ಮಾಲೂರು : ‘ಅಂಬೇಡ್ಕರ್ ಸೇರಿದಂತೆ ಮಹಾನ್ ಸಾಧಕರನ್ನು ಆಯಾ ಸಮುದಾಯಗಳಿಗೆ ಸೀಮಿತ ಮಾಡುತ್ತಿರುವುದು ಅತಂಕದ ಸಂಗತಿಯಾಗಿದೆ’ ಎಂದು ಶಾಸಕ ಕೆ.ಎಸ್. ಮಂಜುನಾಥಗೌಡ ಬೇಸರಪಟ್ಟರು.
ಪಟ್ಟಣದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ರಂಗ ಮಂದಿರದಲ್ಲಿ ಶುಕ್ರವಾರ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ದಲಿತ ಪರ ಸಂಘಟನೆಗಳು ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 126 ನೇ ಜಯಂತಿಯನ್ನು ಶಾಸಕ ಕೆ.ಎಸ್.ಮಂಜುನಾಥ್ ಗೌಡ ಉದ್ಘಾಟಿಸಿ ಮಾತನಾಡಿದರು.
‘ಕನಕ ದಾಸ, ಬಸವಣ್ಣ, ಕೈವಾರ ತಾತಯ್ಯ, ಅಂಬೇಡ್ಕರ್ ಸೇರಿದಂತೆ ಮಹಾನ್ ನಾಯಕರನ್ನು ಆಯಾ ಸಮುದಾಯಗಳಿಗೆ ಸೀಮಿತಗೊಳಿಸುವುದು ಸರಿಯಲ್ಲ. ಎಲ್ಲರು ಮಹಾನ್ ನಾಯಕರ ಆದರ್ಶ ಪಾಲಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರ ನೀಡಬೇಕು’ ಎಂದು ಸಲಹೆ ನೀಡಿದರು.
ಅರ್ಹ ಅಂಗವಿಕಲರಿಗೆ ಪುರಸಭೆ ವತಿಯಿಂದ ತ್ರಿಚಕ್ರ ವಾಹನಗಳನ್ನು ವಿತರಿಸಲಾಯಿತು. ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಎಸ್ಸಿ ಮತ್ತು ಎಸ್ಸಿ ಸಮುದಾಯದ ಫಲಾನುಭವಿಗಳಿಗೆ ಮೋಟರ್ ಪಂಪ್ ವಿತರಿಸಲಾಯಿತು. ಸ್ಥಾಯಿ ಸಮಿತಿ ಅಧ್ಯಕ್ಷ ಸೋಮಶೇಖರ್, ಸದಸ್ಯ ಮುರಳಿಧರ್, ಇ.ಒ.ಸಂಜೀವಪ್ಪ, ಮು.ತಿಮ್ಮಯ್ಯ, ಗುಂಡಪ್ಪ, ಶಿಕ್ಷಕ ವೆಂಕಟೇಶ್ ಹಾಜರಿದ್ದರು.