ಸುಬ್ಬರಾವ್ಗೆ ಬೆಂಬಲ ನೀಡಿಕೆ ಬಗ್ಗೆ ಕಮ್ಯುನಿಸ್ಟ್ ಪಕ್ಷದಲ್ಲಿ ಒಮ್ಮತವಿಲ್ಲ?
ನವದೆಹಲಿ, ಏ. 14– ರಾಷ್ಟ್ರಪತಿ ಸ್ಥಾನಕ್ಕೆ ಶ್ರೀ ಕೆ. ಸುಬ್ಬರಾವ್ ಅವರ ಉಮೇದುದಾರಿಕೆಯನ್ನು ಬೆಂಬಲಿಸುವ ಬಗ್ಗೆ ಕಮ್ಯುನಿಸ್ಟ್ ಪಕ್ಷದಲ್ಲಿ ಭಿನ್ನಾಭಿಪ್ರಾಯ ಉಂಟಾಗಿದೆಯೆಂದು ಹೇಳಲಾಗಿದೆ.
ಏಪ್ರಿಲ್ 23ರಂದು ಕಲ್ಕತ್ತದಲ್ಲಿ ಆರಂಭವಾಗುವ ರಾಷ್ಟ್ರೀಯ ಕೌನ್ಸಿಲ್ನ ಸಭೆಯಲ್ಲಿ ಈ ಪ್ರಶ್ನೆಯು ಚರ್ಚೆಗೆ ಬರುವ ಸಂಭವವಿದೆ. ಹಿರಿಯ ನ್ಯಾಯವಾದಿ ಸೆಟಲ್ವಾಡ್ ಅವರು ಸುಬ್ಬರಾವ್ ಅವರ ಕ್ರಮವನ್ನು ಟೀಕಿಸಿದುದೂ, ಡಾ. ಜಕೀರ್ಹುಸೇನ್ ಅವರ ವಿರುದ್ಧ ಮತ ನೀಡಿದಲ್ಲಿ ಅಲ್ಪಸಂಖ್ಯಾತರಿಗೆ ಅನ್ಯಾಯವೆಸಗಿದಂತಾಗುವುದೆಂದು ಪಕ್ಷದ ಕೆಲವರು ಭಾವಿಸುತ್ತಿರುವುದೂ ಈ ಭಿನ್ನಾಭಿಪ್ರಾಯಕ್ಕೆ ಕಾರಣವೆಂದು ಹೇಳಲಾಗಿದೆ.
ಸುಬ್ಬರಾವ್ ಸ್ಪರ್ಧೆಗೆ ಆಂಧ್ರ ವಕೀಲರ ಸಮರ್ಥನೆ
ಹೈದರಾಬಾದ್, ಏ. 13– ರಾಷ್ಟ್ರಪತಿ ಚುನಾವಣೆಗೆ ಕೆ. ಸುಬ್ಬರಾವ್ರವರು ಸ್ಪರ್ಧಿಸಿದ ಔಚಿತ್ಯವನ್ನು ಎಂ.ಸಿ.ಸೆಟಲ್ವಾಡ್ರವರು ಪ್ರಶ್ನಿಸಿ ನೀಡಿರುವ ಹೇಳಿಕೆಗೆ ಆಂಧ್ರ ಹೈಕೋರ್ಟಿನ 100 ಮಂದಿ ವಕೀಲರು ವಿರೋಧ ವ್ಯಕ್ತಪಡಿಸಿದ್ದಾರೆ.
ಸುಬ್ಬರಾವ್ ಸೋಲುಖಚಿತ: ಮಾಳವೀಯ
ನವದೆಹಲಿ, ಏ. 13– ರಾಷ್ಟ್ರಪತಿಯಾಗುವ ಮೊದಲೇ ನ್ಯಾಯಾಧೀಶರ ವರ್ಗಕ್ಕೆ ‘ಭಾರಿ ಕೆಟ್ಟ ಉದಾರಣೆ’ ಹಾಕಿಕೊಟ್ಟ
ಕೆ. ಸುಬ್ಬರಾವ್ ಅವರನ್ನು ಶಾಸಕರೆಲ್ಲರೂ ಸೋಲಿಸುವುದಷ್ಟೇ ಅಲ್ಲ ‘ಅಂಥ ಅಭ್ಯರ್ಥಿಗಳ ನಡವಳಿಕೆಯನ್ನು ತೀವ್ರ ಪರೀಕ್ಷೆಗೊಳಪಡಿಸುವರು’ ಎಂದು ಮಾಜಿ ಕೇಂದ್ರ ಸಚಿವ ಕೆ.ಡಿ. ಮಾಳವೀಯ ಹೇಳಿದ್ದಾರೆ.
ಟಿಬೆಟ್ ಪ್ರಶ್ನೆ ಕುರಿತು ಉ ಥಾಂಟ್ ಜೊತೆ ಜಯಪ್ರಕಾಶ್ ಚರ್ಚೆ
ನವದೆಹಲಿ, ಏ. 13– ಸರ್ವೋದಯ ನಾಯಕ ಜಯಪ್ರಕಾಶ್ ನಾರಾಯಣ್ರವರು ವಿಶ್ವರಾಷ್ಟ್ರ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಉ ಥಾಂಟ್ರವರನ್ನು ಭೇಟಿಯಾಗಿ ಟಿಬೆಟ್ ಪ್ರಶ್ನೆಯನ್ನು ಚರ್ಚಿಸಿದರೆಂದು ತಿಳಿದುಬಂದಿದೆ.