ಕೆರಗೋಡು: ಕೆರೆಗಳು ಜನರ ಜೀವನಾಡಿಗಳಾಗಿದ್ದು, ಅವುಗಳನ್ನು ಅಭಿವೃದ್ಧಿಪಡಿಸಿ ನೀರನ್ನು ಸಂಗ್ರಹಿಸಿದರೆ ರೈತರ ಬದುಕು ಹಸನಾಗುತ್ತದೆ ಎಂದು ಮಂಡ್ಯ ತಹಶೀಲ್ದಾರ್ ಅಭಿಪ್ರಾಯಪಟ್ಟರು.
ಗ್ರಾಮದ ಬಸ್ ನಿಲ್ದಾಣದಲ್ಲಿ ಕೆರೆ ಹೂಳೆತ್ತುವ ಸಂಬಂಧ ಗುರುವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮಸ್ಥರು, ವೃತ್ತಿಯಲ್ಲಿರು ವವರು ಹಾಗೂ ಅನುಕೂಲಸ್ಥರ ಬಳಿ ಹಣ ಸಂಗ್ರಹಿಸಿ ಕೆರೆ ಹೂಳೆತ್ತಿ ನೀರನ್ನು ಸಂಗ್ರಹಿಸುವ ಕೆಲಸಕ್ಕೆ ಸಹಕಾರ ನೀಡಬೇಕು ಎಂದರು.
ಬಳಿಕ ಮಾತನಾಡಿದ ಮಂಡ್ಯದ ಆರ್ಗ್ಯಾನಿಕ್ ಸಂಸ್ಥೆ ಅಧ್ಯಕ್ಷ ಎಸ್.ಸಿ.ಮಧುಚಂದನ್ ರೈತರ ವ್ಯವಸಾಯಕ್ಕೆ ನೀರು ಬೇಕೇ ಬೇಕು. ಮಳೆಯಿಲ್ಲದೇ ಬರಗಾಲ ಅನುಭವಿಸುತ್ತಿರುವ ರೈತರು ನೀರು ಸಂಗ್ರಹ ಆಗಬೇಕಾದರೆ ಕೆರೆಯನ್ನು ಅಭಿವೃದ್ಧಿಪಡಿಸಿ ಉಳಿಸಬೇಕು ಎಂದರು.
ಮಧುಚಂದನ್ ₹ 25000, ಲೆಕ್ಕ ಪರಿಶೋಧಕ ಅನಂತರಾಮು ₹ 50000, ತಹಶೀಲ್ದಾರ್ ₹ 15,000 ಅನ್ನು ಕೆರೆ ಹೂಳೆತ್ತಲು ನೀಡಿದರು. ಈ ವೇಳೆ ಗ್ರಾಮಸ್ಥರಿಂದಲೂ ಹಣ ಸಂಗ್ರಹಿಸಲಾಯಿತು. ಜಿಲ್ಲಾ ಪಂಚಾಯಿತಿ ಸದಸ್ಯ ಚಂದಗಾಲು ಶಿವಣ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೆ.ಬಿ.ಉಷಾ ಇದ್ದರು.