ಚಿಕ್ಕಬಳ್ಳಾಪುರ: ‘ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ದೊರಕಬೇಕೆಂಬ ಮಹದಾಸೆ ಹೊಂದಿದ್ದ ಮಾನವತಾವಾದಿ ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಬದುಕುವ ರೀತಿಯನ್ನು ತೋರಿಸಿದ ಧೀಮಂತ ವಿಚಾರವಾದಿ’ ಎಂದು ಕೆ.ವಿ.ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆ.ವಿ.ನವೀನ್ ಕಿರಣ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಬೊಮ್ಮನಹಳ್ಳಿಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ, ಪರಿವರ್ತನಾ ಟ್ರಸ್ಟ್, ದೇವನಹಳ್ಳಿಯ ಪರಿವರ್ತನಾ ಕಲಾ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಅಂಬೇಡ್ಕರ್ ಅವರ 126ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಜಾತ್ಯತೀತವಾಗಿ ಬದುಕುವ ದಾರಿಯನ್ನು ತೋರಿಸುತ್ತಲೇ ಶಾಸಕಾಂಗ, ಕಾರ್ಯಾಂಗ,ನ್ಯಾಯಾಂಗ ಆಡಳಿತ ಸೇವಾವರ್ಗಕ್ಕೆ ಅಧಿಕಾರದ ತಳಹದಿ ಹಾಕಿದ ಅಂಬೇಡ್ಕರ್ ಅವರು ರೈತಪರ ಹೋರಾಟಗಳಲ್ಲಿ ತೊಡಗಿಸಿಕೊಂಡು ಅನೇಕ ನೀರಾವರಿ ಯೋಜನೆಗಳು ಜಾರಿಗೆ ಶ್ರಮಿಸಿದರು. ಇಂದಿನ ಯುವಪೀಳಿಗೆ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕಿದೆ’ ಎಂದು ತಿಳಿಸಿದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ ಮಾತನಾಡಿ, ‘ಅಂಬೇಡ್ಕರ್ ಅವರು ಅಸ್ಪೃಶ್ಯತೆ ನಿವಾರಣೆ ದಿಟ್ಟ ಹೆಜ್ಜೆ ಇಟ್ಟು ದೀನ ದಲಿತರ ಬಾಳಿನಲ್ಲಿ ಆಶಾಕಿರಣವಾದರು. ಸಮ ಸಮಾಜಕ್ಕಾಗಿ ಹಂಬಲಿಸಿ ಆ ದಿಸೆಯಲ್ಲಿ ಜನಮಾನಸದಲ್ಲಿ ಅರಿವಿನ ಹಣತೆ ಹಚ್ಚುವ ಕೆಲಸ ಮಾಡಿದರು’ ಎಂದರು .
ಸಮತಾ ಸೈನಿಕ ದಳದ ಜಿಲ್ಲಾ ಘಟಕದ ಅಧ್ಯಕ್ಷ ಗುಡಿಬಂಡೆ ಮಂಜುನಾಥ್, ಮುಖಂಡರಾದ ಮುಷ್ಟೂರು ಮುನಿರಾಜ್, ತೌಡನಹಳ್ಳಿ ಶ್ರೀರಾಮ್, ನಾರಾಯಣಸ್ವಾಮಿ, ಬಚ್ಚಪ್ಪ, ಮುನಿತಿಮ್ಮಣ್ಣ, ಜುಂಜಪ್ಪ, ನಾರಾಯಣಸ್ವಾಮಿ, ಮುನಿಯಪ್ಪ, ಕೆ.ಪಿ.ಮುನಿರಾಜ್, ಕೆಂಪರಾಜು ಎಸ್.ಕೆಂಪರಾಜು ಎಂ.ರಾಜಣ್ಣ, ಮುನಿಯಪ್ಪ ಇದ್ದರು.