ಕಳೆದ ಬುಧವಾರ (ಏ.12) ನಸುಕಿನ ವೇಳೆಯಲ್ಲಿ ಜಕ್ಕಲಿ ಗ್ರಾಮದ ತಮ್ಮ ಮನೆ ‘ಪರಾಶಕ್ತಿ’ಯಲ್ಲಿ ನಿಧನರಾದ ರೋಣ ತಾಲ್ಲೂಕಿನ ಮಾಜಿ ಶಾಸಕ ಜ್ಞಾನದೇವ ದೊಡ್ಡಮೇಟಿ (75) ಸರಳ ಸಜ್ಜನಿಕೆಯ ಸಾಕಾರಮೂರ್ತಿಯಾಗಿದ್ದರು. ಕರ್ನಾಟಕ ರಾಜ್ಯ ಏಕೀಕರಣದ ರೂವಾರಿ ಅಂದಾನಪ್ಪ ದೊಡ್ಡಮೇಟಿ ಅವರ ಸುಪುತ್ರರಾಗಿದ್ದ 'ಜ್ಞಾನದೇವ' 'ಮುತ್ತಣ್ಣ' ಎಂದು ಆಪ್ತ ವಲಯದಲ್ಲಿ ಜನಪ್ರಿಯರಾಗಿದ್ದರು.
ಸಂಶೋಧಕ ಡಾ, ಎಂ.ಎಂ. ಕಲಬುರ್ಗಿ, ಸಾಹಿತಿ ಡಾ. ಎಸ್.ಎಂ. ವೃಷಭೇಂದ್ರಸ್ವಾಮಿ, ಕವಿ ಚೆನ್ನವೀರ ಕಣವಿ ಅವರ ಸಹಪಾಠಿಗಳಾಗಿದ್ದ ದೊಡ್ಡಮೇಟಿ ಅವರು ಪತ್ರಕರ್ತ ಡಾ. ಪಾಟೀಲ ಪುಟ್ಟಪ್ಪನವರ ‘ಪ್ರಪಂಚ’ ವಾರಪತ್ರಿಕೆಯಲ್ಲಿ ಉಪಸಂಪಾದಕರಾಗಿ ಕೆಲಸ ಮಾಡಿದ್ದರು. ಅವಧೂತ ಪರಂಪರೆಯ ಸಾಹಿತಿ ಸತ್ಯಕಾಮ ಅವರೊಂದಿಗೆ ಒಡನಾಟ ಹೊಂದಿದ್ದ ಅಪರೂಪದ ರಾಜಕಾರಣಿಯಾಗಿದ್ದರು. ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅವರಿಗೆ ಸರ್ಕಾರ ನೀಡಿದ್ದ ಗೌರವ ಧನ, ಪ್ರಯಾಣ ಭತ್ಯೆ ನಗದನ್ನು ಸರ್ಕಾರಕ್ಕೆ ಹಿಂದಿರುಗಿಸುತ್ತ, ‘ಕನ್ನಡದ ಕೆಲಸಕ್ಕೆ ಕೂಲಿ ಪಡೆಯಬೇಕೆ?’ ಎಂದು ಪತ್ರ ಬರೆದಿದ್ದರು.
1972ರ ಫೆ.21 ರಂದು ಹುಬ್ಬಳ್ಳಿಯ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ಅಂದಾನಪ್ಪನವರು ನಿಧನರಾದ ನಂತರ ಜ್ಞಾನದೇವ ಅವರನ್ನು ಸಾರ್ವಜನಿಕ ಜೀವನಕ್ಕೆ ಎಳೆದು ತರುವ ಪ್ರಯತ್ನಗಳು ಚಾಲನೆ ಪಡೆದುಕೊಂಡವು. ಬೆಳಗಾವಿಯ ಲಿಂಗರಾಜ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದ ಅವರು ಅಲ್ಲಿಯೇ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುವ ಅವಕಾಶ ದೊರೆತಿತ್ತು. ಆದರೆ ರೋಣ ತಾಲ್ಲೂಕಿನ ಜನರ ಒತ್ತಾಯದಿಂದ ರಾಜಕೀಯ ಪ್ರವೇಶಿಸಬೇಕಾಯಿತು. ಜನತಾ ಪಕ್ಷದ ಅಭ್ಯರ್ಥಿಯಾಗಿ 1983 ಮತ್ತು 1985ರಲ್ಲಿ ವಿಧಾನಸಭೆಗೆ ಎರಡು ಬಾರಿ ಚುನಾಯಿತರಾದರು.
ರಾಮಕೃಷ್ಣ ಹೆಗಡೆ ಮಂತ್ರಿ ಪದವಿ ಸ್ವೀಕರಿಸುವಂತೆ ದೊಡ್ಡಮೇಟಿ ಅವರನ್ನು ಎರಡು ಬಾರಿ ಕೋರಿಕೊಂಡರೂ ಅದನ್ನು ನಯವಾಗಿ ತಿರಸ್ಕರಿಸಿದ್ದರು ಎಂಬುದನ್ನು ಇಂದಿನ ಪೀಳಿಗೆ ನಂಬಲಿಕ್ಕಿಲ್ಲ. ಉತ್ತಮ ಸಂಸದೀಯ ಪಟುವಾಗಿದ್ದ ದೊಡ್ಡಮೇಟಿ ಅವರು ವಿಧಾನ ಸಭೆಯಲ್ಲಿ ಮಾತನಾಡಲು ನಿಂತರೆ ಮುಖ್ಯಮಂತ್ರಿ ಆದಿಯಾಗಿ ವಿರೋಧ ಪಕ್ಷದ ನಾಯಕರೂ ಗಮನವಿಟ್ಟು ಕೇಳಿಸಿಕೊಳ್ಳುತ್ತಿದ್ದರು ಎಂಬುದು ಸದನದ ದಾಖಲೆಗಳಲ್ಲಿ ಅನುರಣಿಸುತ್ತಿದೆ.
ಮೊದಲ ಬಾರಿಗೆ ಅವರು ಶಾಸಕರಾದಾಗ ರಾಜ್ಯದ ಎಲ್ಲ ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿನ ಅಧಿಕಾರಿಗಳನ್ನು ವರ್ಗಾಯಿಸುವ ನಿರ್ಧಾರವನ್ನು ಸರ್ಕಾರ ಕೈಗೊಂಡಿತು. ಆಗ ರೋಣದ ತಹಶೀಲ್ದಾರ್ ಆಗಿದ್ದ ಚೆನ್ನಮಲ್ಲಯ್ಯ ಮರಡಿ ಅವರು ಪ್ರಾಮಾಣಿಕ ಅಧಿಕಾರಿಗಳೆಂದು ಜನಾನುರಾಗಿಗಳಾಗಿದ್ದರು. ಅವರ ನಿವಾಸಕ್ಕೆ ನೇರವಾಗಿ ಹೋಗಿದ್ದ ಶಾಸಕ ದೊಡ್ಡಮೇಟಿ ಅವರು ‘ನಮ್ಮ ಸರ್ಕಾರದ ನೀತಿಯಂತೆ ನಿಮ್ಮನ್ನು ವರ್ಗಾಯಿಸಲಾಗುತ್ತದೆ ಎಂದು ತಿಳಿದು ಬಂದಿದೆ. ಆದರೆ ಜನರು ನಿಮ್ಮ ಸೇವೆಯನ್ನು ಅಪೇಕ್ಷಿಸುತ್ತಿದ್ದಾರೆ, ನೀವು ಇಚ್ಛೆ ಪಟ್ಟರೆ ಇಲ್ಲಿಯೇ ನಿಮ್ಮನ್ನು ಮುಂದುವರಿಸುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುತ್ತೇನೆ. ನನ್ನ ಹೆಸರು ಹೇಳಿ ಯಾರೇ ಬಂದರೂ ಕಾನೂನು ಬದ್ಧವಲ್ಲದ ಕೆಲಸ ಮಾಡಿಕೊಡಬೇಡಿ’ ಎಂದು ಹೇಳಿದ್ದನ್ನು ಧಾರವಾಡದಲ್ಲಿ ನೆಲೆಸಿರುವ ನಿವೃತ್ತ ಅಧಿಕಾರಿ ಮರಡಿ ನೆನಪಿಸಿಕೊಳ್ಳುತ್ತಾರೆ.
ಈಚೆಗೆ ಜಕ್ಕಲಿಯ ತಮ್ಮ ನಿವಾಸದಲ್ಲಿ ಮಾತನಾಡಿದ್ದ ದೊಡ್ಡಮೇಟಿ ಅವರು ‘ಹೆಗಡೆ ಅವರ ಚರಿಶ್ಮಾ (ವರ್ಚಸ್ಸು) ಮತ್ತು ದೇವೇಗೌಡರ ಸಂಘಟನೆ, ಎಂ.ಪಿ. ಪ್ರಕಾಶ, ಪಿ.ಜಿ.ಆರ್. ಸಿಂಧ್ಯಾ, ನಾಗೇಗೌಡ, ಭೈರೇಗೌಡ ಮುಂತಾದವರ ಚುರುಕುತನದ ಜೊತೆಗೆ ರೈತ ಚಳವಳಿ, ದಲಿತ ಚಳವಳಿ ಕಾವು ಮೇಳೈಸಿದ್ದರಿಂದ ಹಾಗೂ ಎಸ್. ನಿಜಲಿಂಗಪ್ಪನವರ ಮಾರ್ಗದರ್ಶನ ದೊರೆತದ್ದರಿಂದ 1980ರ ದಶಕದಲ್ಲಿ ಪರ್ಯಾಯ ರಾಜಕಾರಣದ ಪ್ರಯೋಗ ಉಂಟಾಗಿತ್ತು. ಜನತಾ ಪಕ್ಷದ ನೇಗಿಲು ಹೊತ್ತ ರೈತನ ಚಿಹ್ನೆ ಇತರ ಪಕ್ಷಗಳ ಚಿಹ್ನೆಗಳಿಗಿಂತ ಜನರನ್ನು ಸೆಳೆದಿತ್ತು. ನಂತರ ಪಕ್ಷದ ಒಡಕಿನಿಂದಾಗಿ ಮತದಾರರು ಇಟ್ಟಿದ್ದ ವಿಶ್ವಾಸಕ್ಕೆ ದ್ರೋಹ ಉಂಟಾಯಿತು' ಎಂದು ಅಂದಿನ ರಾಜಕಾರಣವನ್ನು ವಿಶ್ಲೇಷಿಸಿದ್ದರು.
ರಾಜಕೀಯ ಗುಂಪುಗಾರಿಕೆ ನಡೆಸಲು ಮುಖಂಡರು ಏರ್ಪಡಿಸುತ್ತಿದ್ದ ಭೋಜನ ಕೂಟಗಳಿಗೆ ತಾವು ಹೋಗುತ್ತಿರಲಿಲ್ಲ. ಇದರಿಂದ ದೊಡ್ಡ ಗೌಡರು ನನ್ನನ್ನು ಹೆಗಡೆ ಅವರ ಕಡೆಯವನೆಂದು ಅನುಮಾನಿಸುತ್ತ ಏನು ಗುರು? ಎಂದು ಆಗಾಗ ಮಾತನಾಡಿಸುತ್ತಿದ್ದರು. ಪಂಚಾಯತ್ ರಾಜ್ ಮಸೂದೆ ರೂಪಿಸುವಾಗ ಶಾಸಕರ ಅಧಿಕಾರಕ್ಕೆ ಕುತ್ತು ಬರುತ್ತದೆ ಎಂದು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು ಕೆಲವು ಶಾಸಕರು ನನ್ನನ್ನು ಕರೆದಿದ್ದರು. ‘ಜನರ ಅಧಿಕಾರವನ್ನು ಜನರಿಗೆ ನೀಡಿದರೆ ನಮಗೇನು ನಷ್ಟ?’ ಎಂದು ಅವರನ್ನು ಪ್ರಶ್ನಿಸಿದ್ದೆ. ‘ಚುನಾವಣೆಯಲ್ಲಿ ಗೆಲ್ಲಲು ನಮ್ಮ ಸಹಾಯ ನಿಮಗೆ ಬೇಕಿಲ್ಲವೆ, ನಮ್ಮ ಮುಖ ನೋಡಿ ಜನರು ನಿಮ್ಮನ್ನು ಗೆಲ್ಲಿಸಿದ್ದಾರೆ’ ಎಂದು ಗೌಡರ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ಮುಖಂಡರು ಹೇಳಿದ್ದರು. ಇದಕ್ಕೆ ‘ಏಕೆ, ನಮಗೆ ಸ್ವಂತ ವ್ಯಕ್ತಿತ್ವವಿಲ್ಲವೆ? ನನ್ನ ಕ್ಷೇತ್ರದ ಜನರು ಹೆಗಡೆ ಅಥವಾ ಗೌಡರ ಮುಖಗಳಿಗಿಂತ ನನ್ನ ಮುಖ ನೋಡಿ ಮತ ನೀಡಿದ್ದಾರೆ’ ಎಂದು ಉತ್ತರಿಸಿದ್ದುದನ್ನು ತಮ್ಮ ನೆನಪಿನ ಬುತ್ತಿಯಿಂದ ಹಂಚಿಕೊಂಡರು.
ಪತ್ನಿ ಕುಸುಮಾದೇವಿ ಅವರು ಕಟ್ಟಿಕೊಡುತ್ತಿದ್ದ ಬಿಳಿ ಜೋಳದ ರೊಟ್ಟಿ, ಗುರೆಳ್ಳು ಚಟ್ನಿ ಪುಡಿ ಬುತ್ತಿ ಕಟ್ಟಿಕೊಂಡು ವಿಧಾನಸಭೆ ಅಧಿವೇಶನಕ್ಕೆ ಹಾಜರಾಗಲು ಸರ್ಕಾರಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದುದನ್ನು ನೋಡಿರುವ ಜಕ್ಕಲಿಯ ಗ್ರಾಮಸ್ಥರು ಅವರ ಸರಳತೆಯನ್ನು ಇಂದಿಗೂ ಸ್ಮರಿಸಿಕೊಳ್ಳುತ್ತಾರೆ. 1990ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎದುರು ಸೋತ ಸಂದರ್ಭದಲ್ಲಿ ವಾರಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿದ್ದ ನಿರ್ಗಮಿತ ಮುಖ್ಯ ಮಂತ್ರಿ ರಾಮಕೃಷ್ಣ ಹೆಗಡೆ ‘ಚುನಾವಣೆಯಲ್ಲಿ ಜನತಾ ಪರಿವಾರದ ವಿರುದ್ಧ ಬೀಸಿದ ಅಲೆಯಲ್ಲಿ ನಮ್ಮ ಘಟಾನುಘಟಿಗಳು ಸೋಲಬೇಕಾಯಿತು. ಆದರೆ ಯಾವ ಕಾಲಕ್ಕೂ, ಯಾರಿಂದಲೂ ಏನನ್ನೂ ಬಯಸದ ದೊಡ್ಡಮೇಟಿ ಅವರು ಸೋತದ್ದು ನೋವು ಉಂಟುಮಾಡಿದೆ' ಎಂದು ವಿಷಾದಿಸಿದ್ದರು.
ರಾಜಕೀಯ ನಿವೃತ್ತಿ ಪಡೆಯುವಾಗ ದೊಡ್ಡಮೇಟಿ ಅವರ ಸಹೋದರನ ಪುತ್ರ ರವೀಂದ್ರನಾಥ ಅವರಿಗೆ ಅವಕಾಶ ಕೊಡಿಸಬೇಕೆಂದು ಅಭಿಮಾನಿಗಳು ಆಗ್ರಹಿಸಿದ್ದರು. ಆದರೆ ರಾಜಕೀಯ ಅಧಿಕಾರ ವಂಶಪಾರಂಪರ್ಯದ ಬಳುವಳಿ ಆಗಬಾರದು ಎಂದು ಜನರಿಗೆ ತಿಳಿ ಹೇಳಿ ಸೂಡಿ ಗ್ರಾಮದ ಶ್ರೀಶೈಲಪ್ಪ ಬಿದರೂರರಿಗೆ ಅವಕಾಶ ಕೊಡಿಸಿದ್ದರು. ಗೆದ್ದು ಶಾಸಕರಾದ ಮೇಲೆ ಬಿದರೂರ ನಿಷ್ಠರಾಗಿ ಉಳಿಯದಿದ್ದರೂ ಆ ಕುರಿತು ಯಾವುದೆ ಬೇಸರ ವ್ಯಕ್ತಪಡಿಸದಿದ್ದುದು ದೊಡ್ಡಮೇಟಿ ಅವರ ಗುಣಕ್ಕೆ ಸಾಕ್ಷಿಯಾಗಿದೆ. ರಾಜಕೀಯ ವ್ಯವಸ್ಥೆಯಲ್ಲಿ ಮೌಲ್ಯ ಕಣ್ಮರೆಯಾಗುತ್ತಿರುವ ವರ್ತಮಾನದಲ್ಲಿ ದೊಡ್ಡಮೇಟಿ ಅವರ ಪ್ರಾಮಾಣಿಕತೆ ಮತ್ತು ಆದರ್ಶ ಅನುಕರಣೀಯವಾಗಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.