅಂದಗೋವೆ ಪೈಸಾರಿ ಸಮೀಪದ ನರ್ಸರಿ ಬಳಿ ಮತ್ತು ತೊಂಡೂರು ಮಾರ್ಗವಾಗಿ ಮುಖ್ಯ ರಸ್ತೆಯ ಮೂಲಕ ಈ ಭಾಗಕ್ಕೆ ನೇರವಾಗಿ ಮನೆಗಳ ಸಮೀಪ ಬಂದು ಓಡಾಡುತ್ತಿರುತ್ತವೆ ಎಂದು ಆತಂಕ ವ್ಯಕ್ತಪಡಿಸಿದರು.
‘ಎಲ್ಲ ಭಾಗಗಳಲ್ಲೂ ಕಂದಕ ತೆಗೆಯುವ ವ್ಯವಸ್ಥ ಮಾಡಿಸುತ್ತೇನೆ. ಗ್ರಾಮಸ್ಥರು, ಜನಪ್ರಿನಿಧಿಗಳು ಅರಣ್ಯ ಇಲಾಖೆ ಜೊತೆಗೆ ಸಹಕರಿಸಬೇಕು. ಸರಿಯಾದ ಮಾಹಿತಿಗಳನ್ನು ನೀಡಬೇಕು ಎಂದು ತಿಳಿಸಿದರು.ಕಾಫಿ ಬೆಳೆಗಾರ ದಾಸಂಡ ರಮೇಶ್, ಏಳನೇ ಹೊಸಕೋಟೆ ಬಿಜೆಪಿ ಸ್ಥಾನಿಯ ಸಮಿತಿ ಅಧ್ಯಕ್ಷ ಬಿಜು ಇದ್ದರು.