ಮೈಸೂರು ಸಂಪುಟದ ಪುನರ್ರಚನೆಗೆ ಒತ್ತಾಯ ಮಾಡಿ ಹೈಕಮಾಂಡಿಗೆ ಒಬ್ಬರಿಂದ ತಂತಿ
ನವದೆಹಲಿ, ಏ. 15– ಮೈಸೂರು ಮಂತ್ರಿಮಂಡಲದ ಪುನರ್ರಚನೆಯಾಗಬೇಕೆಂದು ಒತ್ತಾಯಪಡಿಸಿ ಶಾಸಕರೊಬ್ಬರು ಕಳುಹಿಸಿರುವ ತಂತಿಯ ಸಂಬಂಧದಲ್ಲಿ ಕಾಂಗ್ರೆಸ್ ಹೈಕಮಾಂಡ್ ಯಾವ ಕ್ರಮವನ್ನೂ ಕೈಗೊಳ್ಳುವ ಸಂಭವವಿಲ್ಲ.
ಇಲ್ಲಿರುವ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಕಚೇರಿಗೆ ಇಂದು ಈ ತಂತಿ ತಲುಪಿತು. ತಮ್ಮ ಬೇಡಿಕೆಗಳು ಈಡೇರದಿದ್ದರೆ ಕಾಂಗ್ರೆಸ್ನಿಂದ ಹೊರಕ್ಕೆ ಹೋಗುವ ಬೆದರಿಕೆಯೇನೂ ಈ ತಂತಿಯಲ್ಲಿಲ್ಲವೆಂದು ಹೇಳಲಾಗಿದೆ.
ಐದನೆ ಯೋಜನೆ ಆರಂಭದಲ್ಲಿ ಭಾರತದ ಅಣು ಶಕ್ತಿ ಕೇಂದ್ರ ಸ್ಥಾಪನೆ ಖಚಿತ
ಬೆಂಗಳೂರು, ಏ. 15– ಐದನೇ ಪಂಚ ವಾರ್ಷಿಕ ಯೋಜನೆಯ ಆರಂಭದಲ್ಲಿ ಭಾರತದ ಹಣದಿಂದ ಭಾರತೀಯರೇ ನಿರ್ಮಿಸಿ, ಆಡಳಿತ ನಡೆಸುವ ಅಣು ಶಕ್ತಿ ಕೇಂದ್ರವನ್ನು ಮದ್ರಾಸ್ ರಾಜ್ಯದ ಕಲ್ಪವಾಕಂನಲ್ಲಿ ಸ್ಥಾಪಿಸಲಾಗುವುದೆಂದು ಕೇಂದ್ರ ಸರ್ಕಾರದ ಅಣುಶಕ್ತಿ ಇಲಾಖೆಯ ಸಚಿವ ಶ್ರೀ ಎಂ.ಎಸ್. ಗುರುಪಾದಸ್ವಾಮಿ ಅವರು ಇಂದು ಇಲ್ಲಿ ತಿಳಿಸಿದರು.
ವಕೀಲರಿಂದ ನ್ಯಾಯಾಲಯ ಬಹಿಷ್ಕಾರ
ಬೆಂಗಳೂರು, ಏ. 15– ನಗರದಲ್ಲಿರುವ ಎಲ್ಲ ನ್ಯಾಯಾಲಯಗಳೂ ಮತ್ತು ಟ್ರಿಬ್ಯೂನಲ್ಗಳೂ ಒಂದೇ ಕಟ್ಟಡದಲ್ಲಿರಬೇಕು. ಅದಕ್ಕೆ ಸರ್ಕಾರ ಸೂಕ್ತ ವ್ಯವಸ್ಥೆ ಮಾಡಬೇಕು ಎಂಬ ತನ್ನ ಎರಡು ದಶಕಗಳ ಹಿಂದಿನ ಬೇಡಿಕೆಯನ್ನು ಈಡೇರಿಸಿಕೊಳ್ಳಲು ಬೆಂಗಳೂರು ಬಾರ್ ಅಸೋಸಿಯೇಷನ್ ಅಂತಿಮ ಕ್ರಮವೊಂದನ್ನು ರೂಪಿಸಿದೆ.
ಈ ಸಂಬಂಧದಲ್ಲಿ ಏಪ್ರಿಲ್ 17ರೊಳಗೆ ಸರ್ಕಾರದಿಂದ ಖಚಿತ ಭರವಸೆಯೊಂದು ದೊರೆಯದೇ ಹೋದರೆ ಏಪ್ರಿಲ್ 19ರಿಂದ ಬಾರ್ನ ಸದಸ್ಯರು ಕೋರ್ಟಿಗೆ ಹಾಜರಾಗುವುದನ್ನು ನಿಲ್ಲಿಸಿಬಿಡುವರು.
ರಾಷ್ಟ್ರಪತಿ ಸ್ಥಾನಕ್ಕೆ ಮೂರು ನಾಮಪತ್ರಗಳು ತಿರಸ್ಕೃತ: ಒಟ್ಟು 17 ಮಂದಿ ಸ್ಪರ್ಧೆ
ನವದೆಹಲಿ, ಏ. 15– ರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸಿ ಡಾ. ಜಾಕೀರ್ ಹುಸೇನ್ ಮತ್ತು ಶ್ರೀ ಕೆ. ಸುಬ್ಬರಾವ್ ಅವರೂ ಸೇರಿ ಒಟ್ಟು ಇಪ್ಪತ್ತು ಮಂದಿ ಅಭ್ಯರ್ಥಿಗಳು ಸಲ್ಲಿಸಿದ್ದ ಮೂವತ್ತು ನಾಮಪತ್ರಗಳ ಪೈಕಿ ಮೂವರ ನಾಮಪತ್ರಗಳು ಇಂದು ಪರಿಶೀಲನೆಯಲ್ಲಿ ತಿರಸ್ಕೃತವಾದವು.